;Resize=(412,232))
ಹನೂರು : ಅರಣ್ಯ ಅಧಿಕಾರಿಗಳ ಗುಂಡೇಟಿಗೆ ಬಲಿಯಾದ ಮೂವರು ಅಮಾಯಕರು. ಹಸು ಹುಡುಕಲು ಅರಣ್ಯಕ್ಕೆ ತೆರಳಿದ್ದರು. ಇವರನ್ನು ಕೊಂದ ಅರಣ್ಯ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕೆಂದು ಬಿಜೆಪಿ ಸತ್ಯಶೋಧನಾ ಸಮಿತಿಯ ಅಧ್ಯಕ್ಷ ಎನ್.ಮಹೇಶ್ ಹೇಳಿದರು.
ಮೃತರ ಮನೆಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಮಾಜಿ ಸಚಿವರು, ‘ಮೂವರು ಅಮಾಯಕರು ಅರಣ್ಯ ಇಲಾಖೆಯ ಗುಂಡೇಟಿಗೆ ಬಲಿಯಾಗಿದ್ದಾರೆ. ಹೀಗಾಗಿ ನಿಷ್ಪಕ್ಷಪಾತವಾಗಿ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು. ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದ ಬಳಿಕ ಬಿಜೆಪಿ ನಾಯಕರಿಗೆ ವರದಿ ಸಲ್ಲಿಸಲಿದ್ದೇವೆ’ ಎಂದರು.
ಮಂಗಳವಾರ ಸತ್ಯಶೋಧನೆಗಿಳಿದ ಬಿಜೆಪಿ ನಿಯೋಗ, ಮೃತ ಕುಮಾರ್, ಆಂತೋಣಿಸ್ವಾಮಿ, ಪೀಟರ್ ಮನೆಗಳಿಗೆ ತೆರಳಿ ಕುಟುಂಬದ ಹಿನ್ನೆಲೆ, ಆರ್ಥಿಕ ಸ್ಥಿತಿಗತಿ, ಮಕ್ಕಳ ಶಿಕ್ಷಣ ಸೇರಿ ಹಲವು ಮಾಹಿತಿ ಸಂಗ್ರಹಿಸಿತು.
ಮೃತ ಆಂತೋಣಿಸ್ವಾಮಿ ಪತ್ನಿ ಲೂರ್ದಾಮೇರಿ ಬಿಜೆಪಿ ನಿಯೋಗದ ಜೊತೆ ಮಾತನಾಡಿ, ನನ್ನ ಪತಿ ರೈತನಾಗಿದ್ದು, 2 ಹಸುಗಳು ಸಂಜೆಯಾದರೂ ಬರದಿದ್ದರಿಂದ ಹುಡುಕಲು ಕುಮಾರ್, ಪೀಟರ್, ಮಹಿಮ ದಾಸ್ ಜೊತೆ ತೆರಳಿದ್ದರು. ಆದರೆ, ಅರಣ್ಯ ಇಲಾಖೆ ಅವರನ್ನು ಅಮಾನುಷವಾಗಿ ಕೊಂದಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅಲವತ್ತುಕೊಂಡರು.
ಮೃತ ಕುಮಾರ್ ಪತ್ನಿ ಡೊಮಿನೊ ಲಿಯಾ ಮಾತನಾಡಿ, ತನ್ನ ಪತಿ ಕೊಂದವರಿಗೆ ಕಠಿಣ ಶಿಕ್ಷೆ ಕೊಡಬೇಕು. ಕೊಂದವನ ಮುಖವನ್ನು ತನ್ನ ಮಕ್ಕಳಿಗೆ ತೋರಿಸಬೇಕು ಎಂದರು.
ಸತ್ಯಶೋಧನಾ ಸಮಿತಿಯಲ್ಲಿ ಮಹೇಶ್ ಜೊತೆ ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ ಕುಮಾರ್, ಲಕ್ಷ್ಮೀ ಅಶ್ವಿನಿ ಗೌಡ, ಮುಖಂಡ ಹನೂರು ವೆಂಕಟೇಶ್ ಹಾಜರಿದ್ದರು.
ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೂ ಚಾಮರಾಜನಗರ ಸಂಸದ ಸುನಿಲ್ ಬೋಸ್ ತಲಾ 1 ಲಕ್ಷ ರು. ಪರಿಹಾರ ವಿತರಿಸಿದರು.
ವನ್ನು ಸಂಸದ ಸುನೀಲ್ ಬೋಸ್ ವಿತರಿಸಿದರು. ಮಂಗಳವಾರ ಮೃತರ ಮನೆಗಳಿಗೆ ತೆರಳಿದ ಸಂಸದರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ವೈಯಕ್ತಿಕವಾಗಿ ಚೆಕ್ ಹಸ್ತಾಂತರಿಸಿದರು. ಕುಟುಂಬಸ್ಥರ ಅಳಲು ಆಲಿಸಿದ ಅವರು, ‘ನಿಮ್ಮ ನೋವಿನಲ್ಲಿ ನಾವೂ ಇದ್ದೇವೆ’ ಎಂದು ಧೈರ್ಯ ತುಂಬಿದರು.
ಗುಂಡೇಟಿನಿಂದ ಪಾರಾಗಿ ತಲೆಮರೆಸಿಕೊಂಡಿರುವ ಮಹಿಮಾದಾಸ್ ಮನೆಗೂ ಬಿಜೆಪಿ ನಿಯೋಗ ತೆರಳಿತು. ಅಲ್ಲಿ ದಾಸ್ ಪತ್ನಿ, ಪುತ್ರಿ ಜೊತೆ ಮಾತನಾಡಿತು. ಅರಣ್ಯ ಪ್ರದೇಶದಿಂದ ಬಂದ ಮಹಿಮಾ ದಾಸ್ ಹೊಟ್ಟೆ ನೋವಿನಿಂದ ನರಳುತ್ತಿದ್ದರು. ವಾಹನ ಒಂದರಲ್ಲಿ ತಮ್ಮ ಸಂಬಂಧಿಕರು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ದಾಸ್ ನಮ್ಮ ಸಂಪರ್ಕದಲ್ಲಿಲ್ಲ ಎಂದು ಮನೆವಯರು ತಿಳಿಸಿದ್ದಾರೆ.