ಒಳ ಮೀಸಲು ಜಾರಿತನಕ ನೇಮಕಾತಿ, ಬಡ್ತಿಗೆ ತಡೆ ! ಸಿಎಂ ನೇತೃತ್ವ ಸಭೇಲಿ ಮಹತ್ವದ ನಿರ್ಧಾರ

ಸಾರಾಂಶ

ಒಳಮೀಸಲಾತಿ ಸಂಬಂಧ ರಚಿಸಲಾಗಿರುವ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದ ಸಮಿತಿ ವರದಿ ನೀಡಿ ಒಳಮೀಸಲಾತಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವವರೆಗೆ ಯಾವುದೇ ರೀತಿಯ ನೇಮಕಾತಿ, ಬಡ್ತಿ ಸೇರಿ ಇನ್ನಿತರ ಪ್ರಕ್ರಿಯೆಗಳನ್ನು ನಡೆಸದಿರಲು ಸರ್ಕಾರ ನಿರ್ಧರಿಸಿದೆ.

  ಬೆಂಗಳೂರು : ಒಳಮೀಸಲಾತಿ ಸಂಬಂಧ ರಚಿಸಲಾಗಿರುವ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದ ಸಮಿತಿ ವರದಿ ನೀಡಿ ಒಳಮೀಸಲಾತಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವವರೆಗೆ ಯಾವುದೇ ರೀತಿಯ ನೇಮಕಾತಿ, ಬಡ್ತಿ ಸೇರಿ ಇನ್ನಿತರ ಪ್ರಕ್ರಿಯೆಗಳನ್ನು ನಡೆಸದಿರಲು ಸರ್ಕಾರ ನಿರ್ಧರಿಸಿದೆ.

ಜತೆಗೆ, ಈ ವಾರದೊಳಗೆ (ಬುಧವಾರ) ಮಧ್ಯಂತರ ವರದಿ ನೀಡುವಂತೆ ಸಭೆಯಲ್ಲಿ ಹಾಜರಿದ್ದ ವರದಿ ಹೊಣೆಗಾರಿಕೆ ಹೊಂದಿರುವ ನ್ಯಾ. ನಾಗಮೋಹನದಾಸ್‌ ಅವರಿಗೆ ಸೂಚಿಸಲಾಯಿತು. ಅದಾದ ನಂತರ ಸಂಪೂರ್ಣ ಸಮೀಕ್ಷೆ ನಡೆಸಿ ಒಂದು ತಿಂಗಳೊಳಗೆ ಅಂತಿಮ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ. ಅಲ್ಲದೆ, ನಾಗಮೋಹನ ದಾಸ್‌ ನೇತೃತ್ವದ ಆಯೋಗ ಸಲ್ಲಿಸುವ ಒಳಮೀಸಲಾತಿ ಕುರಿತ ವರದಿಯನ್ನು ಸಚಿವ ಸಂಪುಟಕ್ಕಿಟ್ಟು, ಅಲ್ಲಿ ನಿರ್ಧಾರ ತೆಗೆದುಕೊಂಡು ಜಾರಿಗೊಳಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.

ಪರಿಶಿಷ್ಟ ಜಾತಿ/ಪಂಗಡಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಅವರ ಕಾವೇರಿ ನಿವಾಸದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ನೇಮಕಾತಿ, ಬಡ್ತಿಗೆ ತಡೆ:

ಒಳ ಮೀಸಲಾತಿ ಜಾರಿಯಾಗುವವರೆಗೂ ಸರ್ಕಾರದ ಇಲಾಖೆ, ನಿಗಮ-ಮಂಡಳಿ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ನೇಮಕಾತಿ, ಬಡ್ತಿ ಪ್ರಕ್ರಿಯೆ ನಡೆಸದಂತೆಯೂ ಸಭೆಯಲ್ಲಿ ನಿರ್ಧರಿಸಲಾಗಿದೆ. ಸದ್ಯ ನೇಮಕಾತಿ ಪ್ರಕ್ರಿಯೆ ನಡೆಸಿದರೆ ಒಳ ಮೀಸಲಾತಿ ಜಾರಿ ನಂತರ ಸಮಸ್ಯೆಯಾಗಲಿದೆ. ಯಾವುದೇ ಒಂದು ಸ್ಥಾನಕ್ಕೆ ನೇಮಕಾತಿ ಮಾಡಿದರೆ ಅಥವಾ ಬಡ್ತಿ ನೀಡಿದರೆ ಅಲ್ಲಿಗೆ ಒಳಮೀಸಲಾತಿ ಅಡಿ ಅರ್ಹತೆ ಹೊಂದಿರುವ ಪರಿಶಿಷ್ಟ ಜಾತಿ ಅಥವಾ ಪಂಗಡದವರನ್ನು ನೇಮಿಸಬೇಕಾದ ಸಂದರ್ಭದಲ್ಲಿ ಸಮಸ್ಯೆ ಉಂಟಾಗಲಿದೆ. ಹೀಗಾಗಿ ಒಳಮೀಸಲಾತಿ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವವರೆಗೆ ಸರ್ಕಾರದ ಎಲ್ಲ ಇಲಾಖೆ, ನಿಗಮಗಳಲ್ಲಿ ನೇಮಕಾತಿ ಮತ್ತು ಬಡ್ತಿ ತಡೆ ಹಿಡಿಯುವ ಅಭಿಪ್ರಾಯ ವ್ಯಕ್ತವಾಯಿತು. ಅದಕ್ಕೆ, ಮುಖ್ಯಮಂತ್ರಿ ಅವರೂ ಸಮ್ಮತಿಸಿದರು.

ಎಂಪರಿಕಲ್‌ ಡಾಟಾ ಪಡೆಯಲು ಸೂಚನೆ:

ಇಲಾಖೆ, ನಿಗಮ ಮಂಡಳಿಗಳು ಸೇರಿ ಸರ್ಕಾರಿ ಸಂಸ್ಥೆಗಳಲ್ಲಿ ಎಷ್ಟು ಮಂದಿ ಪರಿಶಿಷ್ಟ ಜಾತಿ/ಪಂಗಡದ ನೌಕರರಿದ್ದಾರೆ ಎಂಬ ವೈಜ್ಞಾನಿಕ ಮಾಹಿತಿಯನ್ನೊಳಗೊಂಡ ಎಂಪರಿಕಲ್‌ ಡಾಟಾ ಪಡೆಯುವಂತೆ ಸಭೆಯಲ್ಲಿದ್ದ ನ್ಯಾ. ನಾಗಮೋಹನ ದಾಸ್‌ ಅವರಿಗೆ ತಿಳಿಸಲಾಯಿತು. ಅದರ ಆಧಾರದಲ್ಲಿ ವರದಿ ಸಿದ್ಧಪಡಿಸಿ, ಎಸ್ಸಿ/ಎಸ್ಟಿ ನೌಕರರ, ಅವರ ಉಪಜಾತಿಗಳ ನಿಖರ ಮಾಹಿತಿಯನ್ನೊಳಗೊಂಡ ವರದಿ ಸಿದ್ಧಪಡಿಸಿ, ಸಲ್ಲಿಸುವಂತೆ ಸೂಚಿಸಲಾಯಿತು.

ಸಭೆಯಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್‌, ಡಾ.ಎಚ್‌.ಸಿ.ಮಹದೇವಪ್ಪ, ಕೆ.ಎಚ್‌.ಮುನಿಯಪ್ಪ, ಆರ್‌.ಬಿ.ತಿಮ್ಮಾಪುರ್‌, ಪ್ರಿಯಾಂಕ್‌ ಖರ್ಗೆ, ಶಿವರಾಜ ತಂಗಡಗಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಇತರರಿದ್ದರು.

ಒಳಮೀಸಲಾತಿ ಜಾರಿಗೆ ಸರ್ಕಾರ ಬದ್ಧವಾಗಿದ್ದು, ಅದಕ್ಕೆ ಸಂಬಂಧಿಸಿ ರಚಿಸಲಾಗಿರುವ ನ್ಯಾ. ನಾಗಮೋಹನದಾಸ್ ಸಮಿತಿ ವಾರದೊಳಗೆ ಮಧ್ಯಂತರ ವರದಿ ಸಲ್ಲಿಸಲಿದೆ. ಅದಾದ ನಂತರ ಒಂದು ತಿಂಗಳಲ್ಲಿ ಅಂತಿಮ ವರದಿ ಸಲ್ಲಿಸುವುದಾಗಿ ನ್ಯಾ.ನಾಗಮೋಹನದಾಸ್‌ ತಿಳಿಸಿದ್ದಾರೆ. ವರದಿ ಸಲ್ಲಿಸಿದ ನಂತರ ಒಳಮೀಸಲಾತಿಗೆ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

- ಡಾ. ಎಚ್‌.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

Share this article