;Resize=(412,232))
ಬೆಂಗಳೂರು: ಕೆಪಿಎಸ್ಸಿ ನೇಮಕಾತಿ ಹಗರಣ ಸಂಬಂಧ ತಲೆಮರೆಸಿಕೊಂಡಿರುವ ಆಯೋಗದ ಮಾಜಿ ಸದಸ್ಯೆ, ಕಲಬುರಗಿ ಜಿಲ್ಲೆಯ ಶಾಂತಾ ಹೊಸಮನಿ ಅವರ ಪತ್ತೆಗೆ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಲುಕೌಟ್ ನೋಟಿಸ್ ಜಾರಿಗೊಳಿಸಿದೆ.
ಈ ಹಗರಣ ಬೆಳಕಿಗೆ ಬಂದ ನಂತರ ಶಾಂತಾ ತಲೆಮರೆಸಿಕೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ಸಿಐಡಿ ನೋಟಿಸ್ ನೀಡಿತ್ತು. ಆದರೆ ಇದುವರೆಗೆ ಅವರು ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಶಾಂತಾ ಹೊಸಮನಿ ವಿರುದ್ಧ ಲುಕೌಟ್ ನೋಟಿಸ್ ಅನ್ನು ಸಿಐಡಿ ಹೊರಡಿಸಿದೆ.
ಹೀಗಾಗಿ, ದೇಶ ತೊರೆಯಲು ಯತ್ನಿಸಿದರೆ ಕೂಡಲೇ ವಿಮಾನ ನಿಲ್ದಾಣಗಳಲ್ಲಿ ಶಾಂತಾ ಅವರನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆಯಲಿದ್ದಾರೆ. ಇದರಿಂದ ಶಾಂತಾ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಕೆಪಿಎಸ್ಸಿ ಸದಸ್ಯರಾಗಿದ್ದಾಗ ನಡೆದ ಕೆಎಎಸ್ ಅಧಿಕಾರಿಗಳ ನೇಮಕಾತಿಯಲ್ಲಿ ಶಾಂತಾ ಅವರು ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಗರಣ ಬೆಳಕಿಗೆ ಬರುವ ಕೆಲವೇ ದಿನಗಳ ಮುನ್ನ ಅವರ ಸದಸ್ಯತ್ವ ಅವಧಿ ಮುಗಿದಿತ್ತು.