ನಗರ ಸಂಚಾರ ಪೊಲೀಸರು, ಮಾರಣಾಂತಿಕ ಅಪಘಾತಗಳಿಗೆ ಕಡಿವಾಣ ಹಾಕುವ ಹಾಗೂ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ನಗರದ ಪ್ರಮುಖ ಮೇಲ್ಸೆತುವೆ ಮತ್ತು ಎಲಿವೇಟೆಡ್ ಕಾರಿಡಾರ್ಗಳಲ್ಲಿ ಸೆ.4ರಿಂದ ಕೆಲವು ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಿದ್ದಾರೆ.
ಬೆಂಗಳೂರು : ನಗರ ಸಂಚಾರ ಪೊಲೀಸರು, ಮಾರಣಾಂತಿಕ ಅಪಘಾತಗಳಿಗೆ ಕಡಿವಾಣ ಹಾಕುವ ಹಾಗೂ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ನಗರದ ಪ್ರಮುಖ ಮೇಲ್ಸೆತುವೆ ಮತ್ತು ಎಲಿವೇಟೆಡ್ ಕಾರಿಡಾರ್ಗಳಲ್ಲಿ ಸೆ.4ರಿಂದ ಕೆಲವು ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಿದ್ದಾರೆ.
ಮೇಲ್ಸೆತುವೆಗಳಲ್ಲಿ ಸಂಚರಿಸುವ ವಾಹನಗಳ ವೇಗ, ರಸ್ತೆ ವಿನ್ಯಾಸ, ಅಪಘಾತವಾಗುವ ಸಾಧ್ಯತೆ ಹಾಗೂ ಅಪಘಾತ ಸಂಭವಿಸಿದಾಗ ಉಂಟಾಗುವ ಪರಿಣಾಮಗಳ ಕುರಿತು ಅವಲೋಕನ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಚಾರ ವಿಭಾಗ ತಿಳಿಸಿದೆ.
ನಗರದ ಬಿಜಿಎಸ್ ಫ್ಲೈಓವರ್, ಪೀಣ್ಯ ಎಲಿವೇಟೆಡ್ ಕಾರಿಡಾರ್, ಸಿಲ್ಕ್ ಬೋರ್ಡ್ನಿಂದ ರಾಗಿಗುಡ್ಡದವರೆಗೆ ಇರುವ ಡಬಲ್ ಡೆಕ್ಕರ್ ಫ್ಲೈಓವರ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಹಾಗೂ ಸಂಜೀವ್ ನಗರ ಕ್ರಾಸ್ನಿಂದ ವಿದ್ಯಾಶಿಲ್ಪ ಜಂಕ್ಷನ್ವರೆಗೆ ಇರುವ ಎಲಿವೇಟೆಡ್ ಕಾರಿಡಾರ್ಗಳಲ್ಲಿ ಸೆ.4ರಿಂದ ಮತ್ತು ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್ನಲ್ಲಿ ಸೆ.11ರಿಂದ ದ್ವಿಚಕ್ರ ವಾಹನಗಳು, ಆಟೋರಿಕ್ಷಾಗಳು ಮತ್ತು ತ್ರಿಚಕ್ರ ಗೂಡ್ಸ್ ಆಟೋರಿಕ್ಷಾಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಯಾವಾಗ ನಿರ್ಬಂಧ?
ಬಿಜಿಎಸ್, ಪೀಣ್ಯ ಮೇಲ್ಸೇತುವೆಗಳಲ್ಲಿ ಭಾರೀ ಸರಕು ಸಾಗಣಿಕೆ ವಾಹನಗಳಿಗೆ ನಿರ್ಬಂಧಿಸಲಾಗಿದೆ. ಇತರೆ ಎಲ್ಲಾ ಮಾದರಿಯ ಸರಕು ಸಾಗಾಣಿಕೆ ವಾಹನಗಳು, ಮೂರು ಚಕ್ರದ ಗೂಡ್ಸ್ ಆಟೋ, ಪ್ರಯಾಣಿಕರ ವಾಹನಗಳು ಬೆಳಗ್ಗೆ 7 ಗಂಟೆಯಿಂದ 11 ಗಂಟೆ, ಸಂಜೆ 4 ರಿಂದ ರಾತ್ರಿ 10 ಗಂಟೆವರೆಗೆ ನಿರ್ಬಂಧಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್- ಎಲ್ಲಾ ಮಾದರಿಯ ಸರಕು ಸಾಗಾಣಿಕೆ ವಾಹನಗಳು (ಭಾರಿ ಮಧ್ಯಮ ಹಾಗೂ ಲಘು ಸರಕು ಸಾಗಾಣಿಕೆ ವಾಹನಗಳು) ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆ ವೆರೆಗೆ ಬೈಕ್, ಆಟೋ, ತ್ರಿಚಕ್ರದ ಗೂಡ್ಸ್ಗಳು ನಿರ್ಬಂಧ. ಸಿಲ್ಕ್ ಬೋರ್ಡ್ನಿಂದ ರಾಗಿಗುಡ್ಡದ ಡಬಲ್ ಡೆಕ್ಕರ್ ಫ್ಲೈಓವರ್-ಭಾರೀ ಸರಕು ಸಾಗಾಣಿಕೆ ವಾಹನಗಳ ನಿರ್ಬಂಧ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ-ಎಲ್ಲಾ ವಿಧದ ಸರಕು ಸಾಗಾಣಿಕೆ ವಾಹನಗಳು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನಿರ್ಬಂಧ.
ನಿರ್ಬಂಧಕ್ಕೆ ಕಾರಣಗಳು:
ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸುವುದು, ಫ್ಲೈಓವರ್ಗಳ ರಸ್ತೆ ವಿನ್ಯಾಸ ಮತ್ತು ಅಗಲಕ್ಕೆ ಅನುಗುಣವಾಗಿ ವಾಹನ ಸಂಚಾರ ವ್ಯವಸ್ಥೆ ರೂಪಿಸುವುದು. ಅಪಘಾತ ಸಂಭವಿಸಿದಲ್ಲಿ ಅದರ ಪರಿಣಾಮವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು. ವಾಹನ ದುರಸ್ತಿಯಿಂದ ಉಂಟಾಗುವ ದಟ್ಟಣೆ ತಪ್ಪಿಸುವುದು. ಫ್ಲೈಓವರ್ಗಳ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಉಂಟಾಗುವ ವಾಹನ ದಟ್ಟಣೆ ನಿಯಂತ್ರಿಸುವುದು. ಅಪಘಾತ ಅಥವಾ ಇತರೆ ತುರ್ತು ಸಂದರ್ಭಗಳಲ್ಲಿ ಸಂಚಾರ ನಿರ್ವಹಣೆಗೆ ಅನುಕೂಲ ಕಲ್ಪಿಸುವುದು. ಪಾದಚಾರಿ ಮತ್ತು ದ್ವಿಚಕ್ರ ವಾಹನ ಸವಾರರ ಸುರಕ್ಷತೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

