ಹೊರರಾಜ್ಯಗಳಿಂದ ಕಡಿಮೆ ಸರಬರಾಜು - 15 ದಿನದಲ್ಲಿ ಮತ್ತೆ ₹400ಕ್ಕೆ ಏರಿದ ಬೆಳ್ಳುಳ್ಳಿ ಬೆಲೆ

Published : Oct 08, 2024, 11:39 AM IST
Garlic

ಸಾರಾಂಶ

ಸರಿಯಾಗಿ ಆರು ತಿಂಗಳ ಬಳಿಕ ಮತ್ತೆ ಬೆಳ್ಳುಳ್ಳಿ ದರ ಕೆಜಿಗೆ ₹ 350-₹ 400 ಆಗಿದೆ. ಹೊರರಾಜ್ಯಗಳಿಂದ ಕಡಿಮೆ ಸರಬರಾಜು ಆಗುತ್ತಿರುವುದು ದರ ಹೆಚ್ಚಳಕ್ಕೆ ಕಾರಣ

ಬೆಂಗಳೂರು: ಸರಿಯಾಗಿ ಆರು ತಿಂಗಳ ಬಳಿಕ ಮತ್ತೆ ಬೆಳ್ಳುಳ್ಳಿ ದರ ಕೆಜಿಗೆ ₹ 350-₹ 400 ಆಗಿದೆ. ಹೊರರಾಜ್ಯಗಳಿಂದ ಕಡಿಮೆ ಸರಬರಾಜು ಆಗುತ್ತಿರುವುದು ದರ ಹೆಚ್ಚಳಕ್ಕೆ ಕಾರಣವಾಗಿದ್ದು, ನವೆಂಬರ್‌ ಹೊತ್ತಿಗೆ ಗಗನಕ್ಕೇರುವ ಎಲ್ಲ ಲಕ್ಷಣಗಳಿವೆ ಎಂದು ವರ್ತಕರು ಹೇಳುತ್ತಿದ್ದಾರೆ. ಈರುಳ್ಳಿ, ಟೊಮೆಟೋ ಬಳಿಕ ಈಗ ಬೆಳ್ಳುಳ್ಳಿಯ ದರ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಕಳೆದ ಫೆಬ್ರವರಿಯಲ್ಲಿ ಕೆಜಿಗೆ ₹500 ಸಮೀಪಿಸಿತ್ತು. ಇದೀಗ ಪುನಃ ಬೆಲೆ ಏರಿಕೆಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಮೊದಲ ದರ್ಜೆ ಬೆಳ್ಳುಳ್ಳಿಗೆ ಕೆಜಿಗೆ ಗರಿಷ್ಠ 360-370 ಬೆಲೆಯಿದ್ದು, ಕೆಲವೆಡೆ ಈಗಾಗಲೇ ಕೆಜಿಗೆ ₹ 400 ದರವಿದೆ.

ಎರಡನೇ ದರ್ಜೆ ₹ 300, ಮೂರನೇ ದರ್ಜೆ ₹ 250 ಬೆಲೆಯಿದೆ. ಹಾವೇರಿ, ದಾವಣಗೆರೆಯಲ್ಲಿ ಜವಾರಿ ಬೆಳ್ಳುಳ್ಳಿಯೂ ₹ 250 ಬೆಲೆಯಲ್ಲಿದೆ. ಹದಿನೈದು ದಿನಗಳ ಹಿಂದಷ್ಟೇ 200-280ವರೆಗೆ ಮಾರಾಟವಾಗುತ್ತಿದ್ದ ಬೆಳ್ಳುಳ್ಳಿ ಏಕಾಏಕಿ ₹ 350 ರಿಂದ ₹ 400ಗೆ ಮಾರಾಟವಾಗುತ್ತಿರುವುದು ಜನಸಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ.

ರಾಜ್ಯಕ್ಕೆ ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್‌ ಹಾಗೂ ಮಹಾರಾಷ್ಟ್ರದಿಂದ ಬೆಳ್ಳುಳ್ಳಿ ಅಮದಾಗುತ್ತದೆ. ಆದರೆ, ಈ ತಿಂಗಳು ಆಮದಿನಲ್ಲಿ ತೀವ್ರ ಕುಸಿತವಾಗಿದೆ. ಮಳೆ ಕೊರತೆ ಕಾರಣದಿಂದ ಗುಜರಾತ್‌ ಹಾಗೂ ಉತ್ತರಪ್ರದೇಶದಲ್ಲಿ ಇಳುವರಿ ಇಲ್ಲ. ಹೀಗಾಗಿ ಮಧ್ಯಪ್ರದೇಶ, ಗುಜರಾತ್‌ಗಳೇ ಬೆಳ್ಳುಳ್ಳಿ ಪೂರೈಸುತ್ತಿವೆ. ಇಲ್ಲಿನ ಯಶವಂತಪುರ, ದಾಸನಪುರ ಎಪಿಎಂಸಿ ಸೇರಿ ಬೆಂಗಳೂರಿಗೆ 2869 ಚೀಲ (1ಚೀಲ- 30ರಿಂದ 40ಕೆಜಿ) ಬೆಳ್ಳುಳ್ಳಿ ಬಂದಿದೆ. ಸಾಮಾನ್ಯವಾಗಿ ಸೀಸನ್‌ನಲ್ಲಿ 6-8ಸಾವಿರ ಚೀಲದವರೆಗೂ ಬೆಳ್ಳುಳ್ಳಿ ಬರುತ್ತಿತ್ತು. ಹಾವೇರಿಯ ರಾಣಿಬೆನ್ನೂರು ಸೇರಿ ಮತ್ತಿತರೆಡೆ ಬೆಳ್ಳುಳ್ಳಿ ಬೆಳೆದರೂ ಇಡಿ ರಾಜ್ಯಕ್ಕೇನೂ ಸಾಕಾಗಲ್ಲ ಎಂದು ಬೆಳ್ಳುಳ್ಳಿ ವರ್ತಕರ ಸಂಘ ತಿಳಿಸಿದೆ.

 ಬೆಂಗಳೂರು ಪ್ರವೇಶಿಸಿದ ಚೀನಾ ಬೆಳ್ಳುಳ್ಳಿ?: 

ಬೆಳ್ಳುಳ್ಳಿ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ದೀಪಕ್‌ ಮಾತನಾಡಿ, ನಗರಕ್ಕೆ ಅಫ್ಘಾನಿಸ್ತಾನದ ಜೊತೆಗೆ ಚೀನಾ ಈರುಳ್ಳಿಯೂ ಲಗ್ಗೆ ಇಟ್ಟಿದೆ. ಕೆಲ ವ್ಯಾಪಾರಿಗಳು ಮಾರಾಟ ಮಾಡುತ್ತಿರುವ ವಿಚಾರ ತಿಳಿದಿದೆ. ಈಚೆಗೆ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಅಧಿಕಾರಿಗಳು ಬಂದು ಕೆಲ ಮಾದರಿ ಸಂಗ್ರಹಿಸಿ ಒಯ್ದಿದ್ದಾರೆ. ಆದರೆ, ವರದಿ ಬಗ್ಗೆ ಮಾಹಿತಿ ತಿಳಿಸಿಲ್ಲ ಎಂದರು.

- ಕೇವಲ 15 ದಿನದಲ್ಲಿ ದುಪ್ಪಟ್ಟು ಏರಿಕೆ

- ಈರುಳ್ಳಿ, ಟೊಮೆಟೋ ಬಳಿಕ ಗ್ರಾಹಕರ ಜೇಬಿಗೆ ಬೆಳ್ಳುಳ್ಳಿ ಕತ್ತರಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ