ಗಡೀಲಿ 3 ದಿನ ಕಾದು ಮೈಸೂರಿಗೆ ಮರಳಿದ ಪಾಕಿಸ್ತಾನದ ಸೊಸೆ

Sujatha NRPublished : May 4, 2025 11:52 AM

ಪಾಕಿಸ್ತಾನ ವ್ಯಕ್ತಿಯನ್ನು ಮದುವೆಯಾಗಿದ್ದ ಮೈಸೂರಿನ ಮಹಿಳೆ ತನ್ನ 3 ಮಕ್ಕಳೊಂದಿಗೆ ಗಡಿಯಲ್ಲಿ 3 ದಿನ ಕಾದು ಕುಳಿತು ಮರಳಿ ಬಂದಿದ್ದಾರೆ.

ಮೈಸೂರು : ಪಹಲ್ಗಾಂ ಉಗ್ರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಕೇಂದ್ರ ಸರ್ಕಾರದ ಆದೇಶದಂತೆ ಪಾಕ್ ಪ್ರಜೆಗಳು ದೇಶ ತೊರೆದಿದ್ದಾರೆ. ಆದರೆ, ಪಾಕಿಸ್ತಾನ ವ್ಯಕ್ತಿಯನ್ನು ಮದುವೆಯಾಗಿದ್ದ ಮೈಸೂರಿನ ಮಹಿಳೆ ತನ್ನ 3 ಮಕ್ಕಳೊಂದಿಗೆ ಗಡಿಯಲ್ಲಿ 3 ದಿನ ಕಾದು ಕುಳಿತು ಮರಳಿ ಬಂದಿದ್ದಾರೆ.

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಭಾರತ ತೊರೆಯಲು ಮುಂದಾಗಿದ್ದ ಮೈಸೂರಿನ ರಂಷಾ ತನ್ನ ಮೂವರು ಮಕ್ಕಳೊಂದಿಗೆ ವಾಘಾ ಗಡಿ ತಲುಪಿದ್ದರು. ಆದರೆ, ಪಾಕಿಸ್ತಾನದಲ್ಲಿರುವ ತನ್ನ ಗಂಡ ಕರೆದುಕೊಂಡು ಹೋಗಲು ಬಾರದ ಹಿನ್ನೆಲೆ ವಾಪಸ್‌ ಮೈಸೂರಿಗೆ ಆಗಮಿಸಿದ್ದು, ಅತಂತ್ರ ಸ್ಥಿತಿಯಲ್ಲಿದ್ದಾರೆ. ರಂಷಾ ತಂದೆಯೂ ಪಾಕಿಸ್ತಾನ ಮೂಲದವರಾಗಿದ್ದು, ದೇಶ ಇಬ್ಭಾಗವಾದಾಗ ಭಾರತಕ್ಕೆ ಬಂದಿದ್ದರು.

8 ವರ್ಷದ ಹಿಂದೆ ಮದುವೆ:

ಕಳೆದ 8 ವರ್ಷದ ಹಿಂದೆ ರಂಷಾ ಪಾಕಿಸ್ತಾನ ವಿಧಾನಸಭೆಯಲ್ಲಿ ನಿರ್ದೇಶಕನಾಗಿರುವ ಮೊಹಮ್ಮದ್ ಫಾರೂಖ್ ಎನ್ನುವವರನ್ನು ಮದುವೆಯಾಗಿದ್ದು, ಇವರಿಗೆ 7, 4 ಮತ್ತು 2 ವರ್ಷದ ಮೂವರು ಮಕ್ಕಳು ಇದ್ದಾರೆ. ರಂಷಾಗೆ ಪಾಕಿಸ್ತಾನದ ಪೌರತ್ವವೂ ಲಭಿಸಿತ್ತು. ಆದರೆ, ಕೌಟುಂಬಿಕ ಕಲಹ ಹಿನ್ನೆಲೆ ವರ್ಷದ ಹಿಂದೆ ರಂಷಾ ಮಕ್ಕಳೊಂದಿಗೆ ಸಂದರ್ಶಕ ವಿಸಾದೊಂದಿಗೆ ಭಾರತಕ್ಕೆ ಬಂದು ಮೈಸೂರಿನಲ್ಲಿದ್ದರು. ಪಾಕಿಸ್ತಾನ ವಿಸಾ ತೊಂದರೆಯಾದ ಹಿನ್ನೆಲೆ ಪಾಕಿಸ್ತಾನಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. 3 ಮಕ್ಕಳ ವಿಸಾ ಜುಲೈವರೆಗೆ ಇದ್ದರೂ ಈಗ ಪಾಕ್‌ ಜತೆಗಿನ ಬಿಕ್ಕಟ್ಟಿನಿಂದ ಭಾರತ ತೊರೆಯಲೇಬೇಕಾದ ಅನಿವಾರ್ಯತೆ ಇದೆ.

ಷರತ್ತು ಹಾಕಿ ಬರದ ಗಂಡ:

ಪಾಕ್‌ ಪ್ರಜೆಗಳು ಭಾರತ ತೊರೆಯುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಫಾರೂಖ್‌, ತನ್ನ 3 ಮಕ್ಕಳ ಜೊತೆಗೆ ರಂಷಾ ಪಾಕಿಸ್ತಾನಕ್ಕೆ ಬರುವುದಾದರೆ ಸೇರಿಸಿಕೊಳ್ಳುವುದಾಗಿ ಷರತ್ತು ಹಾಕಿದ್ದ. ಇದಕ್ಕೆ ಒಪ್ಪಿಕೊಂಡ ರಂಷಾ ಮಕ್ಕಳೊಂದಿಗೆ 3 ದಿನ ವಾಘಾ ಗಡಿಯಲ್ಲೇ ಕಾದು ಕುಳಿತಿದ್ದರು. ಆದರೆ, ಗಂಡನ ಮನೆಯವರಿಂದ ಯಾವುದೇ ಸ್ಪಂದನೆ ಬಂದಿಲ್ಲ. ಚಿಕ್ಕ ಮಕ್ಕಳಾದ ಕಾರಣ ತಂದೆ ಮನೆಯಿಂದ ಸೂಚನೆ ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ರಂಷಾ ಪಾಕ್‌ಗೆ ಹೋಗದೆ ಮರಳಿ ಮೈಸೂರಿಗೆ ಬಂದಿದ್ದು, ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮನೆಯಲ್ಲಿ ಇದ್ದಾರೆ.

ಪಾಕಿಸ್ತಾನ ವಿಸಾಗಾಗಿ ಮತ್ತೆ ಎಫ್‌ಆರ್‌ಆರ್‌ಓಗೆ ಮಹಿಳೆ ಮತ್ತು ಮಕ್ಕಳು ಅರ್ಜಿ ಸಲ್ಲಿಸಲಿದ್ದಾರೆ. ಅಲ್ಲದೆ, ವಿಸಾ ಸಮಸ್ಯೆ ಬಗೆಹರಿಸಿಕೊಳ್ಳಲು ರಂಷಾ ಕುಟುಂಬದವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.