1ನೇ ಕ್ಲಾಸ್‌ಗೆ ವಯೋಮಿತಿ 5.5 ವರ್ಷಕ್ಕಿಳಿಸಲು ಪೋಷಕರ ಹೋರಾಟ

Published : Mar 30, 2026, 12:00 PM IST
School

ಸಾರಾಂಶ

ರಾಜ್ಯದಲ್ಲಿ 1ನೇ ತರಗತಿ ಪ್ರವೇಶಕ್ಕೆ 60 ದಿನಗಳ ವಯೋಮಿತಿ ಸಡಿಲಿಕೆಗೆ ಸಮಾಧಾನಗೊಳ್ಳದ ಪೋಷಕ ವರ್ಗ ಕಳೆದ ವರ್ಷ ಇದ್ದಂತೆ 5.5 ವರ್ಷ ಪೂರ್ಣಗೊಂಡ ಎಲ್ಲ ಮಕ್ಕಳಿಗೂ ಶಾಲಾ ಪ್ರವೇಶ ಕಲ್ಪಿಸಬೇಕೆಂದು ಪ್ರಬಲವಾಗಿ ಆಗ್ರಹಿಸುತ್ತಿದೆ.

  ಬೆಂಗಳೂರು :  ರಾಜ್ಯದಲ್ಲಿ 1ನೇ ತರಗತಿ ಪ್ರವೇಶಕ್ಕೆ 60 ದಿನಗಳ ವಯೋಮಿತಿ ಸಡಿಲಿಕೆಗೆ ಸಮಾಧಾನಗೊಳ್ಳದ ಪೋಷಕ ವರ್ಗ ಕಳೆದ ವರ್ಷ ಇದ್ದಂತೆ 5.5 ವರ್ಷ ಪೂರ್ಣಗೊಂಡ ಎಲ್ಲ ಮಕ್ಕಳಿಗೂ ಶಾಲಾ ಪ್ರವೇಶ ಕಲ್ಪಿಸಬೇಕೆಂದು ಪ್ರಬಲವಾಗಿ ಆಗ್ರಹಿಸುತ್ತಿದೆ. ಅಲ್ಲದೆ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೃಹತ್‌ ಆಂದೋಲನಕ್ಕೂ ಮುಂದಾಗಿದೆ.

ಆಂದೋಲನದ ಮೂಲಕ ಎಲ್ಲಾ ಅರ್ಹ ಪೋಷಕರನ್ನು ದೊಟ್ಟಮಟ್ಟದಲ್ಲಿ ಸಂಘಟಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಇಲಾಖಾ ಅಧಿಕಾರಿಗಳನ್ನು ಭೇಟಿ ಮಾಡಿ ಒಟ್ಟಾಗಿ ಒತ್ತಡ ಹಾಕಲು ಪೋಷಕ ವರ್ಗ ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ ಕೆಲವೇ ತಿಂಗಳ ವಯೋಮಿತಿ ಕೊರತೆಯಿಂದ ತಮ್ಮ ಮಕ್ಕಳು 1ನೇ ತರಗತಿ ಪ್ರವೇಶ ವಂಚನೆಯಾಗುವ ಪೋಷಕರೆಲ್ಲರನ್ನೂ ಒಟ್ಟುಗೂಡಿಸುವ ಪ್ರಯತ್ನ ನಡೆಯುತ್ತಿದೆ.

ಸರ್ಕಾರ 1ನೇ ತರಗತಿ ಪ್ರವೇಶಕ್ಕೆ ಕೇವಲ 60 ದಿನಗಳ ವಯೋಮಿತಿ ಸಡಿಲಿಕೆ ಮಾಡಿರುವುದು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ಕಳೆದ ವರ್ಷದಂತೆ 5.5 ವರ್ಷ ವಯೋಮಿತಿ ನಿಗದಿಪಡಿಸಲು 5 ಲಕ್ಷಕ್ಕೂ ಹೆಚ್ಚು ಪೋಷಕರು ಮೊದಲಿನಿಂದಲೂ ಹೋರಾಟ ಮಾಡುತ್ತಾ ಬರುತ್ತಿದ್ದರೂ ಸರ್ಕಾರ ಪೋಷಕರು, ತಜ್ಞರು, ಶಾಲೆಗಳೊಂದಿಗೆ ಚರ್ಚಿಸದೆ ಏಕಾಏಕಿ 60 ದಿನಗಳ ನಿಲುವು ತೆಗೆದುಕೊಂಡಿದೆ. ಇದರಿಂದ 1 ಲಕ್ಷದಷ್ಟು ಮಕ್ಕಳಿಗಷ್ಟೇ ಪ್ರವೇಶಕ್ಕೆ ವಯೋಮಿತಿ ಅರ್ಹತೆ ದೊರೆಯುತ್ತದೆ. ಉಳಿದ 4 ಲಕ್ಷಕ್ಕು ಹೆಚ್ಚು ಮಕ್ಕಳಿಗೆ ಅನಗತ್ಯವಾಗಿ 1 ವರ್ಷ ವ್ಯರ್ಥವಾಗಲಿದೆ. ದಶಕಗಳಿಂದ ನಡೆದು ಬರುತ್ತಿದ್ದ ನಿಯಮಗಳನ್ನು ಅನಗತ್ಯವಾಗಿ ಬದಲಾವಣೆ ಮಾಡಿ ಸರ್ಕಾರ, ಶಿಕ್ಷಣ ಇಲಾಖೆ ಮಕ್ಕಳು ಹಾಗೂ ಪೋಷಕರಲ್ಲಿ ಗೊಂದಲ ಉಂಟು ಮಾಡುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಾಟ್ಸ್‌ಆ್ಯಪ್‌ ಸ್ಟೇಟಸ್‌, ಫೇಸ್‌ಬುಕ್‌, ಎಕ್ಸ್‌, ಇನ್‌ಸ್ಟಾಗ್ರಾಂನಲ್ಲಿ 60 ದಿನಗಳ ವಯೋಮಿತಿ ಸಡಿಲಿಕೆಯಿಂದ ಲಕ್ಷಾಂತರ ಮಕ್ಕಳಿಗೆ ಆಗುವ ತಾರತಮ್ಯದ ವಿಡಿಯೋ, ಪೋಸ್ಟರ್‌ಗಳನ್ನು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಅನ್ಯಾಯ ಸರಿಪಡಿಸಲು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪೋಷಕರ ಸಂಘಟನೆ ಮೂಲಕ ಮನವಿ ಮಾಡಿದ್ದು ಕೂಡಲೇ ಇಲಾಖೆ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ವಹಿಸಲು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಆಟೋ ಎಲ್‌ಪಿಜಿ ಕೊರತೆ ಇಲ್ಲ : ಗ್ರಾಹಕರ ವ್ಯವಹಾರ ಇಲಾಖೆ
ಬೆಂಗಳೂರು ಸೇರಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಮಳೆ