ಅರ್ಹರಿಲ್ಲದಿದ್ದರೂ 36 ವೈದ್ಯರಿಗೆ ವಿಶೇಷ ಭತ್ಯೆ - 5 ವರ್ಷ ಅವಧಿಯಲ್ಲಿ ವೈದ್ಯರಿಂದ ಕೃತ್ಯ

Published : Nov 15, 2024, 11:43 AM IST
stethoscope

ಸಾರಾಂಶ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ 36ಕ್ಕೂ ಹೆಚ್ಚು ವೈದ್ಯಾಧಿಕಾರಿಗಳು ಅರ್ಹತೆ ಇಲ್ಲದಿದ್ದರೂ ವಿಶೇಷ ಭತ್ಯೆಯಾಗಿ ₹3.50 ಕೋಟಿಗೂ ಅಧಿಕ ಮೊತ್ತವನ್ನು ಪಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸಂಪತ್‌ ತರೀಕೆರೆ

ಬೆಂಗಳೂರು : ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ 36ಕ್ಕೂ ಹೆಚ್ಚು ವೈದ್ಯಾಧಿಕಾರಿಗಳು ಅರ್ಹತೆ ಇಲ್ಲದಿದ್ದರೂ ವಿಶೇಷ ಭತ್ಯೆಯಾಗಿ ₹3.50 ಕೋಟಿಗೂ ಅಧಿಕ ಮೊತ್ತವನ್ನು ಪಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ವೃಂದಗಳ ತಜ್ಞ ವೈದ್ಯರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹಾಗೂ ದಂತ ಆರೋಗ್ಯಾಧಿಕಾರಿಗಳಿಗೆ ಅವರ ತಜ್ಞತೆ ಮತ್ತು ಸೇವಾವಧಿಗೆ ಅನುಸಾರವಾಗಿ ವಿಶೇಷ ಭತ್ಯೆಗಳನ್ನು ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ. ಅದರಂತೆ ಸದರಿ ವೈದ್ಯಾಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯ ವೃತ್ತಿಗೆ ಅನುಸಾರವಾಗಿ ವಿಶೇಷ ಭತ್ಯೆಗಳನ್ನು ವೇತನದೊಂದಿಗೆ ಪಡೆಯಬಹುದಾಗಿದೆ.

ವಿಶೇಷ ಭತ್ಯೆ ಪಡೆಯಬೇಕಾದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳು ತಮ್ಮ ವೈದ್ಯ ವೃತ್ತಿಗೆ ಅನುಸಾರವಾದ ಕರ್ತವ್ಯ ಮತ್ತು ಜವಾಬ್ದಾರಿ ನಿರ್ವಹಿಸುವುದು ಕಡ್ಡಾಯ. ಆದರೆ, ಈ ನಿಯಮ ಅನುಸರಿಸದೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಂಕಿತಾಧಿಕಾರಿ ಇಲ್ಲವೇ ಆಹಾರ ಸುರಕ್ಷತಾಧಿಕಾರಿಯಾಗಿ ಕಾರ್ಯಕಾರಿ ಹುದ್ದೆಗಳಿಗೆ ನಿಯೋಜನೆಗೊಳ್ಳುವ ವೈದ್ಯಾಧಿಕಾರಿಗಳು ನಿಯೋಜನೆ ಪ್ರಾರಂಭಗೊಂಡು ಮುಕ್ತಾಯದ ಅವಧಿವರೆಗೆ ವೈದ್ಯ ವೃತ್ತಿಗೆ ತಕ್ಕಂತೆ ಪಡೆಯುತ್ತಿದ್ದ ಯಾವುದೇ ವೈದ್ಯಕೀಯ ಭತ್ಯೆಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ ಎಂಬ ನಿಯಮವಿದೆ. ಹೀಗಿದ್ದರೂ 35ಕ್ಕೂ ಅಧಿಕ ವೈದ್ಯಾಧಿಕಾರಿಗಳು ವಿಶೇಷ ಭತ್ಯೆ ಪಡೆದು ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ.

2023 ಮೇ 24ರಂದು ರಾಜ್ಯದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಆಯುಕ್ತಾಲಯ ಹಾಗೂ ಅಂಕಿತಾಧಿಕಾರಿಗಳ ಕಚೇರಿಗಳು ಸೇರಿದಂತೆ ಒಟ್ಟು 38 ಡಿಡಿಓ ಕೋಡ್‌ ಸೃಜಿಸಲಾಗಿತ್ತು. ಈ ಎಲ್ಲಾ ಕಚೇರಿಯ ಅಂಕಿತಾಧಿಕಾರಿಗಳ ಡಿಡಿಓ ಕೋಡ್‌ ಅನ್ನು ವಿಶೇಷ ಭತ್ಯೆಗಳನ್ನು ಡ್ರಾ ಮಾಡಲಾಗದಂತೆ ಎಚ್‌ಆರ್‌ಎಂಎಸ್‌ ತಂತ್ರಾಂಶದಲ್ಲಿ ತಡೆಹಿಡಿಯಲು ಕ್ರಮಕೈಗೊಳ್ಳುವಂತೆ ಎಚ್‌ಆರ್‌ಎಂಎಸ್‌ ನಿರ್ದೇಶಕರಿಗೆ ಕೋರಲಾಗಿತ್ತು. ಜೊತೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಂಕಿತಾಧಿಕಾರಿಗಳಿಗೆ ವಿಶೇಷ ಭತ್ಯೆ ಪಡೆಯದಂತೆ ಸೂಚಿಸಲಾಗಿತ್ತು.

35 ವೈದ್ಯಾಧಿಕಾರಿಗಳಿಂದ ಕೃತ್ಯ:

ಈ ಎಲ್ಲ ಸೂಚನೆಗಳ ನಡುವೆಯೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲಿ ನಿಯೋಜನೆ ಮೇಲೆ ಬಿಬಿಎಂಪಿ, ಬೀದರ್‌, ರಾಮನಗರ, ದಾವಣಗೆರೆ, ಮೈಸೂರು ಗ್ರಾಮಾಂತರ, ಚಿಕ್ಕಮಗಳೂರು, ಕೊಡಗು, ಧಾರವಾಡ, ಕೊಪ್ಪಳ, ರಾಯಚೂರು, ಬೆಂಗಳೂರು ಗ್ರಾಮಾಂತರ(ಮೂವರು ಅಧಿಕಾರಿಗಳು ನಿವೃತ್ತರಾಗಿದ್ದಾರೆ), ಬೆಂಗಳೂರು ನಗರ, ತುಮಕೂರು, ಎಚ್‌ಡಿಎಂಸಿ, ವಿಜಯಪುರ, ಬೆಳಗಾವಿ ಸೇರಿದಂತೆ ಇತರೆಡೆ ಕರ್ತವ್ಯ ನಿರ್ವಹಿಸುತ್ತಿರುವ 35 ವೈದ್ಯಾಧಿಕಾರಿಗಳು ನಿಯಮಾನುಸಾರ ತಮ್ಮ ವಿದ್ಯಾರ್ಹತೆ, ತಜ್ಞತೆ, ಕಾರ್ಯ ಸ್ವರೂಪವನ್ನು ಆಧರಿಸಿ ನೀಡಲಾಗುವ ವಿಶೇಷ ಭತ್ಯೆಗೆ ಅರ್ಹರಲ್ಲದಿದ್ದರೂ ನವೆಂಬರ್‌ 2019ರಿಂದ ಆಗಸ್ಟ್‌ 2024ರವರೆಗೆ ಒರೋಬ್ಬರಿ 3.50 ಕೋಟಿ ರು.ಗಳಿಗೂ ಹೆಚ್ಚು ವಿಶೇಷ ಭತ್ಯೆಯನ್ನು ಡ್ರಾ ಮಾಡಿಕೊಂಡಿರುವ ಬಗ್ಗೆ ಇಲಾಖೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿತ್ತು.

ಸಂಬಳದಲ್ಲಿ ಕಡಿತಕ್ಕೆ ಆದೇಶ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲಿ ನಿಯೋಜನೆಗೊಂಡು ಕಾನೂನು ಬಾಹಿರವಾಗಿ ವಿಶೇಷ ಭತ್ಯೆ ಪಡೆದಿರುವ 35ಕ್ಕೂ ಹೆಚ್ಚು ವೈದ್ಯಾಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ವಿಶೇಷ ಭತ್ಯೆ ಡ್ರಾ ಮಾಡಿಕೊಂಡಿರುವ ವೈದ್ಯಾಧಿಕಾರಿಗಳ ಸಂಬಳದಲ್ಲಿ ಅವರು ಪಡೆದಿರುವ ವಿಶೇಷ ಭತ್ಯೆ ಆಧಾರದಲ್ಲಿ ಪ್ರತಿ ತಿಂಗಳು ಕಂತಿನಂತೆ(ಇನ್‌ಸ್ಟಾಲ್ಮೆಂಟ್‌) ಕಡಿತ ಮಾಡಲು ಇಲಾಖೆಗೆ ಸೂಚಿಸಿದೆ. ಒಂದು ವೇಳೆ ವಿಶೇಷ ಭತ್ಯೆ ಪಡೆದು ನಿವೃತ್ತರಾಗಿದ್ದರೆ ಅವರು ಪಡೆದ ಹಣವನ್ನು ಪಿಂಚಣಿಯಿಂದ ಕಟಾವು ಮಾಡಿ ಸರ್ಕಾರಿ ಖಜಾನೆಗೆ ಜಮೆ ಮಾಡುವಂತೆ ಆದೇಶಿಸಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''