ನಮ್ಮೊಳಗೇ ಇದ್ದಾರೆ ಪಾಕ್‌ ಪ್ರೇಮಿ, ಭಾರತ ವಿರೋಧಿ ಹಿತ ಶತ್ರುಗಳು!

Published : May 10, 2025, 05:26 AM IST
indo pak news .jpg

ಸಾರಾಂಶ

ನಮ್ಮಲ್ಲಿನ ಕೆಲ ಹಿತಶತ್ರುಗಳು, ಸೇನಾ ಕಾರ್ಯಾಚರಣೆ ಹಾಗೂ ಮೋದಿಯವರನ್ನು ಟೀಕಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಅಪ್‌ಲೋಡ್‌ ಮಾಡುವ ಮೂಲಕ ವಿಕೃತಿ ಮೆರೆದಿದ್ದಾರೆ.

 ಬೆಂಗಳೂರು : ಪಹಲ್ಗಾಂ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕೈಗೊಂಡಿರುವ ‘ಆಪರೇಷನ್‌ ಸಿಂದೂರ’ ಕಾರ್ಯಾಚರಣೆಯನ್ನು ಇಡೀ ದೇಶದ ಜನತೆ ಒಕ್ಕೊರಲಿನಿಂದ ಸಂಭ್ರಮಿಸುತ್ತಿದ್ದರೆ, ನಮ್ಮಲ್ಲಿನ ಕೆಲ ಹಿತಶತ್ರುಗಳು, ಸೇನಾ ಕಾರ್ಯಾಚರಣೆ ಹಾಗೂ ಮೋದಿಯವರನ್ನು ಟೀಕಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಅಪ್‌ಲೋಡ್‌ ಮಾಡುವ ಮೂಲಕ ವಿಕೃತಿ ಮೆರೆದಿದ್ದಾರೆ. ರಾಜ್ಯದ ನಾಲ್ಕು ಕಡೆ ದೇಶದ್ರೋಹಿ ಪೋಸ್ಟ್‌ಗಳು ಪತ್ತೆಯಾಗಿದ್ದು, ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ಮಂಡ್ಯ ಜಿಲ್ಲೆ ಕಿರುಗಾವಲು ಗ್ರಾಮದಲ್ಲಿ ಜಾವೀದ್ ಪಾಷ (33) ಎಂಬಾತ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಆತನನ್ನು ಬಂಧಿಸಲಾಗಿದೆ. ಇದೇ ವೇಳೆ, ವಿಜಯಪುರದಲ್ಲಿ ದಂತ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ‘ಆಪರೇಷನ್‌ ಸಿಂದೂರ’ ಟೀಕಿಸಿ, ಪಾಕ್‌ ಧ್ವಜ ಹಾಕಿ ಪೋಸ್ಟ್‌ ಮಾಡಿದ್ದು, ಆಕೆಯ ವಿರುದ್ಧ ದೂರು ದಾಖಲಾಗಿದೆ. ಬೆಳ್ತಂಗಡಿಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ‘ಆಪರೇಷನ್ ಸಿಂದೂರ್’ ಗೆ ಧಿಕ್ಕಾರದ ಹ್ಯಾಶ್ ಟ್ಯಾಗ್ ಹಾಕಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವೇಳೆ, ನಿಟ್ಟೆ ಎಂಜಿನಿಯರಿಂಗ್‌ ಕಾಲೇಜಿನ ಹಾಸ್ಟೆಲ್‌ನಲ್ಲಿ ದೇಶದ್ರೋಹಿ ಗೋಡೆಬರಹ ಕಾಣಿಸಿಕೊಂಡಿದೆ.

ಮೋದಿ ದೂಷಣೆ:

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಜಾವೀದ್ ಪಾಷ (33) ಎಂಬಾತ ಎಐ ತಂತ್ರಜ್ಞಾನ ಬಳಸಿ ಮೋದಿ, ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಶೂ ಬಿಚ್ಚುವ ರೀತಿ ಫೋಟೋ ಕ್ರಿಯೇಟ್ ಮಾಡಿ, ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ. ಶುಕ್ರವಾರ ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದು, ಆತನ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಿರುಗಾವಲು ಪೊಲೀಸ್‌ ಠಾಣೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಬಳಿಕ, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಸಿಂದೂರಕ್ಕೆ ವಿರೋಧ:

ಈ ಮಧ್ಯೆ, ವಿಜಯಪುರದ ಅಲ್ ಅಮೀನ್ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ, ತಷಾವುದ್ದ ಫಾರೂಖಿ ಶೇಖ್ ಎಂಬಾಕೆ ‘ಆಪರೇಷನ್‌ ಸಿಂದೂರ’ ಟೀಕಿಸಿ, ವಾಟ್ಸಪ್‌ ಸ್ಟೇಟಸ್‌ ಹಾಕಿಕೊಂಡಿದ್ದಾಳೆ. @hoodyyyyyyy ಹೆಸರಿನ ಖಾತೆಯಲ್ಲಿ ಪೋಸ್ಟ್ ಹಾಕಲಾಗಿದ್ದು, ‘To my Pakistani Friends, people of IOJK, AJK, Avoid going to near military Govt Installation. If you are leaving close to 200 KM border Radius please move inland. May Allah Protect us all from India Ameen#sos’ ಎಂದು ಪಾಕಿಸ್ತಾನ ಧ್ವಜದ ಭಾವಚಿತ್ರ ಹಾಕಿ ಪೋಸ್ಟ್ ಮಾಡಿದ್ದಾಳೆ. (ಪಾಕಿಸ್ತಾನ ಹಾಗೂ ಇತರರಿಗೆ ದೇವರು ರಕ್ಷಣೆ ಮಾಡಲಿ. ಪಾಕಿಸ್ತಾನಿಯರು ಗಡಿ, ಗಡಿಯಿಂದ 200 ಕಿಲೋ ಮೀಟರ್ ವ್ಯಾಪ್ತಿಗೆ ಹೋಗಬೇಡಿ) ಎಂದು ಪೋಸ್ಟ್ ಹಾಕಿ ಪಾಕ್‌ ಪರ ಪ್ರೇಮ ಮೆರೆದಿದ್ದಾಳೆ.

ಆಕೆಯ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಆಕೆ ಕ್ಷಮೆಯಾಚಿಸಿ, ‘ಜೈ ಹಿಂದ್’ ಎಂದು ಪೋಸ್ಟ್ ಮಾಡಿದ್ದಾಳೆ. ಜನರ ಒಳಿತಿಗಾಗಿ ಹೀಗೆ ಪೋಸ್ಟ್‌ ಹಾಕಿದ್ದಾಗಿ ಸಮಜಾಯಿಸಿ ನೀಡಿದ್ದಾಳೆ. ಸದ್ಯ ಆಕೆ ಮುಂಬೈನಲ್ಲಿ ಇರುವ ಮಾಹಿತಿಯಿದ್ದು, ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.

ಈ ಮಧ್ಯೆ, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಬೆಳಾಲಿನ ಕಾಲೇಜು ವಿದ್ಯಾರ್ಥಿನಿ ರೇಷ್ಮಾ ಎಂಬಾಕೆ ಇನ್‌ಸ್ಟಾಗ್ರಾಂನಲ್ಲಿ ‘ಆಪರೇಷನ್ ಸಿಂದೂರ್’ ಗೆ ಧಿಕ್ಕಾರ ಎಂಬ ಹ್ಯಾಶ್ ಟ್ಯಾಗ್ ಹಾಕಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಿರೋಧದ ಬಳಿಕ, ಆಕೆ ಪೋಸ್ಟ್ ಡಿಲೀಟ್ ಮಾಡಿದ್ದಾಳೆ. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಇದೇ ವೇಳೆ, ನಿಟ್ಟೆಯ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿರುವ ಹೆಣ್ಣುಮಕ್ಕಳ ಹಾಸ್ಟೆಲ್‌ನಲ್ಲಿ ಶೌಚಾಲಯದ ಗೋಡೆ ಮೇಲೆ ಪೆನ್ನಿನಿಂದ ‘ಹಿಂದೂಸ್ತಾನ್ ನಹೀ, ಮುಸ್ಲೀಂಸ್ತಾನ್ ಬೋಲೋ’ ಎಂದು ಬರೆಯಲಾಗಿದೆ. ಅಲ್ಲದೆ ಹಿಂದೂಸ್ತಾನವನ್ನು ಅವಾಚ್ಯವಾಗಿ ನಿಂದಿಸಲಾಗಿದೆ. ದೂರು ದಾಖಲಿಸಿಕೊಂಡಿರುವ ಉಡುಪಿ ಪೊಲೀಸರು, ಕಿಡಿಗೇಡಿ ವಿದ್ಯಾರ್ಥಿನಿಗೆ ಶೋಧ ಆರಂಭಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು
ಗುತ್ತಿಗೆದಾರರಿಂದಲೇ ಕಮಿಷನ್‌ ಕೇಳಿದ ಗುತ್ತಿಗೆದಾರರು! : ಇಬ್ಬರು ಅಮಾನತು