ಅನೈತಿಕ ಸಂಬಂಧಕ್ಕೆ ಹುಟ್ಟಿದ ಮಗುವನ್ನು ಆಟೋದಲ್ಲಿಟ್ಟು ಪರಾರಿ : ಇಬ್ಬರ ಬಂಧನ

Published : May 12, 2025, 08:50 AM IST
infant dead

ಸಾರಾಂಶ

ಅನೈತಿಕ ಸಂಬಂಧಕ್ಕೆ ಜನಿಸಿದ್ದ ಸುಮಾರು 15 ದಿನಗಳ ಹೆಣ್ಣು ಹಸುಗೂಸನ್ನು ರಸ್ತೆ ಬದಿಯ ಆಟೋದಲ್ಲಿ ಮಲಗಿಸಿ ಪರಾರಿಯಾಗಿದ್ದ ಜೋಡಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ.

 ಬೆಂಗಳೂರು : ಅನೈತಿಕ ಸಂಬಂಧಕ್ಕೆ ಜನಿಸಿದ್ದ ಸುಮಾರು 15 ದಿನಗಳ ಹೆಣ್ಣು ಹಸುಗೂಸನ್ನು ರಸ್ತೆ ಬದಿಯ ಆಟೋದಲ್ಲಿ ಮಲಗಿಸಿ ಪರಾರಿಯಾಗಿದ್ದ ಜೋಡಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ.

ಏ.24ರಂದು ಮುಂಜಾನೆ ಎಂಟಿಟಿಸಿ ಕ್ವಾರ್ಟ್ರಸ್‌ ಬಳಿ ರಸ್ತೆ ಬದಿ ನಿಲುಗಡೆ ಮಾಡಿದ್ದ ಆಟೋ ರಿಕ್ಷಾದಲ್ಲಿ ಮಗು ಅಳುತ್ತಿರುವುದು ಕೇಳಿಸಿಕೊಂಡ ವಾಕಿಂಗ್‌ ಮಾಡುತ್ತಿದ್ದ ಸಾರ್ವಜನಿಕರು ಆಟೋ ಬಳಿ ತೆರಳಿ ನೋಡಿದಾಗ ಸುಮಾರು 15 ದಿನಗಳ ಹಿಂದೆ ಜನಿಸಿದ ಹೆಣ್ಣು ಮಗು ಅಳುತ್ತಿರುವುದು ಕಂಡು ಬಂದಿದೆ. ಬಳಿಕ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ, ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿ ಆ ಮಗುವನ್ನು ರಕ್ಷಿಸಿದ್ದಾರೆ. ಬಳಿಕ ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.

ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ವೇಳೆ ಒಬ್ಬ ಪುರುಷ ಹಾಗೂ ಮಹಿಳೆ ಮಗುವನ್ನು ಎತ್ತಿಕೊಂಡು ಬಂದು ರಸ್ತೆಯ ಬದಿ ಆಟೋರಿಕ್ಷಾದಲ್ಲಿ ಮಲಗಿಸಿರುವುದು ಪತ್ತೆಯಾಗಿತ್ತು. ಬಳಿಕ ಇಬ್ಬರೂ ಮಡಿಕೇರಿಗೆ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿ ಪರಾರಿಯಾಗಿದ್ದರು. ಇದರ ಜಾಡು ಹಿಡಿದು ಹೊರಟ ಪೊಲೀಸರು ಆ ವ್ಯಕ್ತಿ ಹಾಗೂ ಮಹಿಳೆಯನ್ನು ವಿರಾಜಪೇಟೆಯಲ್ಲಿ ಪತ್ತೆಹಚ್ಚಿದ್ದಾರೆ.

ಮಗುವಿಗೆ ಸೀಳು ತುಟಿ

ವಿರಾಜಪೇಟೆಯ ಅಪ್ಪಣ್ಣ ಹಾಗೂ 30 ವರ್ಷದ ಮಹಿಳೆಯ ಅನೈತಿಕ ಸಂಬಂಧ ವಿಚಾರ ಬೆಳಕಿಗೆ ಬಂದಿದೆ. ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿರುವ ಅಪ್ಪಣ್ಣ, 30 ವರ್ಷದ ವಿಧವೆ ಜತೆಗೆ ಅನೈತಿಕ ಸಂಬಂಧ ಹೊಂದಿದ್ದ. ವಿಧವೆಗೆ ಈಗಾಗಲೇ ಒಂದು ಮಗುವಿದೆ. ಅಪ್ಪಣ್ಣನ ಜತೆಗಿನ ಅನೈತಿಕ ಸಂಬಂಧಕ್ಕೆ ಈ ಹೆಣ್ಣು ಮಗು ಜನಿಸಿದೆ. ಆದರೆ, ಈ ಮಗುವಿಗೆ ಸೀಳು ತುಟಿ ಇದ್ದಿದ್ದರಿಂದ ಅಪ್ಪಣ್ಣ ಹಾಗೂ ಆ ಮಹಿಳೆಗೆ ಆ ಮಗು ಬೇಕಿರಲಿಲ್ಲ.

ಹೀಗಾಗಿ ಇಬ್ಬರೂ ವಿರಾಜಪೇಟೆಯಿಂದ ಬೆಂಗಳೂರಿಗೆ ಬಂದು ರಸ್ತೆ ಬದಿ ನಿಲುಗಡೆ ಮಾಡಿದ್ದ ಆಟೋ ರಿಕ್ಷಾದಲ್ಲಿ ಆ ಮಗುವನ್ನು ಮಲಗಿಸಿ ಪರಾರಿಯಾಗಿದ್ದರು ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ಅಪ್ಪಣ್ಣನನ್ನು ಬಂಧಿಸಿ ಜೈಲಿಗಟ್ಟಿರುವ ಪೊಲೀಸರು, ಆ ಮಹಿಳೆಗೆ ಎಚ್ಚರಿಕೆ ನೀಡಿ ಮಗುವನ್ನು ಆರೈಕೆ ಮಾಡಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!