ಆನೇಕಲ್ : ಜಾತ್ರೆಯ ವೇಳೆ ಎರಡು ತೇರುಗಳು ಮಳೆ, ಗಾಳಿಗೆ ವಾಲಿ ಬಿದ್ದು ಒಬ್ಬ ವ್ಯಕ್ತಿ ಮೃತಪಟ್ಟ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೊಸ್ಕೂರು ಗ್ರಾಮದಲ್ಲಿ ಶನಿವಾರ ನಡೆದಿದೆ.
ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಮಿಳುನಾಡಿನ ಹೊಸೂರು ಮೂಲದ ಲೋಹಿತ್ (16), ಕೆಂಗೇರಿಯ ಜ್ಯೋತಿ (14) ಮೃತಪಟ್ಟವರು. ತೇರು ಬಿದ್ದಾಗ ಅದರಡಿ ಸಿಲುಕಿದ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಶನಿವಾರ ಹುಸ್ಕೂರಿನ ಮದ್ದೂರಮ್ಮ ಜಾತ್ರೆ ನಡೆಯುತ್ತಿತ್ತು. ಜಾತ್ರೆಗೆ 10 ಗ್ರಾಮಗಳಿಂದ ತೇರುಗಳು ಬಂದಿದ್ದವು. ಈ ವೇಳೆ ಮಳೆ ಬೀಳಲು ಆರಂಭಿಸಿತ್ತು. ಅಲ್ಲದೆ ಗಾಳಿಯೂ ಜೋರಾಗಿ ಬೀಸಿದ್ದರಿಂದ ರಾಯಸಂದ್ರ ಮತ್ತು ನೆಲಮಂಗಲ ಗ್ರಾಮಸ್ಥರು ತಂದಿದ್ದ ತೇರು ಗಾಳಿ ಮಳೆಗೆ ವಾಲಿ ಬಿದ್ದಿವೆ. ಇನ್ನೇನು ಸನ್ನಿಧಾನ ತಲುಪುವಷ್ಟರಲ್ಲಿ ರಾಯಸಂದ್ರದ ತೇರು ಬಿದ್ದಾಗ ಅದರಡಿ ಸಿಲುಕಿದ ಲೋಕೇಶ್, ಜ್ಯೋತಿ ಸ್ಥಳದಲ್ಲೇ ಮೃತಪಟ್ಟರು.
ರಾಯಸಂದ್ರದ ತೇರು 100 ಅಡಿಗಳಿಗೂ ಎತ್ತರವಾಗಿತ್ತು. ಮರಗಳಿಂದ ನಿರ್ಮಿಸಿದ ತೇರನ್ನು ರಾಸುಗಳು ಮತ್ತು ಭಕ್ತರು ದೇವಾಲಯದ ಬಳಿ ಎಳೆದು ತರುತ್ತಿದ್ದರು. ಈ ವೇಳೆ ಅವಘಡ ನಡೆದಿದೆ.