ಅರಣ್ಯ ಒತ್ತುವರಿಯಾಗುವುದನ್ನು ತಡೆಯಲು ಉಪಗ್ರಹ ಕಣ್ಗಾವಲು ವ್ಯವಸ್ಥೆ ‘ಅರಣ್ಯ ಹೊದಿಕೆ ಬದಲಾವಣೆ ಮುನ್ನೆಚ್ಚರಿಕೆ ವ್ಯವಸ್ಥೆ’ಯನ್ನು ಸಮರ್ಪಕವಾಗಿ ಬಳಸಿಕೊಂಡು, ಒತ್ತುವರಿ ತಡೆ ಹಾಗೂ ಒತ್ತುವರಿದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದರು.
ಬೆಂಗಳೂರು : ಅರಣ್ಯ ಭೂಮಿ ಸಂರಕ್ಷಣೆ ಆಗಿ ಹೊಸದಾಗಿ ಅರಣ್ಯ ಒತ್ತುವರಿಯಾಗುವುದನ್ನು ತಡೆಯಲು ಉಪಗ್ರಹ ಕಣ್ಗಾವಲು ವ್ಯವಸ್ಥೆ ‘ಅರಣ್ಯ ಹೊದಿಕೆ ಬದಲಾವಣೆ ಮುನ್ನೆಚ್ಚರಿಕೆ ವ್ಯವಸ್ಥೆ’ಯನ್ನು ಸಮರ್ಪಕವಾಗಿ ಬಳಸಿಕೊಂಡು, ಒತ್ತುವರಿ ತಡೆ ಹಾಗೂ ಒತ್ತುವರಿದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದರು.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಈಶ್ವರ್ ಖಂಡ್ರೆ, ರಾಜ್ಯದ ಭೌಗೋಳಿಕ ವಿಸ್ತೀರ್ಣಕ್ಕೆ ಶೇ.33ರಷ್ಟು ಹಸಿರು ಹೊದಿಕೆ ಇರಬೇಕು. ಆದರೆ, ರಾಜ್ಯದಲ್ಲಿ ಶೇ. 22ರಷ್ಟು ಹಸಿರು ಹೊದಿಕೆಯಿದೆ. ಸದ್ಯ ಇರುವ ಅರಣ್ಯವನ್ನೂ ಒತ್ತುವರಿ ಮಾಡಲಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕಿದೆ. ಅದಕ್ಕಾಗಿ ಅಕ್ಷಾಂಶ, ರೇಖಾಂಶ ಆಧಾರಿತ ಜಿಯೋ ರೆಫರೆನ್ಸ್ ಮೂಲಕ ಗುರುತಿಸಲಾಗಿರುವ ಅರಣ್ಯ ಗಡಿಯೊಳಗೆ ಯಾವುದೇ ಒತ್ತುವರಿಯಾಗದಂತೆ ತಡೆಯಲು ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್ಆರ್ಎಸ್ಎಸಿ) ಸಹಯೋಗದಲ್ಲಿ ಸಿದ್ಧಪಡಿಸಲಾಗಿರುವ ಅರಣ್ಯ ಹೊದಿಕೆ ಬದಲಾವಣೆ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂದು ತಿಳಿಸಿದರು.
ಏನಿದು ಅರಣ್ಯ ಬದಲಾವಣೆ ಮುನ್ನೆಚ್ಚರಿಕೆ ವ್ಯವಸ್ಥೆ?
ಕಾಡ್ಗಿಚ್ಚು ಕಾಣಿಸಿಕೊಂಡಾಗ ಸಕಾಲದಲ್ಲಿ ಮಾಹಿತಿ ನೀಡುವ ದೂರಸಂವೇದಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಮಾದರಿಯಲ್ಲೇ ಹೊಸ ಅರಣ್ಯ ಒತ್ತುವರಿಯಾದಾಗ ಅಥವಾ ಅರಣ್ಯ ಸ್ವರೂಪ ಬದಲಾದಾಗ ಸಂಬಂಧಿತ ವಲಯ ಅರಣ್ಯಾಧಿಕಾರಿಗೆ ಮಾಹಿತಿ ರವಾನಿಸುವ ವ್ಯವಸ್ಥೆಯಾಗಿದೆ. ಕೆಎಸ್ಆರ್ಎಸ್ಎಸಿ ಸಹಯೋಗದಲ್ಲಿ ನೂತನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಕಳೆದ ಕೆಲ ತಿಂಗಳಿನಿಂದ ಪ್ರಾಯೋಗಿಕವಾಗಿ ಬಳಕೆ ಮಾಡಲಾಗುತ್ತಿದೆ. ಅದರಂತೆ ಜುಲೈನಿಂದ ನವೆಂಬರ್ 3ರವರೆಗೆ 167 ಎಚ್ಚರಿಕೆ ಸಂದೇಶ ಬಂದಿದ್ದು, ಅವುಗಳನ್ನು ಸ್ಥಳೀಯ ಅಧಿಕಾರಿಗಳಿಗೆ ರವಾನಿಸಿ ಕ್ರಮ ಕೈಗೊಳ್ಳಲಾಗಿದೆ.