ಎತ್ತಿನಹೊಳೆ ಯೋಜನೆಗೆ ಅರಣ್ಯ ಪ್ರದೇಶ ಬಳಕೆ : ಕೇಂದ್ರ ಷರತ್ತಿನ ಅಸ್ತು

Published : Mar 18, 2026, 08:34 AM IST
Ettinahole Project

ಸಾರಾಂಶ

ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ತುಮಕೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ ನೀರೋದಗಿಸುವ ಎತ್ತಿನಹೊಳೆ ಯೋಜನೆಗೆ ಹಾಸನ ಹಾಗೂ ತುಮಕೂರು ಜಿಲ್ಲೆಗಳ 277 ಎಕರೆ (111 ಹೆಕ್ಟೇರ್‌) ಅರಣ್ಯಪ್ರದೇಶದ ಬಳಕೆಗೆ ಕೇಂದ್ರ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಷರತ್ತುಬದ್ಧ ಅನುಮತಿ ನೀಡಿದೆ.

 ನವದೆಹಲಿ :  ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ತುಮಕೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ ನೀರೋದಗಿಸುವ ಎತ್ತಿನಹೊಳೆ ಯೋಜನೆಗೆ ಹಾಸನ ಹಾಗೂ ತುಮಕೂರು ಜಿಲ್ಲೆಗಳ 277 ಎಕರೆ (111 ಹೆಕ್ಟೇರ್‌) ಅರಣ್ಯಪ್ರದೇಶದ ಬಳಕೆಗೆ ಕೇಂದ್ರ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಷರತ್ತುಬದ್ಧ ಅನುಮತಿ ನೀಡಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಭಾವನಾತ್ಮಕವಾಗಿ ಮನವಿ ಮಾಡಿದ್ದರು. ಇದಕ್ಕೆ ಕೇಂದ್ರ ಸ್ಪಂದಿಸಿದೆ. ಇದರಿಂದ, ಸಚಿವಾಲಯದ ತಕರಾರಿನ ಕಾರಣದಿಂದ ವರ್ಷದಿಂದ ಸ್ಥಗಿತಗೊಂಡಿದ್ದ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಮತ್ತೆ ಚಾಲನೆ ಸಿಗಲಿದೆ.

ಈಗ ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ ಎತ್ತಿನಹೊಳೆ ಯೋಜನೆಗೆ ಅರಣ್ಯ ಭೂಮಿ ಬಳಕೆಗೆ ಕೇಂದ್ರ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಷರತ್ತುಬದ್ಧ ಒಪ್ಪಿಗೆ ನೀಡಿದ್ದು, ದೇವೇಗೌಡರ ಪಯತ್ನದ ಫಲವಾಗಿ ಇದು ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆಯಲ್ಲಿ ಮಾತನಾಡಿದ್ದ ದೇವೇಗೌಡ, ರಾಜ್ಯದ ಕಾಂಗ್ರೆಸ್ ಸರ್ಕಾರದ ತಪ್ಪುಗಳಿಂದಾಗಿಯೇ ಈ ಯೋಜನೆ ವಿಳಂಬವಾಗುತ್ತಿದೆ. ರಾಜ್ಯ ಸರ್ಕಾರ ತನ್ನ ತಪ್ಪುಗಳನ್ನು ಮರೆಮಾಚಿಕೊಳ್ಳಲು ವಿನಾಕಾರಣ ಕೇಂದ್ರದ ಮೇಲೆ ಸತತ ಆರೋಪಗಳನ್ನು ಮಾಡುತ್ತಿದೆ. ಯೋಜನೆಯ ವಿಳಂಬದಿಂದ ನುಣಚಿಕೊಳ್ಳುತ್ತಿದೆ. ಹೀಗಾಗಿ, ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದರು.

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹರಿಸುವುದಾಗಿ ಎತ್ತಿನಹೊಳೆ ಯೋಜನೆಯನ್ನು ರೂಪಿಸಲಾಯಿತು. ಆ ಜಿಲ್ಲೆಗಳಿಗೆ ನೀರು ಹರಿಸುವುದು ಹಾಗಿರಲಿ, ಸಕಲೇಶಪುರಕ್ಕೆ ಹತ್ತಿರದಲ್ಲಿರುವ ಹಾಸನದಲ್ಲಿರುವ ಅರಸೀಕೆರೆಗೆ ಕೂಡ ನೀರು ಬಂದಿಲ್ಲ. ಅಲ್ಲದೆ, ಯೋಜನೆಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಅನೇಕ ಉಲ್ಲಂಘನೆಗಳನ್ನು ಮಾಡಿದ್ದು, ಇದನ್ನು ಕೇಂದ್ರ ಸರಕಾರ ಗಮನಿಸಿ ಸರಿಪಡಿಸಬೇಕು ಎಂದು ದೇವೇಗೌಡರು ಕೋರಿದ್ದರು.

ಆ ದಿನ ರಾಜ್ಯಸಭೆಯಲ್ಲಿ ಹಾಜರಿದ್ದ ಕೇಂದ್ರ ಅರಣ್ಯ ಮತ್ತು ಜೀವಿಶಾಸ್ತ್ರ ಖಾತೆ ಸಚಿವರಾದ ಭೂಪೇಂದ್ರ ಯಾದವ್ ಅವರು ಮಾಜಿ ಪ್ರಧಾನಿಯ ಮನವಿಗೆ ಸ್ಪಂದಿಸಿದ್ದರು. ಅಲ್ಲದೆ, ಈ ಬಗ್ಗೆ ಸಂಬಂಧಿತ ಸಚಿವರನ್ನು ಭೇಟಿಯಾಗಿ ಎತ್ತಿನಹೊಳೆ ಬಗ್ಗೆ ಚರ್ಚೆ ನಡೆಸಿದ್ದರು

ಸಚಿವಾಲಯದ ತಕರಾರೇನು?:

ಈ ಹಿಂದೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವಕ್ಕೆ 2025ರ ಜೂನ್‌ 24 ಹಾಗೂ ಅಕ್ಟೋಬರ್‌ 27ರಂದು ನಡೆದ ಸಭೆಗಳಲ್ಲಿ ಒಪ್ಪಿಗೆ ಸಿಕ್ಕಿರಲಿಲ್ಲ. ಯೋಜನೆಯ ಬಗ್ಗೆ ಹೆಚ್ಚುವರಿ ಮಾಹಿತಿ ಕೇಳಿದ್ದ ಸಮಿತಿ, ಸಚಿವಾಲಯದ ಪ್ರಾದೇಶಿಕ ಕಚೇರಿಯಿಂದ ಸ್ಥಳ ಪರಿಶೀಲನಾ ವರದಿಯನ್ನು ತರಿಸಿಕೊಂಡಿತ್ತು. ಯಾವುದೇ ಅನುಮತಿ ಪಡೆಯದೆ ಅರಣ್ಯ ಭೂಮಿಯಲ್ಲಿ ಕಾಮಗಾರಿ ನಡೆಸಲಾಗಿದೆ ಎಂದು ವರದಿ ನೀಡಿದ್ದ ಪ್ರಾದೇಶಿಕ ಕಚೇರಿ, ಇದರಲ್ಲಿ ಅರಣ್ಯ ಇಲಾಖೆಯ ಲೋಪವೂ ಇದೆ ಎಂದು ಬೆಳಕು ಚೆಲ್ಲಿತ್ತು.

‘ಪರಿಷ್ಕೃತ ಪ್ರಸ್ತಾವದ ಪ್ರಕಾರ, ಯೋಜನೆಗೆ 111 ಹೆಕ್ಟೇರ್ ಅರಣ್ಯದ ಬದಲು 108 ಹೆಕ್ಟೇರ್ ಬಳಸಿಕೊಳ್ಳಲಾಗುವುದು. 69.80 ಹೆಕ್ಟೇರ್‌ನಲ್ಲಿ ಕಾಲುವೆ ನಿರ್ಮಾಣ ಮಾಡಲಾಗುವುದು. ಹೂಳು ಸುರಿಯುವ ಪ್ರದೇಶವನ್ನು 103 ಹೆಕ್ಟೇರ್‌ನಿಂದ 38 ಹೆಕ್ಟೇರ್‌ಗೆ ಇಳಿಸಲಾಗಿದೆ. ಕಾಮಗಾರಿ ನಡೆಸುವ ಪ್ರದೇಶಗಳಲ್ಲಿ ಹೂಳು ಸುರಿಯುವುದಿಲ್ಲ. ಜತೆಗೆ, ಹಾಸನ ಜಿಲ್ಲೆಯಲ್ಲಿ 107 ಹೆಕ್ಟೇರ್‌ನಲ್ಲಿ ನಿಯಮ ಉಲ್ಲಂಘನೆ ಆಗಿದೆ. ಈ ಪ್ರದೇಶವು ಕಂದಾಯ ದಾಖಲೆಗಳಲ್ಲಿ ಅರಣ್ಯವೆಂದು ದಾಖಲಾಗಿಲ್ಲ. ರೈತರು ಸಾಗುವಳಿ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಸಮಜಾಯಿಷಿ ನೀಡಿದೆ. ನಿಯಮ ಉಲ್ಲಂಘನೆ ಬಗ್ಗೆ ಅರಣ್ಯ ಇಲಾಖೆಯಿಂದ ವಿವರಣೆ ಕೇಳಲಾಗಿದೆ’ ಎಂದು ಪ್ರಾದೇಶಿಕ ಕಚೇರಿ ವರದಿ ಸಲ್ಲಿಸಿತ್ತು.

ಆ ಬಳಿಕ ಸಚಿವಾಲಯವು ರಾಜ್ಯ ಅರಣ್ಯ ಇಲಾಖೆಯಿಂದ ಇನ್ನಷ್ಟು ವಿವರಣೆ ಕೇಳಿತ್ತು. ಅರಣ್ಯ ಸಚಿವಾಲಯದಿಂದ ಅನುಮತಿ ಪಡೆಯಲು ಕರ್ನಾಟಕ ಸರ್ಕಾರ ವರ್ಷದಿಂದ ಹರಸಾಹಸ ಪಟ್ಟಿತ್ತು. ಇದೀಗ, ಕೇಂದ್ರದಿಂದ ಅನುಮೋದನೆ ದೊರಕಿದೆ.

ರಾಜ್ಯದ ನಿವೇದನೆ ಏನಾಗಿತ್ತು?:

‘ಬರಪೀಡಿತ ಬಯಲುಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು 252 ಕಿ.ಮೀ.ಗುರುತ್ವಾಕರ್ಷಣೆ ಕಾಲುವೆ ನಿರ್ಮಿಸಲಾಗುತ್ತಿದ್ದು, 246 ಕಿ.ಮೀ. ಕಾಮಗಾರಿ ಮುಗಿದಿದೆ. ಕೇವಲ ಆರು ಕಿ.ಮೀ. ಕಾಮಗಾರಿ ಅರಣ್ಯ ಪ್ರದೇಶದಲ್ಲಿ ಸಾಗಲಿದೆ. ಅರಣ್ಯ ತೀರುವಳಿ ಪ್ರಸ್ತಾವಕ್ಕೆ ಅನುಮೋದನೆ ನೀಡಿದರೆ 75 ಲಕ್ಷ ಜನರಿಗೆ ನೀರು ಪೂರೈಸಲು ಅನುಕೂಲವಾಗಲಿದೆ‘ ಎಂದು ರಾಜ್ಯ ಸರ್ಕಾರ ನಿವೇದಿಸಿಕೊಂಡಿತ್ತು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೈಕ್‌ ಸವಾರನಿಗೆ ಸಹಾಯ ಮಾಡಿ ₹1000 ದಂಡ ತೆತ್ತ ಕಾರು ಚಾಲಕ!
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಶೈಕ್ಷಣಿಕ ಯೋಜನೆಗಳು ಪ್ರಗತಿಯಲ್ಲಿ