ಶಾಲೆಗೆ ಬಂದ ಮಕ್ಕಳಿಗೆ ಸಿಹಿ, ಹೂಗುಚ್ಚ ನೀಡಿ ಸ್ವಾಗತಿಸಿದ ಬಿಇಒ

KannadaprabhaNewsNetwork | Published : Jun 4, 2025 12:30 AM
ತಾಲೂಕಿನಲ್ಲಿ ಈ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಪಟ್ಟಣದ ಎನ್.ಎಚ್.ಪಿ.ಎಸ್ ಶಾಲೆಯಲ್ಲಿನ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ಹೂಗುಚ್ಛ ನೀಡುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನಲ್ಲಿ ಈ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಪಟ್ಟಣದ ಎನ್.ಎಚ್.ಪಿ.ಎಸ್ ಶಾಲೆಯಲ್ಲಿನ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ಹೂಗುಚ್ಛ ನೀಡುವ ಮೂಲಕ ಚಾಲನೆ ನೀಡಿದರು.ಮಕ್ಕಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಇಲ್ಲಿನ ಮುಖ್ಯಶಿಕ್ಷಕರು ಎಲ್.ಕೆ.ಜಿ ಮತ್ತು ಯು.ಕೆ.ಜಿಯನ್ನು ಎಸ್.ಡಿ.ಎಂಸಿ ಸದಸ್ಯರು, ಇಲಾಖೆಯ ಸಹಮತದಲ್ಲಿ ಪ್ರಾರಂಭಿಸಿದ್ದಾರೆ. ಇದರ ಜೊತೆಗೆ 6 ಮತ್ತು 7 ತರಗತಿಗಳಿಗೂ ಆಂಗ್ಲಮಾಧ್ಯಮ ನೀಡಬೇಕೆಂದು ಮನವಿಯನ್ನೂ ಸಹ ಸಲ್ಲಿಸಿದ್ದಾರೆ. ಈ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಪಟ್ಟಣ ಪಂಚಾಯಿತಿಯಿಂದ ಶೌಚಾಲಯವನ್ನು ನಿರ್ಮಿಸಿಕೊಡಲಾಗಿದೆ. ವಿವೇಕ ಯೋಜನೆಯಡಿ ನೂತನ ಕೊಠಡಿಯನ್ನು ಸಹ ಇಲ್ಲಿ ನಿರ್ಮಾಣ ಮಾಡಿಕೊಡಲಾಗಿದೆ ಎಂದರು.ಶಿಕ್ಷಕರು, ಪೋಷಕರು ಮತ್ತು ಅಧಿಕಾರಿಗಳ ಪರಿಶ್ರಮದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿಯೇ ತುರುವೇಕೆರೆ ಸತತ ಎರಡನೇ ಬಾರಿ ಎರಡನೇ ಸ್ಥಾನಗಳಿಸಿರುವುದು ಹೆಮ್ಮೆಯ ಸಂಗತಿ. ಈಗಾಗಲೇ ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ. ದಾಖಲಾತಿ ಹೆಚ್ಚಿಸುವಂತೆ ಕ್ರಮವಹಿಸಲಾಗಿದೆ ಎಂದರು. ತಾಲ್ಲೂಕು ಅಕ್ಷರದಾಸೋಹದ ಸಹಾಯಕ ನಿರ್ದೇಶಕಿ ಎಚ್.ಕೆ.ಸವಿತ ಮಾತನಾಡಿ, ಎನ್.ಎಚ್.ಪಿ.ಎಸ್ ಶಾಲೆಯ ಸುತ್ತಮುತ್ತಲೂ ಐತಿಹಾಸಿಕ ದೇವಾಲಯಗಳಿವೆ. ಹಾಗಾಗಿ ಇದೊಂದು ಆಧ್ಯಾತ್ಮಕ ನೆಲೆಯಾಗಿದೆ. ಮಕ್ಕಳ ಕಲಿಗೆ ಉತ್ತಮ ವಾತಾವರಣವಿದೆ. ಪ್ರಸ್ತಕ ಸಾಲಿನಲ್ಲಿ ಎರಡು ವರ್ಷ ಶಿಕ್ಷಣದಲ್ಲಿ ಹರುಷ ಎಂಬ ಘೋಷ ವಾಕ್ಯದೊಂದಿಗೆ ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನಾ ನಟೇಶ್, ಮುಖ್ಯ ಶಿಕ್ಷಕರಾದ ನಂರಾಜು ಮುನಿಯೂರು, ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕರ್, ಬಿಆರ್.ಸಿ ಅಧಿಕಾರಿ ಸುರೇಶ್, ಬಿಆರ್.ಪಿ ಸುರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಷಣ್ಮುಖಪ್ಪ, ಶಿಕ್ಷಕರುಗಳಾದ ನೇತ್ರಾವತಿ, ಪುಷ್ಪಾವತಿ, ಸವಿತ, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.