ಧರ್ಮದ ಹೆಸರಲ್ಲಿ ಸಮಾಜ ಒಡೆಯುವವರಿಂದ ಎಚ್ಚರದಿಂದಿರಿ : ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Nov 28, 2024, 12:32 AM ISTUpdated : Nov 28, 2024, 07:21 AM IST
ಬಳ್ಳಾರಿಯಲ್ಲಿ ಬುಧವಾರ ಸಂಜೆ ಕೆಥೋಲಿಕ್ ಕ್ರೈಸ್ತ ಧರ್ಮ ಕ್ಷೇತ್ರದಿಂದ ನಡೆದ ಬಳ್ಳಾರಿ ಧರ್ಮಕ್ಷೇತ್ರ ಅಮೃತಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಿ.ಎಂ.ಸಿದ್ಧರಾಮಯ್ಯ ಅವರು ಮಾತನಾಡಿದರು.  | Kannada Prabha

ಸಾರಾಂಶ

ಜಾತಿ, ಧರ್ಮಗಳ ಹೆಸರಿನಲ್ಲಿ ಕೆಲವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ವಿರೋಧಿಯಾಗಿ ವರ್ತಿಸುತ್ತಿದ್ದಾರೆ. ಅಂತಹವರಿಂದ ಸದಾ ಎಚ್ಚರದಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಳ್ಳಾರಿ: ಜಾತಿ, ಧರ್ಮಗಳ ಹೆಸರಿನಲ್ಲಿ ಕೆಲವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ವಿರೋಧಿಯಾಗಿ ವರ್ತಿಸುತ್ತಿದ್ದಾರೆ. ಅಂತಹವರಿಂದ ಸದಾ ಎಚ್ಚರದಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಕೆಥೋಲಿಕ್ ಕ್ರೈಸ್ತ ಧರ್ಮ ಕ್ಷೇತ್ರದಿಂದ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಬಳ್ಳಾರಿ ಧರ್ಮಕ್ಷೇತ್ರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯಾವುದೇ ಧರ್ಮವಾಗಲಿ ಸಮಾಜದ ಒಳಿತನ್ನು ಬಯಸುತ್ತದೆಯೇ ವಿನಃ ಸಮಾಜ ಒಡೆಯಲು ಬೋಧಿಸುವುದಿಲ್ಲ. ರಾಷ್ಟ್ರಕವಿ ಕುವೆಂಪು ಹೇಳಿದಂತೆ ಈ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಾದರೆ ಎಲ್ಲರೂ ಸಹಿಷ್ಣುತೆಯಿಂದ ಜೀವನ ನಡೆಸಬೇಕು. ಆದರೆ, ಕೆಲವು ಶಕ್ತಿಗಳು ಸಂವಿಧಾನ ವಿರೋಧಿಯಾಗಿವೆ. ಬಸವಾದಿ ಶರಣರ ಸಮ ಸಮಾಜದ ನಿರ್ಮಾಣದ ಆಶಯ ಇಲ್ಲದವರು ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿರುತ್ತಾರೆ. ಎಲ್ಲ ಸಮುದಾಯಗಳು ಒಗ್ಗಟ್ಟು ಹಾಗೂ ಸಹಬಾಳ್ವೆಯಿಂದ ಜೀವನ ನಡೆಸುವಂತಾದರೆ ಯಾವುದೇ ಜಾತಿ ಶಕ್ತಿಗಳು ಏನು ಮಾಡಲು ಸಾಧ್ಯವಾಗದು ಎಂದು ತಿಳಿಸಿದರು.

ಕ್ರೈಸ್ತ ಮಿಷನರಿಗಳ ಕೊಡುಗೆ ಅಪಾರ:

ಕ್ರೈಸ್ತ ಮಿಷನರಿಗಳು ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯಕ್ಕೆ ಅಪಾರವಾದ ಕೊಡುಗೆ ನೀಡಿವೆ. ಈ ಹಿಂದೆ ಬಡ ಸಮುದಾಯಗಳಿಗೆ ಶಿಕ್ಷಣ ಕೈಗೆಟಕುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಕ್ರೈಸ್ತ ಮಿಷನರಿಗಳು ಎಲ್ಲ ಕಡೆ ಶಾಲೆಗಳನ್ನು ತೆರೆದು ಗುಣಮಟ್ಟದ ಶಿಕ್ಷಣ ನೀಡಿದವು. ಇಂದಿಗೂ ಶೈಕ್ಷಣಿಕ ಹಾಗೂ ಆರೋಗ್ಯ ವಲಯದಲ್ಲಿ ಕ್ರೈಸ್ತ ಧರ್ಮದ ಕೊಡುಗೆ ದೊಡ್ಡದಿದೆ ಎಂದರು.

ನಾನು ಹಿಂದೂ ವಿರೋಧಿಯಲ್ಲ:

ನಾನು ಹಿಂದೂ ವಿರೋಧಿಯಂತೆ ಬಿಂಬಿಸಲಾಗುತ್ತಿದೆ. ಆದರೆ, ನಾನು ಯಾವುದೇ ಧರ್ಮದ ವಿರೋಧಿಯಲ್ಲ. ನಾನು ಹಿಂದೂ ಧರ್ಮವನ್ನು ಪ್ರೀತಿಸಿದಂತೆಯೇ ಉಳಿದ ಧರ್ಮಗಳನ್ನೂ ಪ್ರೀತಿಸುತ್ತೇನೆ; ಗೌರವಿಸುತ್ತೇನೆ. ಜಾತಿ ವ್ಯವಸ್ಥೆಯಿಂದಾಗಿಯೇ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ. ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತಳ ಸಮುದಾಯಗಳು ಪ್ರಗತಿ ಕಂಡುಕೊಂಡರೆ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಬಹುದು. ಇದಕ್ಕಾಗಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಕಲ್ಯಾಣಕ್ಕಾಗಿ ಸರ್ಕಾರ ಶ್ರಮಿಸುತ್ತಿದೆ. ಇದನ್ನು ಸಹಿಸದ ಕೆಲವರು ಗ್ಯಾರಂಟಿ ಯೋಜನೆಗಳ ವಿರುದ್ಧ ಅಪ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಯಾರು ಏನೇ ಹೇಳಲಿ, ನಾನು ಮಾತ್ರ ಬಡವರ ಪರವಾಗಿ ನಿಲ್ಲುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಜ.ಕೊಟ್ಟೂರು ಸಂಸ್ಥಾನಮಠದ ನಿರಂಜನ ಕೊಟ್ಟೂರು ಬಸವಲಿಂಗ ಶ್ರೀ, ಜಮಾತೆ ಇಸ್ಲಾಮಿ ಹಿಂದ್‌ನ ಬೆಳಗಾವಿಯ ಡಾ.ಮಹ್ಮದ್, ಕಲ್ಯಾಣಸ್ವಾಮಿ ಮಠದ ಶ್ರೀ ಕಲ್ಯಾಣಸ್ವಾಮಿ, ಬೆಂಗಳೂರು ಮಹಾಧರ್ಮ ಕ್ಷೇತ್ರದ ಡಾ.ಪೀಟರ್ ಮಚಾದೋ, ಇಂಧನ ಸಚಿವ ಕೆ.ಜೆ. ಜಾರ್ಜ್‌, ಶಾಸಕರಾದ ಬಿ.ನಾಗೇಂದ್ರ, ನಾರಾ ಭರತ್‌ ರೆಡ್ಡಿ, ಅನ್ನಪೂರ್ಣ ತುಕಾರಾಂ, ಬಿ.ಎಂ.ನಾಗರಾಜ್, ಜೆ.ಎನ್‌. ಗಣೇಶ್, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್, ವೈ.ಬಿ. ಜೋಸೆಫ್, ಆರೋಗ್ಯನಾಥನ್ ಸೇರಿದಂತೆ ಬಳ್ಳಾರಿ ಕ್ರೈಸ್ತ ಧರ್ಮ ಕ್ಷೇತ್ರದ ಧರ್ಮಗುರುಗಳು ಭಾಗವಹಿಸಿದ್ದರು. ಬಳ್ಳಾರಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಬಿಷಪ್ ಹೆನ್ರಿ ಡಿಸೋಜ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿ ಧರ್ಮಕ್ಷೇತ್ರ ಮಹೋತ್ಸವ ಅಂಗವಾಗಿ ಧರ್ಮಕ್ಷೇತ್ರದಿಂದ ಬಡವರಿಗೆ ಮನೆ ಹಂಚಿಕೆಯ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

ನಾನು ನೇರವಾಗಿ ಐದನೇ ತರಗತಿಗೆ ಸೇರಿದೆ:

ಶಿಕ್ಷಣದ ಮಹತ್ವ ಕುರಿತು ಸಮಾರಂಭದಲ್ಲಿ ತಿಳಿಸಿದ ಸಿಎಂ ಸಿದ್ದರಾಮಯ್ಯ, ನಾನು ಓದು ಕಲಿತಿದ್ದರಿಂದಾಗಿಯೇ ಮುಖ್ಯಮಂತ್ರಿಯಾದೆ. ಇಲ್ಲದಿದ್ದರೆ ದನ ಮೇಯಿಸಲು ಹೋಗುತ್ತಿದೆ ಎಂದರು.

ನಮ್ಮಪ್ಪ ವೀರಮಕ್ಕಳ ಕುಣಿತಕ್ಕೆ ಸೇರಿಸಿದ್ದರು. ಎರಡು ವರ್ಷದ ಕುಣಿತ ಕಲಿತೆ. ಇದರಿಂದ ಶಿಕ್ಷಣ ಮೊಟಕಾಯಿತು. ಬಳಿಕ ನಮ್ಮೂರ ಶಾಲೆಯ ಹೆಡ್‌ಮಾಸ್ಟರ್ ರಾಜಪ್ಪ ನಮ್ಮಪ್ಪನ ಬಳಿ ಬಂದು ನನ್ನನ್ನು ಶಾಲೆಗೆ ಸೇರಿಸುವಂತೆ ಮನವೊಲಿಸಿದರು. ಅಲ್ಲದೆ, ನಾನು ಓದಿನಲ್ಲಿ ಮುಂದಿದ್ದೆ ಎಂಬ ಕಾರಣಕ್ಕಾಗಿಯೇ ನೇರವಾಗಿ ಐದನ ತರಗತಿಗೆ ಸೇರಿಸಿದರು ಎಂದು ಸಿಎಂ ಸಿದ್ದರಾಮಯ್ಯ ಬಾಲ್ಯವನ್ನು ಸ್ಮರಿಸಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ
ಸುದ್ದಿ ಓದದಿದ್ದರೆ ಡಿಜಿಟಲ್‌ ಅರೆಸ್ಟ್‌ ಆಗ್ತಿರಿ!