ಗಜೇಂದ್ರಗಡ: ಬ್ರಿಟಿಷರ ಹುಟ್ಟಡಗಿಸಿದ್ದ ಭಗತ್ಸಿಂಗ್ ಜೀವನ ಕೇವಲ ಇತಿಹಾಸವಲ್ಲ, ಯುವ ಸಮೂಹದ ಧೈರ್ಯ ಹಾಗೂ ತ್ಯಾಗದ ಪ್ರತೀಕ ಎಂದು ಚನ್ನು ಪಾಟೀಲ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಉಮೇಶ ಪಾಟೀಲ ತಿಳಿಸಿದರು.
೨೩ನೇ ವಯಸ್ಸಿನಲ್ಲಿ ಮರಣದಂಡನೆಗೆ ಒಳಪಟ್ಟ ಭಗತ್ಸಿಂಗ್ ನಿಜವಾದ ರಾಷ್ಟ್ರಪ್ರೇಮ ಕೇವಲ ಮಾತಿನಲ್ಲಿ ಅಲ್ಲ, ಕೃತಿಯಲ್ಲಿ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯವಾಗಿದ್ದಾರೆ. ಇಂತಹ ಮಹನೀಯರ ತ್ಯಾಗ, ಬಲಿದಾನದಿಂದ ಸಿಕ್ಕ ಸ್ವಾತಂತ್ರ್ಯ ಅಮೂಲ್ಯವಾದದ್ದು. ಯುವ ಸಮೂಹ ಭಗತ್ ಸಿಂಗ್ ಅವರ ಚಿಂತನೆಗಳನ್ನು ಅನುಸರಿಸಿ ದೇಶದ ಕ್ರಾಂತಿಯ ಶಿಲ್ಪಿಗಳಾಗಬೇಕಿದೆ ಎಂದರು.ಕಾಲೇಜಿನ ಪ್ರಾಚಾರ್ಯ ರಮೇಶ ಮರಾಠಿ ಮಾತನಾಡಿ, ಬಾಲ್ಯದಿಂದಲೇ ದೇಶಪ್ರೇಮ ಮೈಗೂಡಿಸಿಕೊಂಡ ಭಗತ್ಸಿಂಗ್ ಅವರು ವಸಹಾತುಶಾಹಿ ಆಳ್ವಿಕೆ ವಿರುದ್ಧ ಸಿಡಿದೆದ್ದರು. ದೇಶದ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಹೋರಾಟಗಾರರಲ್ಲಿ ಭಗತ್ಸಿಂಗ್ ಹೋರಾಟವು ತ್ಯಾಗ ಹಾಗೂ ಧೈರ್ಯಕ್ಕೆ ಪ್ರೇರಣೆಯಾಗಿದೆ. ಮಹನೀಯರ ಜನ್ಮದಿನದ ಪ್ರಯುಕ್ತ ನಡೆದ ಭಾಷಣ ಸ್ಪರ್ಧೆಯಲ್ಲಿ ಕಾಲೇಜಿನ ೨೦ಕ್ಕೂ ಅಧಿಕ ವಿದ್ಯಾರ್ಥಿಗಳು ಮಾಡಿದ ಭಾಷಣವು ಮತ್ತೊಮ್ಮೆ ಭಗತ್ಸಿಂಗ್ ಅವರ ಹೋರಾಟವನ್ನು ನೆನಪಿಸಿದೆ ಎಂದರು.ಭಾಷಣ ಸ್ಪರ್ಧೆಯಲ್ಲಿ ಸುಪ್ರಿಯಾ ಸುಳಿಕಲ್ಲ, ಸ್ವಪ್ನಾ ನಾಯ್ಕರ ಹಾಗೂ ಲಕ್ಷ್ಮಿ ಹಟ್ಟಿಮನಿ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದರು.ಈ ವೇಳೆ ಬಸಪ್ಪ ಜೆ, ರಮೇಶ ರಾಯ್ಕರ, ಶಿಲ್ಪಾ ದಿವಾಣದ, ಬಸಮ್ಮ ತಳವಾರ, ಸಿದ್ದಪ್ಪ ಪುಜಾರ, ವೆಂಕಟೇಶ ಕುಕ್ಕುಬಾಯಿ, ಸಂದಶ್ವಿನಿ ಕೆ.ಜಿ, ಸುನಿತಾ ಸೂಡಿ, ಸಾವಿತ್ರಿ ಹೂಗಾರ, ಲಕ್ಷ್ಮಿಕಾಂತ ಕಲಾಲ, ಸಂಗಮೇಶ ಹುನಗುಂದ, ಆಸೀಪ್ ಮೋಮಿನ, ಅಲಿ ದಿಂಡವಾದ, ಕಳಕಪ್ಪ ರಾಠೋಡ್ ಇತರರು ಇದ್ದರು.