ಗದಗ: ಜೀವನ ಸಾರ್ಥಕ ಮಾಡಿಕೊಳ್ಳುವ ಜ್ಞಾನ ದೇಗುಲ ಭಗವದ್ಗೀತೆಯಾಗಿದೆ.ನಿನ್ನ ಪಾಲಿನ ಕರ್ತವ್ಯ ನೀನು ಮಾಡು ಎಂದು ಭಗವದ್ಗೀತೆ ಹೇಳುತ್ತದೆ. ಧ್ಯಾನ ಮಾಡುವುದು ಅಂದರೆ ಕಣ್ಣು ಮುಚ್ಚಿ ಕುಳಿತುಕೊಳ್ಳುವುದು ಅಲ್ಲ. ನಿನ್ನ ತಪ್ಪಿನ ಬಗ್ಗೆ ಯೋಚನೆ ಮಾಡು,ನಿಸ್ವಾರ್ಥವಾಗಿ ಬದುಕು, ನ್ಯಾಯದಿಂದ ಬದುಕು, ಸ್ವಧರ್ಮದಲ್ಲಿ ಇರು ಎಂದು ಭಗವದ್ಗೀತೆ ತಿಳಿಸುತ್ತದೆ ಎಂದು ಭಗವದ್ಗೀತಾ ಪ್ರವಚನಕಾರ ವಾಸುದೇವ ಹೂಲಿ ಹೇಳಿದರು.
ಭಗವದ್ಗೀತಾ ಪ್ರವಚನಕಾರ ಗೌರಾಂಗಿ ಗೋಪಿನಾಥ ಪ್ರಿಯ ದೇವಿದಾಸಿ ಮಾತನಾಡಿ, ರಣರಂಗದಲ್ಲಿ ಅರ್ಜುನನು ಕೃಷ್ಣನಿಗೆ ಯುದ್ಧ ಮಾಡುವುದಿಲ್ಲವೆಂದನು, ಅಲ್ಲಿ ಅವನಿಗೆ ಕಂಡದ್ದು ಎಲ್ಲರೂ ನಮ್ಮವರು, ನನ್ನ ಶಿಕ್ಷಕ, ಗುರು, ಸಂಬಂಧಿಕರಿದ್ದಾರೆ ಹೇಗೆ ಯುದ್ಧ ಮಾಡಲಿ, ಯುವ ಸಮುದಾಯ ಯುದ್ಧಕ್ಕೆ ಬರುತ್ತಾರೆ, ಅವರ ಹೆಂಡತಿಯರು ವಿಧವೆಯರಾಗುವರು ಎಂದನು. ಇಂತಹ ಸಂದರ್ಭದಲ್ಲಿ ಗೀತೆ ಹುಟ್ಟಿತು. ಅರ್ಜುನನ ಮನಸ್ಸಿನಲ್ಲಿದ್ದ ಕಷ್ಮಲ ತೊಳೆಯಲು ಶ್ರೀ ಕೃಷ್ಣನು ಭಕ್ತಿಯೋಗ, ಕರ್ಮಯೋಗ, ಇತರೆ ಯೋಗ ಹೇಳಿದ, ಅಷ್ಟಾಂಗ ಯೋಗ ಕಲಿಸಿದ. ನಷ್ಟಮೋಹಿಯಾಗಿರು ಎಂದು ಭಗವದ್ಗೀತೆ ಕಲಿಸುತ್ತದೆ. ಈ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ತಿಳಿಸಲಾಗುತ್ತದೆ. ನಮ್ಮೆಲ್ಲರಿಗೂ ಒಂದೇ ಮನೆ ಇದೆ, ಈಗ ವಾಪಸ್ ಹೋಗಬೇಕು. ಈ ದೇಹ ಪಂಚಭೂತಗಳಿಂದ ಆಗಿದೆ, ಇದು ನಶ್ವರ. ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳಲು ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ತರಬೇತಿ ಪಡೆಯಿರಿ ಎಂದರು.
ನಿವೃತ್ತ ಪ್ರಾ.ಅನಿಲ್ ವೈದ್ಯ ಮಾತನಾಡಿ, ಸುಂದರ ಜೀವನ ಹೇಗೆ ಜೀವಿಸಬೇಕೆಂದು ಭಗವದ್ಗೀತೆ ತಿಳಿಸುತ್ತದೆ ಎಂದರು.ಡಿಜಿಎಂ ಸಂಸ್ಕ್ರತ ಪಾಠಶಾಲೆಯ ಮುಖ್ಯೋಪಾಧ್ಯಾಯ ಗಣಪತಿ ಗಾಂವ್ಕರ್ ಮಾತನಾಡಿ, ಭಗವದ್ಗೀತೆ ಜೀವನ ಧರ್ಮ ಹೇಳುತ್ತದೆ. ಅರ್ಜುನ ಹೇಗೆ ಯುದ್ಧದ ವಾತಾವರಣದಲ್ಲಿ ಒಂದು ಕಡೆ ದಿಗ್ಗಜರು ಒಂದು ಕಡೆ ಅರ್ಜುನ, ಇದನ್ನ ನೋಡಿ ವ್ಯಾಮೋಹಕ್ಕೆ ಒಳಗಾಗಿದ್ದನೋ, ಹಾಗೆಯೇ ನಾವು ಜೀವನದ ಪರೀಕ್ಷೆಯಲ್ಲಿ ಸಮಯಾನುಸಾರವಾಗಿ ಏನು ಮಾಡಬೇಕೋ ಅದನ್ನು ಮಾಡದೆ ಇಲ್ಲಸಲ್ಲದ ನೆಪ ಕೊಡುತ್ತಾ ಇರುತ್ತೇವೆ, ನಮ್ಮ ಕರ್ತವ್ಯ ನಿಮಿತ್ತವಾಗಿ ನಾವು ಮಾಡಿ, ನಮ್ಮಲ್ಲಿರುವ ಕ್ಷುದ್ರತೆ ಮರೆಯಬೇಕು ಎಂದರು.
ಈ ವೇಳೆ ಓಂ ಜ್ಞಾನವಾಣಿ ಮಾಸಪತ್ರಿಕೆಯ ಸಹ ಸಂಪಾದಕ ರಾಜಯೋಗಿ ಬಿ.ಕೆ. ಆನಂದ, ವಿಷ್ಣು.ಎಂ ಹಾಗೂ ರಾಜಯೋಗಿನಿ ಬಿ.ಕೆ. ಜಯಂತಿ ಅಕ್ಕನವರು ಭಗವದ್ಗೀತೆಯ ಹುಟ್ಟು ಮತ್ತು ಬೆಳವಣಿಗೆ ವಿಷಯದ ಕುರಿತು ಮಾತನಾಡಿದರು.700 ಶ್ಲೋಕಗಳನ್ನು ಕಂಠಪಾಟ ಮಾಡಿರುವ ಮಾಲಾ ಮಹಾಂತೇಶ್ ಶಾಗೋಟಿ ಅವರನ್ನು ಅಭಿನಂದಿಸಲಾಯಿತು ಹಾಗೂ ಎಲ್ಲ ಉಪನ್ಯಾಸಕರಿಗೆ ಈಶ್ವರೀಯ ಗೌರವ ಸಲ್ಲಿಸಲಾಯಿತು.
ಶ್ರೇಯಾ ಸುಲ್ತಾನ್ ಪುರ್ ಶ್ಲೋಕ ಪಠಣ ಮಾಡಿದರು. ಬ್ರಹ್ಮಕುಮಾರಿ ರೇಖಾ ಸ್ವಾಗತಿಸಿದರು. ಬ್ರಹ್ಮಕುಮಾರಿ ಸಾವಿತ್ರಿ ನಿರೂಪಿಸಿದರು.