ಕಾರವಾರ: ಶ್ರೀಕೃಷ್ಣನ ಬೋಧನೆಯ ಭಗವದ್ಗೀತೆಯಲ್ಲಿ ಮಾನವವ ಮನಸ್ಸಿನಲ್ಲಿನ ಹಾಗೂ ಸಮಾಜದಲ್ಲಿನ ಹಲವು ಸಮಸ್ಯೆ ಮತ್ತು ತೊಳಲಾಟಗಳಿಗೆ ಸೂಕ್ತ ಪರಿಹಾರವಿದ್ದು, ಭಗವದ್ಗೀತೆಯ ಸಂದೇಶಗಳು ಇಡೀ ಜಗತ್ತಿಗೆ ಸರ್ವಕಾಲಕ್ಕೂ ಪ್ರಸ್ತುತವಾಗುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹೇಳಿದರು.
ಮಾನವ ಜೀವನದಲ್ಲಿ ದುಃಖ, ಸಂತೋಷಗಳು ದಿನನಿತ್ಯ ಹಾದುಹೋಗುತ್ತವೆ. ಸಮಯವು ಕಳೆದು ಹೋಗುತ್ತದೆ, ಜೀವನದಲ್ಲಿ ಯಾವುದೂ ಶಾಶ್ವತವಲ್ಲವೆಂದು ತಿಳಿದು ದುಃಖ ಮತ್ತು ಸಂತೋಷವನ್ನು ಸಮಪಾಲಾಗಿ ಸ್ವೀಕರಿಸಬೇಕು. ಇತರರ ಏಳಿಗೆಗೆ ನೋಡಿ ಕೇಡನ್ನು ಬಯಸದೇ, ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಅಳಡಿಸಿಕೊಂಡು ಜೀವಿಸಿದಾಗ ಆತ್ಮತೃಪ್ತಿ ದೊರೆಯುತ್ತದೆ ಎಂದರು.
ಇಸ್ಕಾನ್ ದೇವಾಲಯದ ದಾಮೋದರ್ ನೀಲದಾಸ್ ಶ್ರೀಕೃಷ್ಣನ ಕುರಿತು ಉಪನ್ಯಾಸ ನೀಡಿ, ಶ್ರೀಕೃಷ್ಣ ಪ್ರಸಿದ್ಧಿಯಾಗಿರುವುದು ಭಗವದ್ಗೀತೆಯಿಂದ. ಇದರಲ್ಲಿ ಜಗತ್ತಿಗೆ ಉತ್ತಮ ಸಂದೇಶಗಳನ್ನು ನೀಡಿದ್ದು, ಶ್ರೀ ಕೃಷ್ಣನ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು, ಕೃಷ್ಣನನ್ನು ನೆನೆದಾಗ ಬದುಕಿನ ಕಷ್ಟಗಳೆಲ್ಲವೂ ಮಾಯವಾಗುತ್ತವೆ. ಶ್ರೀ ಕೃಷ್ಣನು ಮಾನವರಿಗೆ ಉತ್ತಮ ಜೀವನ ಸಂದೇಶ ನೀಡಿದ್ದಾನೆ ಎಂದು ತಿಳಿಸಿದರು.ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ವೆಂ. ನಾಯ್ಕ, ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತಿತರರು ಇದ್ದರು.
ಇಸ್ಕಾನ್ ದೇವಾಲಯ ದಾಮೋದರ್ ನೀಲದಾಸ್ ಸಂಗಡಿಗರಿಂದ ಭಜನೆ ಕಾರ್ಯಕ್ರಮ ನಡೆಯಿತು.