ಶಿರಸಿ:ನೈತಿಕತೆ ಮತ್ತು ಕಾನೂನು ಎರಡೂ ಪರಸ್ಪರ ಹತ್ತಿರದ ಶಬ್ದಗಳು. ಆಧ್ಯಾತ್ಮಿಕತೆ ಇಲ್ಲದ ನ್ಯಾಯ ಗಟ್ಟಿಯಾಗಿ ನಿಲ್ಲುವುದಿಲ್ಲ ಎಂದು ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿಶ್ರೀ ಹೇಳಿದರು.ಭಗವದ್ಗೀತೆ ಅಭಿಯಾನದ ಅಂಗವಾಗಿ ಬೆಳಗಾವಿಯ ನ್ಯಾಯಾಲಯದ ಸಂಕೀರ್ಣದ ಸಮುದಾಯ ಭವನದಲ್ಲಿ ಭಗವದ್ಗೀತೆ ಮತ್ತು ಕಾನೂನು ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು.ಭಗವದ್ಗೀತೆ ಮತ್ತು ಕಾನೂನಿಗೆ ಒಳಗಿನ ಹಾಗೂ ಹೊರಗಿನ ಸಂಬಂಧವೂ ಇದೆ. ಭಗವದ್ಗೀತೆ ಮತ್ತು ಕಾನೂನಿನ ಆಶಯ ಎರಡೂ ಒಂದೇ. ಪ್ರಾಚೀನ ಕಾಲದಲ್ಲಿ ಧರ್ಮಶಾಸ್ತ್ರ ಮತ್ತು ಕಾನೂನು ಒಂದೇ ಆಗಿತ್ತು. ಅನೇಕ ಕಾನೂನುಗಳು ಧರ್ಮದ ಮೂಲದಿಂದಲೇ ಬಂದಿವೆ. ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚಿಸುವಾಗ ಧರ್ಮ ಶಾಸ್ತ್ರವನ್ನು ಸಹ ಚರ್ಚೆಗೊಳಪಡಿಸಲಾಗಿತ್ತು. ಅದರಲ್ಲಿಯ ಹಲವು ಅಂಶ ಸಹ ಸಂವಿಧಾನಕ್ಕೆ ತೆಗೆದುಕೊಳ್ಳಲಾಗಿದೆ. ಧ್ಯಾನದ ಮೂಲಕ ಸಮಚಿತ್ತತೆ ಸಾಧಿಸಿಕೊಂಡು ನ್ಯಾಯ ಪೀಠದಲ್ಲಿ ಕುಳಿತುಕೊಂಡಾಗ ಸರಿಯಾದ ನ್ಯಾಯ ನೀಡಲು ಸಾಧ್ಯ ಎಂದು ಶ್ರೀಗಳು ಹೇಳಿದರು.ಭಗವದ್ಗೀತೆ ಮತ್ತು ನ್ಯಾಯಾಂಗ ವ್ಯವಸ್ಥೆ ಇನ್ನಷ್ಟು ಗಟ್ಟಿಗೊಳಿಸುವ ಅಗತ್ಯವಿದೆ. ಧರ್ಮದ ಚಿಂತನೆಗಳೇ ಅನೇಕ ಕಾನೂನುಗಳಿಗೆ ತಳಹದಿಯಾಗಿದೆ. ಅಪರಾಧ ಮಾಡಿದ ನಂತರ ಶಿಕ್ಷೆ ವಿಧಿಸುವುದು ಕಾನೂನು. ಅಪರಾಧ ಮಾಡದಂತೆ ತಡೆಯುವುದು ಭಗವದ್ಗೀತೆ ಎಂದು ತಿಳಿಸಿದರು.
ಸದಾಶಿವ ಹಿರೇಮಠ ಸ್ವಾಗತಿಸಿದರು. ಎಂ.ಬಿ. ಜಿರಲಿ ಪ್ರಾಸ್ತಾವಿಕ ಮಾತನಾಡಿದರು. ಎಂ.ಟಿ. ಹೆಗಡೆ ದಂಪತಿ ಮತ್ತು ಆರ್.ಪಿ. ಪಾಟೀಲ ದಂಪತಿ ಫಲಸಮರ್ಪಣೆ ಮಾಡಿದರು. ರಾಜೇಶ್ವರಿ ಕಾಪ್ಸೆ ಮತ್ತು ಪ್ರತಿಮಾ ಜೋಶಿ ಧ್ಯಾನ ಶ್ಲೋಕ ಹಾಡಿದರು. ಗೀತಾ ಹೆಗಡೆ ಸಂಗಡಿಗರು ಶ್ಲೋಕ ಪಠಣ ಮಾಡಿದರು. ಗುರುನಾಥ ಕೋರಿ ಮತ್ತು ಪೂರ್ಣಿಮಾ ಹೆಗಡೆ ನಿರೂಪಿಸಿದರು. ಸಚಿನ್ ಶಿವಣ್ಣವರ್ ವಂದಿಸಿದರು.