ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವಸತಿ ಶಾಲೆಗಳು ವರದಾನವಾಗಿದ್ದು, ವಿದ್ಯಾರ್ಥಿಗಳು ಇಲ್ಲಿನ ಸೌಲಭ್ಯಗಳನ್ನು ಬಳಸಿಕೊಂಡು ಅತ್ಯುತ್ತಮವಾಗಿ ಓದಿ, ಸಾಧನೆ ಮಾಡುವ ಮೂಲಕ ಶಾಲೆಗೆ ಹಾಗೂ ಪಾಲಕರಿಗೆ ಕೀರ್ತಿ ತರಬೇಕು.
ನರಗುಂದ: ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಹೆಚ್ಚು ಗ್ರಾಮೀಣ ಭಾಗದ ಮಕ್ಕಳು ಬರುತ್ತಾರೆ. ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಾಸ ಮಾಡಿ ಹೆಚ್ಚು ಅಂಕ ಪಡೆಯಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ವಿ. ಪಾಟೀಲ ತಿಳಿಸಿದರು.
ಮಂಗಳವಾರ ತಾಲೂಕಿನ ಬೆನಕನಕೊಪ್ಪ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಾಂಸ್ಕೃತಿಕ, ಕ್ರೀಡಾ ಮತ್ತು ಸಮುದಾಯ ವಿಜ್ಞಾನ ಕೇಂದ್ರದ ಉದ್ಘಾಟನೆ ಹಾಗೂ ಆರನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿ, ಮೊರಾರ್ಜಿ ಶಾಲೆಯಲ್ಲಿ ಶೇ. 80ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಬಂದಿರುತ್ತಾರೆ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವಸತಿ ಶಾಲೆಗಳು ವರದಾನವಾಗಿದ್ದು, ವಿದ್ಯಾರ್ಥಿಗಳು ಇಲ್ಲಿನ ಸೌಲಭ್ಯಗಳನ್ನು ಬಳಸಿಕೊಂಡು ಅತ್ಯುತ್ತಮವಾಗಿ ಓದಿ, ಸಾಧನೆ ಮಾಡುವ ಮೂಲಕ ಶಾಲೆಗೆ ಹಾಗೂ ಪಾಲಕರಿಗೆ ಕೀರ್ತಿ ತರಬೇಕು ಎಂದರು.ಶಾಲೆಯ ಪ್ರಾಂಶುಪಾಲ ಡಿ. ಬಿ. ಅಡವಿ ಮಾತನಾಡಿ, ಈ ನೂತನ ಕೇಂದ್ರವು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರಲು ಅತ್ಯುತ್ತಮ ವೇದಿಕೆಯಾಗಿದ್ದು, ಇದರ ಸದುಪಯೋಗವನ್ನು ಪಡೆದು ಶಾಲೆಯ ಕೀರ್ತಿ ಹೆಚ್ಚಿಸಬೇಕು ಎಂದರು.
ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ರಂಜಾನ ಮತ್ತಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸುಸಂದರ್ಭದಲ್ಲಿ ಶಾಲಾ ಸಂಸತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು. ಶಾಲೆಯ ಹಿರಿಯ ಶಿಕ್ಷಕ ಎಂ.ಕೆ. ಅಲ್ಲಿಭಾಯಿವರು ಶಾಲಾ ಸಂಸತ್ತಿನ ಸರ್ವ ಸದಸ್ಯರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಕಾರ್ಯಕ್ರಮದಲ್ಲಿ ಜಿ.ಎನ್. ದೊಡ್ಡಲಿಂಗಪ್ಪನವರ, ಶಿಕ್ಷಣ ಸಂಯೋಜಕ ಬಿ.ಆರ್. ರಾಯನಗೌಡರ್, ಪ್ರಾಥಮಿಕ ವಿಭಾಗದ ಬಿ.ಎಂ. ಕರಿಗಾರ, ಬಿ.ಎಚ್. ನದಾಫ, ಶಶಿಕಲಾ ಅಮ್ಮಗೋಳ, ಸುಜಾತಾ ಅಂಗಡಿ, ವೀರನಗೌಡ ಕಲ್ಲನಗೌಡ, ಗೀತಾ ಸುಳ್ಳಿಕೇರಿ, ಸೀಮಾಕೌಸರ ಮುಲ್ಲಾನವರ, ಪ್ರಿಯಾ ಮುಳ್ಳೂರ ಇದ್ದರು.
ಆದಿತ್ಯ ನಾಗನೂರ ಸ್ವಾಗತಿಸಿದರು. ಮಧು ಅಲದಿ ಹಾಗೂ ಲಾವಣ್ಯ ಮರಿಗುದ್ದಿ ನಿರೂಪಿಸಿದರು. ಯಶ್ವಂತ ಡೊಳ್ಳಿನ ವಂದಿಸಿದರು.