ಉಡುಪಿ: ಭಜನೆ ಭಗವಂತನನ್ನು ಒಲಿಸಿಕೊಳ್ಳುವ ಕ್ಷಿಪ್ರ ಸಾಧನವಾಗಿದೆ, ಮಾತ್ರವಲ್ಲದೇ ಅಧ್ಯಾತ್ಮಿಕ ಸಾಧನೆಗೆ ಮೂಲಾಧಾರವಾಗಿದೆ. ಭಜನೆ ಭಗವಂತನ ಕೃಪೆಗೆ ಮಾತ್ರವಲ್ಲದೆ, ಇಹಪರ ಸಾಧನೆಗೂ ಪೂರಕವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಶಿವರಾತ್ರಿ ಜಾಗರಣೆ ಕೂಡಾ ಭಗವಂತನನ್ನು ಒಲಿಸಿಕೊಳ್ಳುವ ಒಂದು ಮಾರ್ಗ. ಇಲ್ಲಿ ಭಕ್ತಿಗೆ ಪ್ರಾಧಾನ್ಯತೆಯೇ ಹೊರತು ಆಡಂಬರಕ್ಕಲ್ಲ. ಭಕ್ತಿಯೇ ಪ್ರಧಾನವಾಗಿದ್ದರೆ ಭಗವಂತ ನಮ್ಮ ಪ್ರಾರ್ಥನೆಯನ್ನು ಖಂಡಿತಾ ಆಲಿಸುತ್ತಾನೆ ಎಂದ ಅವರು, ಇಂದು ಇಂಟರ್ನೆಟ್, ಫೇಸ್ಬುಕ್, ಸಾಮಾಜಿಕ ಜಾಲತಾಣಗಳ ಮೋಹದಲ್ಲಿ ಕಳೆದು ಹೋಗುತ್ತಿರುವ ಯುವಜನತೆಯನ್ನು ಆಧ್ಯಾತ್ಮದೆಡೆಗೆ ಸೆಳೆಯಲು ಈ ಭಜನೆ ಒಂದು ಪ್ರಮುಖ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಈ ಕಾರ್ಯ ಶ್ಲಾಘನೀಯ ಎಂದರು.
ನಗರಸಭೆಯ ಮಾಜಿ ಸದಸ್ಯ ಸುಂದರ ಕಲ್ಮಾಡಿ ಮಾತನಾಡಿದರು. ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಸತೀಶ ಕೋಟ್ಯಾನ್ ಸನ್ನಿಧಿಯ ವೈಶಿಷ್ಟ್ಯವನ್ನು ವಿವರಿಸಿದರು.ಮುಖ್ಯ ಅತಿಥಿಗಳಾಗಿ ಉದ್ಯಮಿ ನಾಗರಾಜ ಸುವರ್ಣ, ಹರಿಯಪ್ಪ ಕೋಟ್ಯಾನ್, ಸಾಧು ಸಾಲ್ಯಾನ್, ಕೇಶವ ಎಂ. ಕೋಟ್ಯಾನ್, ಅಭಿನಂದನ್ ಕೋಟ್ಯಾನ್, ಶ್ರೀ ಭಗವತಿ ಮಾರಿಕಾಂಬಾ ಸನ್ನಿಧಿ ಅಧ್ಯಕ್ಷ ಟಿ. ಚಂದ್ರಶೇಖರ್, ಶ್ರೀದೇವಿ ಜ್ಞಾನೋದಯ ಪಾಂಡುರoಗ ಭಜನಾ ಮಂದಿರದ ಅಧ್ಯಕ್ಷ ದಾಮೋದರ ಬಂಗೇರ ಮೊದಲಾದವರು ಉಪಸ್ಥಿತರಿದ್ದರು. ರವೀಂದ್ರ ನಾಡಿಗ್ ಸ್ವಾಗತಿಸಿ, ಉಪೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.