ನವದೆಹಲಿ : ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಬುಧವಾರ ನಡೆಯಬೇಕಿದ್ದ ಹೈಕಮಾಂಡ್‌ ನಾಯಕರ ಸಭೆ ಗುರುವಾರಕ್ಕೆ ಮುಂದೂಡಿಕೆಯಾಗಿದೆ. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಸುದ್ದಿಗೋಷ್ಠಿ ಹಿನ್ನೆಲೆಯಲ್ಲಿ ಬುಧವಾರ ಸಂಜೆ ನಿಗದಿಯಾಗಿದ್ದ ಸಭೆ ಮುಂದೂಡಿಕೆಯಾಗಿದೆ.

ಮಂಗಳವಾರ ರಾತ್ರಿ ದೆಹಲಿಯ ವೇಣುಗೋಪಾಲ್‌ ಅವರ ನಿವಾಸದಲ್ಲಿ ನಡೆದ ಹೈವೋಲ್ಟೇಜ್ ಮೀಟಿಂಗ್‌ನಲ್ಲಿ ಸಂಭವನೀಯ ಸಚಿವರ ಪಟ್ಟಿ ಕುರಿತು ಸುದೀರ್ಘ ಚರ್ಚೆ ನಡೆದಿತ್ತು. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.

ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ

ಈ ಪಟ್ಟಿಗೆ ಅಂತಿಮ ಒಪ್ಪಿಗೆ ಪಡೆಯಲು ಬುಧವಾರ ಸಂಜೆ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ನಿಗದಿಯಾಗಿತ್ತು. ಸಂಪುಟ ಸೇರುವವರ ಅಂತಿಮ ಪಟ್ಟಿ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಸಿದ್ಧಗೊಳ್ಳಬೇಕಿತ್ತು. ಆದರೆ, ರಾಹುಲ್‌ ಗಾಂಧಿಯವರ ಸುದ್ದಿಗೋಷ್ಠಿ ಹಿನ್ನೆಲೆಯಲ್ಲಿ ಸಭೆ ನಡೆಯಲಿಲ್ಲ. ಹೀಗಾಗಿ, ಗುರುವಾರ ಮಲ್ಲಿಕಾರ್ಜುನ ಖರ್ಗೆಯವರ ನಿವಾಸದಲ್ಲಿ ಸಭೆ ನಡೆಯುವ ಸಾಧ್ಯತೆಯಿದೆ.


ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬದಲಾವಣೆ ಸೂಚಿಸುವ ಪ್ರಕ್ರಿಯೆ

ಈ ಸಭೆಯಲ್ಲಿ ಪಟ್ಟಿ ಬಗ್ಗೆ ಅಂತಿಮ ಚರ್ಚೆ ನಡೆದು, ರಾಹುಲ್ ಹಾಗೂ ಖರ್ಗೆ ಅವರು ಸೂಚಿಸುವ ಹೆಸರುಗಳೊಂದಿಗೆ ಹಾಲಿ ಸಿದ್ಧವಾಗಿರುವ ಪಟ್ಟಿಯಲ್ಲಿನ ಹೆಸರು ತಾಳೆ ಮಾಡುವ ಹಾಗೂ ಕೆಲ ಬದಲಾವಣೆ ಸೂಚಿಸುವ ಪ್ರಕ್ರಿಯೆ ನಡೆಯಲಿದೆ. ಜಾತಿ ಸಮೀಕರಣ, ಪ್ರಾದೇಶಿಕ ಅಸಮಾನತೆ, ಮುಂದಿನ ಚುನಾವಣೆ, ಸಚಿವಾಕಾಂಕ್ಷಿಗಳಿಗೆ ಕೊಟ್ಟ ಭರವಸೆ ಇವುಗಳ ಆಧಾರದ ಮೇಲೆ ಸಂಭವನೀಯರ ಪಟ್ಟಿ ತಯಾರಾಗಿದ್ದು, ಅವಕಾಶ ವಂಚಿತರ ಆಕ್ರೋಶ ಎದುರಿಸುವ ಸವಾಲಿನೊಂದಿಗೆ ಪಟ್ಟಿ ಸಿದ್ಧಪಡಿಸುವ ಕಾರ್ಯವನ್ನು ನಾಯಕರು ಕೈಗೊಳ್ಳಲಿದ್ದಾರೆ. ಜತೆಗೆ, ಸ್ಪೀಕರ್‌, ಡೈಪ್ಯೂಟಿ ಸ್ಪೀಕರ್‌, ಸಭಾಪತಿ ಹಾಗೂ ನಿಗಮ=ಮಂಡಳಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.

ಇದಾದ ನಂತರ ರಾಜ್ಯ ನಾಯಕರು ಬೆಂಗಳೂರಿಗೆ ಹಿಂತಿರುಗಲಿದ್ದಾರೆ. ನಂತರ ಹೈಕಮಾಂಡ್‌ ನಾಯಕರು ಪಟ್ಟಿಗೆ ಅಂತಿಮ ಮುದ್ರೆ ನೀಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪಟ್ಟಿ ರವಾನಿಸಲಿದ್ದಾರೆ.

ಈ ಮಧ್ಯೆ, ದೆಹಲಿಯಲ್ಲಿ ಸಚಿವಾಕಾಂಕ್ಷಿಗಳ ಲಾಬಿ ಮುಂದುವರಿದಿದ್ದು, ಸುಮಾರು 40ಕ್ಕೂ ಹೆಚ್ಚಿನ ಸಚಿವ ಸ್ಥಾನದ ಆಕಾಂಕ್ಷಿಗಳು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ, ಸಚಿವ ಸ್ಥಾನಕ್ಕೆ ತಮ್ಮನ್ನು ಪರಿಗಣಿಸುವಂತೆ ಮನವಿ ಮಾಡಿದರು.