ಧಾರವಾಡ:
30 ವರ್ಷಗಳ ಬಳಿಕ ನಡೆಯುತ್ತಿರುವ ಈ ಜಾತ್ರೆಯು ಕಳೆದ ಹಲವು ದಿನಗಳಿಂದ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಆರಂಭವಾಗಿದ್ದು, ಜಾತ್ರೆಯ ಪ್ರಮುಖ ಆಕರ್ಷಣೆ ಹೊನ್ನಾಟದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು, ದೇವಿಯರ ಕೃಪೆಗೆ ಪಾತ್ರರಾದರು.ದೇವಿಯರ ಮೆರವಣಿಗೆ:
ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ನೆರವೇರಿದವು. ನಂತರ ಅಲಂಕೃತ ಪಲ್ಲಕ್ಕಿಯಲ್ಲಿ ದೇವಿಯರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಬಳಿಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.ಬಂಡಾರದ ಓಕುಳಿ:ಹೊನ್ನಾಟದ ಅಂಗವಾಗಿ ಭಕ್ತರು ಪರಸ್ಪರ ಬಂಡಾರ ಎರಚುವ ಮೂಲಕ ಸಂಭ್ರಮಿಸಿದರು. ದೇವಿಯರ ಪಲ್ಲಕ್ಕಿಯ ಮೇಲೆ ಹೂಮಳೆ ಸುರಿಸುತ್ತ, ಜಯಘೋಷ ಹಾಕುತ್ತಾ ಸಾಗಿದ ದೃಶ್ಯ ಭಕ್ತಿಯ ಪರಾಕಾಷ್ಠೆಯನ್ನು ತಲುಪಿದ್ದಂತೂ ವಿಶೇಷವಾಗಿತ್ತು.ಸಾಂಸ್ಕೃತಿಕ ವೈಭವ:ಮೆರವಣಿಗೆಯ ಉದ್ದಕ್ಕೂ ಕರಡಿ ಮಜಲು, ಡೊಳ್ಳು ಕುಣಿತ ಹಾಗೂ ವಿವಿಧ ಜಾನಪದ ಕಲಾತಂಡಗಳು ಮೆರುಗು ನೀಡಿದವು. ಯುವಕರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕುಣಿದು ಕುಪ್ಪಳಿಸಿದರು.ಭಕ್ತಿಯ ಸಾಗರ: ಮನೆಗಳ ಮುಂದೆ ಸಾರಣೆ ಹಾಕಿ, ರಂಗೋಲಿ ಬಿಡಿಸಿ ದೇವಿಗೆ ಉಡಿ ತುಂಬುವ ಕಾರ್ಯ ನಡೆಯಿತು. ಜಾತ್ರೆಗೆ ಹಾವೇರಿಪೇಟೆ, ಸುತ್ತಮುತ್ತಲಿನ ಓಣಿ, ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್. ಭೀಮಣ್ಣವರ, ಗಂಗಣ್ಣ ಜಮದಾಳೆ, ಗೌರವ ಕಾರ್ಯದರ್ಶಿ ವಿಜಯ ಬೋಸ್ಲೆ, ಖಜಾಂಚಿ ಆರ್.ಜಿ. ಕೆಲಗೇರಿ, ಸಮಿತಿಯ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಮಕ್ಕಳು, ತಾಯಂದಿರು ಸಡಗರದಿಂದ ಪಾಲ್ಗೊಂಡಿದ್ದರು.
ಕೆ.ಎಸ್. ಭೀಮಣ್ಣವರ, ಅಧ್ಯಕ್ಷ ಜಾತ್ರಾ ಮಹೋತ್ಸವ ಸಮಿತಿ