ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ
ತಾಲೂಕಿನ ಕೆರೆಪಂಚಾಯಿತಿ ಭಲೇಕಡಿ ಗ್ರಾಮಸ್ಥರು ಹುಲಗಾರು ಬೈಲು ಭಲೇಕಡಿ ಸಂಪರ್ಕ ಹಳ್ಳಕ್ಕೆ ಸೇತುವೆ ನಿರ್ಮಾಣ ಹಾಗೂ ರಸ್ತೆ ಡಾಂಬರೀಕರಣಕ್ಕೆ ಆಗ್ರಹಿಸಿ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಆದರ್ಶ ನಕ್ಸಲ್ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಹುಲುಗಾರು ಬೈಲು ಭಲೇಕಡಿ ಸಂಪರ್ಕ ಹಳ್ಳಕ್ಕೆ 40 ಅಡಿ ಉದ್ದದ ಕಿರು ಸೇತುವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಉಂಬಳಕೆರೆಯಿಂದ ಭಲೆಕಡಿ ರಸ್ತೆ ಡಾಂಬರೀಕರಣಕ್ಕೆ ಅನುದಾನ ಬಿಡುಗಡೆಯಾಗಿದೆ.ಆದರೆ ಇದುವರೆಗೂ ಕಾಮಗಾರಿಗೆ ಟೆಂಡರ್ ಕರೆದಿರುವುದಿಲ್ಲ.ಇಲ್ಲಿ ಪರಿಶಿಷ್ಟ ಪಂಗಡ, ಗಿರಿಜನ ಕುಟುಂಬಗಳೇ ಹೆಚ್ಚಾಗಿವೆ. ಸೇತುವೆ,ರಸ್ತೆ ಅಗತ್ಯವಾಗಿದೆ. ನಾವು ಜಿಲ್ಲಾದಿಕಾರಿ, ಶಾಸಕರು ಸೇರಿದಂತೆ ಇಲಾಖೆ ಎಲ್ಲಾ ಅಧಿಕಾರಿಗಳಿಗೂ ಮನವಿ ನೀಡುತ್ತಲೇ ಬಂದಿದ್ದೇವೆ. ಆದರೆ ಟೆಂಡರ್ ಕರೆಯದೇ ವಿಳಂಬ ಮಾಡಲಾಗುತ್ತಿದೆ. ಒಟ್ಟು 14 ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು 9 ಟೆಂಡರ್ ಕರೆಯಲಾಗಿದೆ. ಉಳಿದ 5 ಕಾಮಗಾರಿ ಟೆಂಡರ್ ಕರೆದಿಲ್ಲ. ಅದರಲ್ಲಿ ಕೆರೆ ಗ್ರಾಮದ ಭಲೇಕಡಿ ಗ್ರಾಮದ ಎರಡು ಕಾಮಗಾರಿಗಳು ಸೇರಿವೆ. ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹರೀಶ್,ಪ್ರಭಾಕರ್,ಪ್ರದೀಪ್,ರಂಗಪ್ಪ,ಶಿವಶಂಕರ್ ಮತ್ತಿತರರು ಇದ್ದರು.
ಶೃಂಗೇರಿ ತಾಲೂಕು ಕಚೇರಿಯಲ್ಲಿ ಭಲೇಕಡಿ ಗ್ರಾಮಸ್ಥರು ಸೇತುವೆ,ರಸ್ತೆ ಕಾಮಗಾರಿ ಆರಂಭಕ್ಕೆ ಒತ್ತಾಯಿಸಿ ತಹಸಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.