ಕನ್ನಡಪ್ರಭ ವಾರ್ತೆ ಸಿರಿಗೆರೆ
ಮಹೋತ್ಸವದ ದಿವ್ಯ ಸಾನ್ನಿಧ್ಯ ವಹಿಸಲು ಸಿರಿಗೆರೆಯಿಂದ ಆಗಮಿಸಲಿರುವ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರನ್ನು ಬರಮಾಡಿಕೊಳ್ಳಲು ಭಕ್ತರು ತುದಿಗಾಲ ಮೇಲೆ ನಿಂತಿದ್ದಾರೆ.
ಮಂಟಪದ ಸಮೀಪದ ಹೆದ್ದಾರಿಯನ್ನು ಬಳಸಿಕೊಂಡು ಪಟ್ಟಣದ ಮುಖ್ಯ ರಸ್ತೆ, ಬಿಳಿಚೋಡು ರಸ್ತೆ, ದೊಡ್ಡಪೇಟೆ ಮುಂತಾದ ಕಡೆ ವಿದ್ಯುತ್ ಅಲಂಕಾರವನ್ನು ಮಾಡಲಾಗಿದೆ. ಭರಮಸಾಗರವನ್ನು ಮುಖ್ಯವಾಗಿ ಕಾಡುತ್ತಿದ್ದ ಕಸವನ್ನೆಲ್ಲಾ ಸಾಗಿಸಿ ಪಟ್ಟಣಕ್ಕೆ ಒಂದು ವಿಶೇಷ ಆಕರ್ಷಣೆಯನ್ನು ನೀಡಲಾಗಿದೆ.9 ದಿನಗಳ ಕಾಲದ ಈ ಭವ್ಯ ಉತ್ಸವದಲ್ಲಿ ಭಕ್ತರು ಸಂಭ್ರಮದಿಂದ ಪಾಲ್ಗೊಳ್ಳಲಿದ್ದು, ಹುಣ್ಣಿಮೆ ಮಹೋತ್ಸವ ಸಂದರ್ಭದಲ್ಲಿ ಯಾವುದೇ ಬ್ಯಾನರ್ ಹಾಕಬಾರದು ಎಂಬ ಶ್ರೀಗಳ ಆದೇಶಕ್ಕೆ ಜನರು ಬಾಗಿದ್ದಾರೆ. ಇಡಿ ಪಟ್ಟಣದ ವ್ಯಾಪ್ತಿಯಲ್ಲಿ ಎಲ್ಲೂ ಬ್ಯಾನರ್ಗಳೇ ಇಲ್ಲದಿದ್ದರೂ ಜನರ ಉತ್ಸಾಹಕ್ಕೇನೂ ಕಡಿಮೆಯಾಗಿಲ್ಲ.
---
*ಬದಲಾದ ಸ್ವರೂಪ: ವೇದಿಕೆಯ ಕಾರ್ಯಕ್ರಮಗಳಲ್ಲಿ ಈ ಬಾರಿ ಅದರ ಸ್ವರೂಪವನ್ನು ಬದಲಾಯಿಸಲಾಗಿದೆ. ಶಿಕ್ಷಣ-ಕಲೆ-ಸಂಸ್ಕೃತಿ, ಮಹಿಳೆ ಮತ್ತು ಸಮಾಜ, ರಾಜಕಾರಣ ಮತ್ತು ಸಮಾಜ, ಶರಣ ಸಾಹಿತ್ಯ ಮತ್ತು ಸಮಾಜ, ನ್ಯಾಯಾಲಯ ಮತ್ತು ಸಮಾಜ, ಆರೋಗ್ಯ ಮತ್ತು ಸಮಾಜ, ಸಮೂಹ ಮಾಧ್ಯಮ ಮತ್ತು ಸಮಾಜ, ಕೃಷಿ ಮತ್ತು ಜಲಸಂರಕ್ಷಣೆ, ಧರ್ಮ-ವಿಜ್ಞಾನ-ಸಮಾಜ ಕುರಿತು 9 ದಿನಗಳ ಕಾಲ ಚಿಂತನ ನಡೆಯಲಿದೆ. ಈ ಬಾರಿಯ ಆಹ್ವಾನಿತರ ಪಟ್ಟಿಯಲ್ಲಿ ಹೊಸ ಮುಖಗಳೇ ಗೋಚರವಾಗುತ್ತಿರುವುದೊಂದು ವಿಶೇಷ.ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ನ್ಯಾ.ವೇದವ್ಯಾಸಾಚಾರ್ ಶ್ರೀಶಾನಂದ, ಮಾಧ್ಯಮ ಲೋಕದ ಎಚ್.ಆರ್.ರಂಗನಾಥ್, ಸುದರ್ಶನ್ ಚನ್ನಂಗಿಹಳ್ಳಿ, ರಂಗನಾಥ್ ಭಾರಧ್ವಾಜ್, ಮೈಸೂರು ಅರಸು ಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾಜಕೀಯ ವಲಯದಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಇದೇ ಮೊದಲ ಬಾರಿಗೆ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಬಿ.ಎಸ್.ಯಡಿಯೂರಪ್ಪ, ಎಂ.ಬಿ.ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ್, ಮಧು ಬಂಗಾರಪ್ಪ, ಡಿ. ಸುಧಾಕರ್, ಬಿ.ವೈ.ವಿಜಯೇಂದ್ರ, ಶರಣಪ್ರಕಾಶ್ ಪಾಟೀಲ್, ಎನ್.ಚೆಲುವರಾಯಸ್ವಾಮಿ ಮತ್ತಿತರರು ಭಾಗವಹಿಸುವರು.