ಭಾರತ್ ಜೋಡೋ ನ್ಯಾಯಯಾತ್ರೆ ತಡೆ: ಪ್ರತಿಭಟನೆ

KannadaprabhaNewsNetwork | Published : Jan 24, 2024 2:01 AM

ಸಾರಾಂಶ

ಚಾಮರಾಜನಗರದಲ್ಲಿ ಭಾರತ್‌ ಜೋಡೊ ಯಾತ್ರೆ ತಡೆಗೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಅಸ್ಸಾಂನಲ್ಲಿ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಬಿಜೆಪಿ ಕಾರ್ಯಕರ್ತರು ತಡೆಹಿಡಿದಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಯಾಯಿಸಿದ ಪ್ರತಿಭಟನಾಕಾರರು ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಿಜೆಪಿ ಮತ್ತು ಅಸ್ಸಾಂ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು, ನಂತರ ಕೆಲಕಾಲ ಪ್ರತಿಭಟನೆ, ಮಾನವ ಸರಪಳಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಈ ವೇಳೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಅಸ್ಸಾಂ ಸರ್ಕಾರದ ನಡೆಯನ್ನು ಖಂಡಿಸಿ ಕೆಪಿಸಿಸಿ ರಾಜ್ಯಾದಂತ ಪ್ರತಿಭಟನೆ ನಡೆಸುತ್ತಿದೆ. ಅಸ್ಸಾಂನಲ್ಲಿ ಸಂಪೂರ್ಣ ಕಾನೂನು ಬಾಹಿರತೆಯನ್ನು ಪ್ರದರ್ಶಿಸಲಾಗಿದೆ ಎಂದರು.

ನ್ಯಾಯಯಾತ್ರೆಯ ಉದ್ದಕ್ಕೂ ಬಿಜೆಪಿ ಗೂಂಡಾಗಳ ಮೂಲಕ ದಾಳಿ ನಡೆಸಿದ್ದಾರೆ. ಈ ಮೂಲಕ ಶಾಂತಿಯುತ ಯಾತ್ರೆಗೆ ಅಡ್ಡಿಪಡಿಸಿರುವುದು ಖಂಡನೀಯ ಎಂದರು. ರಾಹುಲ್‌ಗಾಂಧಿ ಸಾಗುತ್ತಿದ್ದ ಬಸ್ ಅಡ್ಡಗಟ್ಟಿ ಅವರ ಮೇಲೆ ದಾಳಿ ನಡೆಸಲು ಯತ್ನಿಸಲಾಗಿದೆ, ಇದು ಬಿಜೆಪಿ ಗೂಂಡಾ ಸಂಸ್ಕೃತಿ, ರಾಮ ರಾಜ್ಯದ ಹೆಸರೇಳುತ್ತ ಗೂಂಡಾ ವರ್ತನೆಯನ್ನು ಪ್ರದರ್ಶಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಈ ಸರ್ಕಾರ ತೊಲಗಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಭಾರತ್ ಜೋಡೋ ನ್ಯಾಯ ಯಾತ್ರೆಯ ಯಶಸ್ಸನ್ನು ಸಹಿಸದೇ ಬಿಜೆಪಿ ಹತಾಶೆಗೊಂಡು ಈ ಕೆಲಸ ಮಾಡುತ್ತಿದೆ. ಇದು ಪ್ರಜಾಪ್ರಭುತ್ವ ರಾಷ್ಟ್ರ, ಇಂತಹ ನಡವಳಿಕೆಗಳು ಸಂವಿಧಾನ ವಿರುದ್ಧವಾಗಿದೆ. ಜನರು ಇವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

BOX

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಭಾಗಿ

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಹಮ್ಮದ್ ಅಜ್ಗರ್ ಮುನ್ನಾ, ಎ.ಎಸ್. ಗುರುಸ್ವಾಮಿ, ಎಚ್‌. ವಿ. ಚಂದ್ರು, ತೋಟೇಶ್, ಮುಕುಂದ ವರ್ಮ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಆರ್. ಮಹದೇವ್ ಜಿಪಂ ಮಾಜಿ ಸದಸ್ಯ ಸದಾಶಿವಮೂರ್ತಿ, ರಮೇಶ್, ಕೊಪ್ಪಾಳಿ ಮಹದೇವನಾಯಕ, ಲತಾ ರಾಜಶೇಖರ್, ಚಿನ್ನಮ್ಮ, ಮುಖಂಡರಾದ ಸೈಯದ್‌ರಫಿ, ಮಹೇಶ್‌ಕುದರ್, ಡಿ.ಎನ್. ನಟರಾಜ್, ನಾಗವಳ್ಳಿ ಸೋಮಣ್ಣ, ಆರ್.ಪಿ.ನಂಜುಂಡಸ್ವಾಮಿ, ಸಿ,ಎ. ಮಹದೇವಶೆಟ್ಟಿ ಎನ್. ಲೋಕೇಶ್, ಮೋಹನ್, ಮುಂಚೂಣಿ ಘಟಕಗಳ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಸ್ಥಳೀಯ ಸಂಸ್ಥೆಯ ಚುನಾಯಿತ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

Share this article