ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಹೊಸಹಳ್ಳಿ ಬಡಾವಣೆಯಲ್ಲಿ ವಾರ್ಡ್ ನಂ.೧೨ರಿಂದ ೨೪ರವರೆಗೆ ಭಾರತ್ ಜೋಡೋ ಸಂಘಕ್ಕೆ ನೋಂದಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈಗಿನ ಯುವಕ-ಯುವತಿಯರನ್ನು ಪಕ್ಷದತ್ತ ಸೆಳೆಯುವುದಕ್ಕೆ ಇದೊಂದು ಸದಾವಕಾಶ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಣಿ ಮಾಡಿದಷ್ಟು ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಬಹುದು. ಹತ್ತು ಲಕ್ಷ ರು. ಸಂಘಗಳಿಗೆ ಸಿಗುತ್ತದೆ. ಜೊತೆಗೆ ವೇತನವನ್ನೂ ಪಡೆಯಬಹುದು. ಹೆಚ್ಚು ಸಂಖ್ಯೆಯಲ್ಲಿ ಯುವ ಸಮೂಹವನ್ನು ನೋಂದಣಿ ಮಾಡಿದರೆ ಕಾರ್ಯಕರ್ತರು ರಾಜಕೀಯವಾಗಿಯೂ ಬೆಳವಣಿಗೆ ಕಾಣಬಹುದು ಎಂದರು.
ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾರತ್ ಜೋಡೋ ಸಂಘಟನೆಗೆ ಸದಸ್ಯತ್ವ ಮಾಡದಿದ್ದರೆ ವಿರೋಧ ಪಕ್ಷದವರು ಅದರ ಲಾಭ ಪಡೆದು ಸಂಘದ ಅಧ್ಯಕ್ಷರಾಗಬಹುದು. ಇದು ಸರ್ಕಾರದ ಯೋಜನೆಯಾಗಿರುವುದರಿಂದ ಯಾರು ಏನು ಬೇಕಾದರೂ ಆಗಬಹುದು. ಆ ಅವಕಾಶವನ್ನು ಕಾರ್ಯಕರ್ತರೇ ಪಡೆಯಬೇಕು ಎನ್ನುವುದು ನನ್ನ ಆಸೆಯಾಗಿದೆ ಎಂದರು.ಕಳೆದ ಮೂರೂವರೆ ವರ್ಷದಲ್ಲಿ ಯಾರೂ ಬೆರಳು ತೋರಿಸದ ರೀತಿಯಲ್ಲಿ ಅಭಿವೃದ್ಧಿ ಮಾಡಿ ತೋರಿಸಿದ್ದೇನೆ. ಅದರ ಉಪಯೋಗ ಪಡೆದುಕೊಳ್ಳುವುದು ನಿಮಗೆ ಬಿಟ್ಟ ವಿಚಾರ. ನಗರದ ಅಭಿವೃದ್ಧಿಗೆ ಹಲವು ಇಲಾಖೆಗಳಿಂದ ೧೫೦ ಕೋಟಿ ರು. ಬಿಡುಗಡೆಗೊಳಿಸಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಇನ್ನೂ ೧೦೦ ಕೋಟಿ ರು. ಬಿಡುಗಡೆಗೊಳಿಸುವುದಕ್ಕೂ ಸಿದ್ಧನಿದ್ದೇನೆ. ಯಾವುದೇ ಮುಖಮುನಿಸು, ಭಿನ್ನಾಭಿಪ್ರಾಯಗಳಿಗೆ ಅವಕಾಶವಾಗದಂತೆ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಿ ಬೆಳವಣಿಗೆ ಕಾಣಬೇಕು ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು ಮಾತನಾಡಿ, ಮಂಡ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯಲ್ಲಿ ಶಾಸಕ ಪಿ.ರವಿಕುಮಾರ್ ಹೊಸ ಬದಲಾವಣೆಯನ್ನೇ ತಂದಿದ್ದಾರೆ. ನಗರದ ಬಹುತೇಕ ರಸ್ತೆಗಳನ್ನು ಸುಂದರವಾಗಿ ಕಾಣುವಂತೆ ಮಾಡಿದ್ದಾರೆ. ಇನ್ನೂ ಒಂದೂವರೆ ವರ್ಷದಲ್ಲಿ ಪ್ರಗತಿಯಲ್ಲಿ ಮತ್ತಷ್ಟು ಬದಲಾವಣೆ ಕಾಣಲು ಶಾಸಕರಿಗೆ ಎಲ್ಲರೂ ಬೆಂಬಲವಾಗಿ ನಿಂತು ಶಕ್ತಿ ತುಂಬಬೇಕಿದೆ ಎಂದರು.