ಹಿಂದುಳಿದ ವರ್ಗಗಳ ಅಭಿವೃದ್ಧಿ ಕಾರ್ಯವನ್ನು ಭರತ ಮುಂದುವರಿಸಲಿದ್ದಾರೆ-ಬೊಮ್ಮಾಯಿ

KannadaprabhaNewsNetwork | Published : Oct 25, 2024 12:58 AM

ಸಾರಾಂಶ

ಹಿಂದುಳಿದ ವರ್ಗಗಳ ಅಭಿವೃದ್ಧಿ ಕೆಲಸವನ್ನು ಭರತ ಬೊಮ್ಮಾಯಿ ಮುಂದುವರೆಸಿಕೊಂಡು ಹೋಗುತ್ತಾರೆ. ಹಿರಿಯರು ಭರತ ಬೊಮ್ಮಾಯಿಗೆ ಮಾರ್ಗದರ್ಶನ ಮಾಡಬೇಕು. ಅಲ್ಲದೇ, ಹಿಂದುಳಿದ ವರ್ಗಗಳ ಪರ ವಿಧಾನಸೌಧದಲ್ಲಿ ಗುಡುಗಬೇಕು ಎಂದು ಭರತ್ ಬೊಮ್ಮಾಯಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದರು.

ಶಿಗ್ಗಾಂವಿ: ಹಿಂದುಳಿದ ವರ್ಗಗಳ ಅಭಿವೃದ್ಧಿ ಕೆಲಸವನ್ನು ಭರತ ಬೊಮ್ಮಾಯಿ ಮುಂದುವರೆಸಿಕೊಂಡು ಹೋಗುತ್ತಾರೆ. ಹಿರಿಯರು ಭರತ ಬೊಮ್ಮಾಯಿಗೆ ಮಾರ್ಗದರ್ಶನ ಮಾಡಬೇಕು. ಅಲ್ಲದೇ, ಹಿಂದುಳಿದ ವರ್ಗಗಳ ಪರ ವಿಧಾನಸೌಧದಲ್ಲಿ ಗುಡುಗಬೇಕು ಎಂದು ಭರತ್ ಬೊಮ್ಮಾಯಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದರು.

ಅವರು ಗುರುವಾರ ಶಿಗ್ಗಾಂವಿಯಲ್ಲಿ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರತಿಯೊಂದು ಚುನಾವಣೆ ತನ್ನದೇ ಆದ ವೈಶಿಷ್ಟ್ಯ ಹೊಂದಿರುತ್ತದೆ. ಹೊಸ ಹೊಸ ವಿಚಾರಗಳನ್ನು ಹೊರ ಹಾಕುತ್ತದೆ. ರಾಜ್ಯದ ಪ್ರಗತಿ ಯಾವ ರೀತಿ ನಡೆಯುತ್ತಿದೆ. ಅಭಿವೃದ್ಧಿ ಹೇಗೆ ನಿಂತು ಹೋಗಿದೆ ಎಂದು ಕೇವಲ ವಿರೋಧ ಪಕ್ಷದ ಶಾಸಕರಷ್ಟೇ ಅಲ್ಲ, ಆಡಳಿತ ಪಕ್ಷದ ಶಾಸಕರೂ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಸಾರ್ವಜನಿಕರೂ ಮಾತನಾಡುತ್ತಿದ್ದಾರೆ ಎಂದರು.

ಮಳೆ ಭೀಕರವಾಗಿದ್ದರೂ ಮನೆ ಕಳೆದುಕೊಂಡವರಿಗೆ ಯಾವುದೇ ಪರಿಹಾರ ದೊರೆಯುತ್ತಿಲ್ಲ. ನಮ್ಮ ಕಾಲದಲ್ಲಿ ಭೀಕರ ಪ್ರವಾಹ ಬಂದು ಸಾವಿರಾರು ಮನೆಗಳು ಬಿದ್ದವು. ಆಗ ನಮ್ಮ ನಾಯಕರಾಗಿದ್ದ ಯಡಿಯೂರಪ್ಪ ಅವರು ಪೂರ್ಣ ಪ್ರಮಾಣದ ಮನೆ ಬಿದ್ದರೆ ಐದು ಲಕ್ಷ ಪರಿಹಾರ ನೀಡಲು ತೀರ್ಮಾನಿಸಿದ್ದೇವು. ಇವರ ಸರ್ಕಾರದಲ್ಲಿ ನಮ್ಮ ತಾಲೂಕಿನಲ್ಲಿ ಪೂರ್ಣ ಬಿದ್ದ ಮನೆಗೆ ಮೊದಲ ಕಂತಿನಲ್ಲಿ ಕೇವಲ ಆರೂವರೆ ಸಾವಿರ ರು. ಕೊಟ್ಟಿದ್ದಾರೆ. ಕೇವಲ ತೊಂಬತ್ತು ಸಾವಿರ ಕೊಡುತ್ತಾರಂತೆ.

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಅನುದಾನವನ್ನು ಹಿಂದುಳಿದ ವರ್ಗಗಳಿಗೆ ಬಿಡುಗಡೆ ಮಾಡಿಲ್ಲ. ಗ್ಯಾರಂಟಿ ಹೆಸರಿನಲ್ಲಿ ಸುಮಾರು ೨೪ ಸಾವಿರ ಕೋಟಿ ರು. ಎಸ್ಸಿ, ಎಸ್ಪಿ ಹಣವನ್ನು ನುಂಗಿ ಹಾಕಿದರು. ಆ ಸಮುದಾಯಗಳಿಗೆ ರಸ್ತೆ ಅಭಿವೃದ್ಧಿ, ಬೋರ್‌ವೆಲ್ ಕೊರೆಯಲು, ಹೊಲ ಹಿಡಿಯಲು ಇಟ್ಟಿದ್ದ ಹಣವನ್ನು ಲೂಟಿ ಮಾಡಿದರು. ಎಸ್ಪಿ ನಿಗಮದ ಹಣವನ್ನು ಚುನಾವಣೆಗೆ ಬಳಸಿಕೊಂಡರು. ಆದರೂ ನಾವು ಏನೂ ಮಾಡಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ನಮ್ಮ ಅವಧಿಯಲ್ಲಿ ಮಾಡಿದ್ದೇವೆ. ಶಿಶುನಾಳ ಶರೀಫರ ಊರು ಅಭಿವೃದ್ಧಿ ಮಾಡಿದ್ದೇವೆ. ಇವತ್ತಿನ ಪ್ರಸ್ತುತ ಪರಿಸ್ಥಿತಿಗೆ ತಕ್ಕ ಹಾಗೆ ಶಿಶುನಾಳ ಶರೀಫರು ಕೋಡಗನ ಕೋಳಿ ನುಂಗಿತ್ತ, ಸುಣ್ಣವು ಗೋಡೆ ನುಂಗಿತ್ತ ಎಂದು ಈ ಸರ್ಕಾರ ಅದನ್ನೇ ಮಾಡುತ್ತಿದೆ. ವಾಲ್ಮೀಕಿ ನಿಗಮದ ಹಣ ನುಂಗಿದ್ದು ನೋಡಿದಾಗ ಅದೇ ಅನಿಸುತ್ತದೆ. ಎಲ್ಲ ವರ್ಗದವರು ಅಭಿವೃದ್ಧಿ ಹೊಂದಿದಾಗ ಮಾತ್ರ ಸಾಮಾಜಿಕ ನ್ಯಾಯ ದೊರೆಯುತ್ತದೆ ಎಂದು ಹೇಳಿದರು.

ನಾವು ಎಲ್ಲರನ್ನು ಸರಿಸಮಾನವಾಗಿ ನೋಡಿಕೊಂಡಿದ್ದೇವೆ. ಪ್ರವಾಹ ಬಂದಾಗ ೧೫ ಸಾವಿರ ಮನೆಗಳನ್ನು ನಮ್ಮ ಕ್ಷೇತ್ರದಲ್ಲಿ ಕಟ್ಟಿದ್ದೇವೆ. ಧಾರವಾಡ, ಬೆಳಗಾವಿ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಮನೆಗಳನ್ನು ಕಟ್ಟಿದ್ದೇವೆ ಎಂದರು.ಈ ಚುನಾವಣೆಯಲ್ಲಿ ಜಯ ನಿಶ್ಚಿತ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಶ್ಚಿತ, ಹಿಂದುಳಿದ ವರ್ಗಗಳ ಕೆಲವು ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಮಾತನಾಡಿ, ಶಿಗ್ಗಾಂವಿ ಸವಣೂರ ವಿವಿಧ ಅಭಿವೃದ್ದಿಗಳನ್ನು ನಮ್ಮ ತಂದೆಯವರು ಮಾಡಿದ್ದು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ತಾವೆಲ್ಲರೂ ಆಶೀರ್ವಾದವನ್ನು ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪೂಜಾರ್, ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ, ಡಿ.ಎಸ್. ಮಾಳಗಿ, ವಿಪ ಸದಸ್ಯ ಎಂ.ಜಿ. ಮೂಳೆ, ಒಬಿಸಿ ರಾಜ್ಯ ಪ್ರದಾನ ಕಾರ್ಯದರ್ಶಿ ಸುಭಾಸ ಚವ್ಹಾಣ, ಪರಶುರಾಮ ಸೊನ್ನದ, ಸುಧಾಕರ, ಗಂಗಾಧರ ಗಡ್ಡೆ, ಮಲ್ಲಿಕಾರ್ಜುನ ಹಡಪದ, ಆನಂದ ದಾನಿ, ಇನ್ನೂ ಹಲವರು ಮಾತನಾಡಿದರು.ಅನೇಕ ಹಿಂದುಳಿದ ವರ್ಗಗಳ ನಾಯಕರು ಹಾಜರಿದ್ದರು.

Share this article