ಅರಸೀಕೆರೆ: ತಾಲೂಕಿನ ಇತಿಹಾಸ ಪ್ರಸಿದ್ಧ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮುರಿದೇವರ ಪಾದಪೂಜೆಯನ್ನು ಭಕ್ತಾದಿಗಳು ನೆರವೇರಿಸಿದರು.
ಜೀವನ ಜಂಜಾಟದಲ್ಲಿ ಸಿಲುಕಿ ಗೊಂದಲದಲ್ಲಿ ಮುಳುಗಿದ ಮನುಷ್ಯನಿಗೆ ಆಚಾರ ವಿಚಾರಗಳು ಪೂಜೆ ಹಾಗೂ ನಮ್ಮಧಾರ್ಮಿಕ ಕಾರ್ಯಕ್ರಮಗಳು ಸ್ಫೂರ್ತಿ ನೆಮ್ಮದಿ ನೀಡುತ್ತವೆ ಎಂದು ಸ್ವಾಮೀಜಿ ಹೇಳಿದರು. ನಮ್ಮ ಬಾಳಿನ ವಿಕಾಸಕ್ಕೆ ಮುಂದೆ ಗುರಿ ಹಿಂದೆ ಗುರು ಮುಖ್ಯ ಬದುಕಿನಲ್ಲಿ ಸುಖ, ಶಾಂತಿ ಬಯಸುವ ಮನುಷ್ಯ ಕೆಲವು ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.
ಅಮಾವಾಸ್ಯೆ ಪೂಜೆ ಅಂಗವಾಗಿ ದೇವಾಲಯದಲ್ಲಿ ಮುಂಜಾನೆಯಿಂದಲೇ ಸಡಗರ ಸಂಭ್ರಮ ಮನೆ ಮಾಡಿತ್ತು. ಸ್ವರ್ಣ ಗೌರಮ್ಮ ದೇವಿಯನ್ನು ಹೂಗಳಿಂದ ಅಲಂಕರಿಸಿದ್ದು ಭಕ್ತರ ಗಮನ ಸೆಳೆಯಿತು. ದೇವಾಲಯವನ್ನು ತಳಿರು ತೋರಣಗಳು ಹಾಗೂ ಬಾಳೆ ಗಿಡಗಳಿಂದ ಸಿಂಗರಿಸಿದ್ದರೆ ಬಣ್ಣ ಬಣ್ಣದ ವಿದ್ಯುತ್ ದೀಪಗಳು ಕಂಗೊಳಿಸಿದವು. ಮಹಾಮಂಗಳಾರತಿಯ ನಂತರ ವಿಶೇಷ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಾಡಾಳು ಸೇರಿದಂತೆ ಹಾರನಹಳ್ಳಿ ಅಣ್ಣಾಯಕನಹಳ್ಳಿ ಡಿ ಎಂ ಕುರ್ಕೆ, ಸಸಿವಾಳ, ರಾಂಪುರ, ಜೆಸಿಪುರ, ಜಿ ಕೊಪ್ಪಲು, ಹರಳಕಟ್ಟ, ಸೊಪ್ಪಿನಹಳ್ಳಿ, ಪುಟ್ಟನ ಕಟ್ಟೆದಿಬ್ಬೂರು, ವೈಜಿಹಳ್ಳಿ, ಬೊಮ್ಮಸಮುದ್ರ, ದೊಣನಕಟ್ಟೆ ಮುಂತಾದ ಗ್ರಾಮಗಳ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು.