ಹೊಸಕೋಟೆ: ಭಾರತದಲ್ಲಿ ನಡೆದಿರುವ ಸಾವಿರಾರು ಯುದ್ಧಗಳ ಪೈಕಿ ಭೀಮಾ ಕೋರೆಗಾವ್ ಯುದ್ಧದ ವಿಜಯ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ್ದಲ್ಲದೆ ಮುಂದಿನ ತಲೆಮಾರಿಗಳಿಗೆ ಸ್ವಾಭಿಮಾನದ ಪ್ರತೀಕವಾಗಿ ಉಳಿದಿದೆ ಎಂದು ಮಾದಾರ ಮಹಾಸಭಾಧ್ಯಕ್ಷ ಡಾ.ಎಚ್.ಎಂ.ಸುಬ್ಬರಾಜು ತಿಳಿಸಿದರು.
ನಗರದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಭೀಮ ಕೋರೆಗಾವ್ ವಿಜಯೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಜಯಸ್ಥಂಭ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಭೀಮ ಕೋರೆಗಾವ್ ಯುದ್ಧ ಕೇವಲ 500 ಮಹರ್ ಸೈನಿಕರು, 28 ಸಾವಿರ ಜಾತಿವಾದಿ ಫೇಶ್ವೆ ಸೈನಿಕರನ್ನು ಸದೆಬಡಿದ ಭಾರತದ ಸ್ವಾಭಿಮಾನದ ಇತಿಹಾಸ. ಈ ವಿಜಯದ ದಾಖಲೆಗಳನ್ನು ನಮ್ಮ ಮನುವಾದಿ ಇತಿಹಾಸಕಾರರು ಗೌಪ್ಯವಾಗಿ ಹುದುಗಿಸಿಟ್ಟಿದ್ದರು. ಅದನ್ನ ಭೇದಿಸಿದ ಡಾ.ಬಿ.ಆರ್.ಅಂಬೇಡ್ಕರ್ ಲಂಡನ್ ಲೈಬ್ರರಿಯಲ್ಲಿ ಭೀಮ ಕೋರೆಗಾವ್ ಯುದ್ಧದ ನೈಜ ದಾಖಲೆಗಳನ್ನು ನೋಡಿ ಪುಲಕಗೊಂಡು ಅಭಿಮಾನದಿಂದ ಪೂರ್ವಿಕರ ಕುರಿತು ಭಾರತದಲ್ಲಿ ಪ್ರಚಾರ ಮಾಡಿದರು. ಅದರ ಪರಿಣಾಮವೇ ಭೀಮ ಕೋರೆಗಾವ್ ವಿಜಯೋತ್ಸವ ದೇಶದ ಮೂಲೆ ಮೂಲೆ ತಲುಪಿತು ಎಂದರು.ದಲಿತಪರ ಸಂಘಟನೆ ಹೋರಾಟಗಾರ ಭೀಮ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವನ್ ಮಾತನಾಡಿ, ದಲಿತಪರ ಸಂಘಟನೆಗಳು ಒಗ್ಗಟ್ಟಿನಿಂದ ವಿಜಯ ಸ್ತೂಪ ತಯಾರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವುದರ ಮೂಲಕ ವಿಜೃಂಭಣೆಯಿಂದ ಆಚರಣೆ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿಜಯ್ ಕುಮಾರ್, ಅಹಿಂದ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಕಿರಣ್ ಕುಮಾರ್, ದಲಿತಪರ ಮುಖಂಡರಾದ ಗುಟ್ಟಳ್ಳಿ ನಾಗರಾಜ್, ಏಸು ಕೃಷ್ಣ, ಶಿವಕುಮಾರ್ ಚಕ್ರವರ್ತಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದರಾಜು ಇತರರು ಹಾಜರಿದ್ದರು.ಫೋಟೋ : 1 ಹೆಚ್ಎಸ್ಕೆ 2
ಹೊಸಕೋಟೆಯಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟ ಭೀಮ ಕೋರೆಗಾವ್ ವಿಜಯೋತ್ಸವದ ಸ್ತೂಪ ಮೆರವಣಿಗೆಗೆ ಮಾದಾರ ಮಹಾಸಭಾ ಅಧ್ಯಕ್ಷ ಡಾ.ಸುಬ್ಬರಾಜ್ ಚಾಲನೆ ನೀಡಿದರು.