ತಾಲೂಕಿನ ಮೊರನಾಳ ಗ್ರಾಮದ ಭೀಮವ್ವ ದೊಡ್ಡ ಬಾಳಪ್ಪ ಸಿಳ್ಳೆಕ್ಯಾತರ ಅವರಿಗೆ ಭಾರತ ಸರಕಾರ 2019ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡಿರುವುದರಿಂದ ಜಿಲ್ಲೆಯ ಹಿರಿಮೆ ಹೆಚ್ಚಿದೆ.
ಬಿಜೆಪಿ ಜಿಲ್ಲಾ ನಿಯೋಗದಿಂದ ಭೀಮವ್ವ ಸಿಳ್ಳೆಕ್ಯಾತರಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಕೊಪ್ಪಳ
ತಾಲೂಕಿನ ಮೊರನಾಳ ಗ್ರಾಮದ ಭೀಮವ್ವ ದೊಡ್ಡ ಬಾಳಪ್ಪ ಸಿಳ್ಳೆಕ್ಯಾತರ ಅವರಿಗೆ ಭಾರತ ಸರಕಾರ 2019ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡಿರುವುದರಿಂದ ಜಿಲ್ಲೆಯ ಹಿರಿಮೆ ಹೆಚ್ಚಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಸಂತಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಜಿಲ್ಲಾ ನಿಯೋಗದೊಂದಿಗೆ ಸೋಮವಾರ ಮೊರನಾಳ ಗ್ರಾಮಕ್ಕೆ ಭೇಟಿ ನೀಡಿ ಭೀಮವ್ವ ಅವರನ್ನು ಸನ್ಮಾನಿಸಿ ಮಾತನಾಡಿದರು.
ಈ ತೊಗಲುಗೊಂಬೆಯಾಟ ನಮ್ಮ ಸನಾತನದ ಜಾನಪದ ಸಂಸ್ಕೃತಿಯ ಕಲೆಯಲ್ಲಿ ಒಂದಾಗಿದೆ. ಇತಿಹಾಸ, ರಾಮಾಯಣ, ಮಹಾಭಾರತದ ಕಲೆ, ಸಂಸ್ಕೃತಿ, ಸಾಹಿತ್ಯ, ಪರಂಪರೆಯ ಬಗ್ಗೆ ನೆನಪು ಮಾಡುವ ಕಲೆಯಾಗಿದೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಇಂತಹ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಕಳೆದ 60 ವರ್ಷ ಆಡಳಿತ ಮಾಡಿರುವ ಕಾಂಗ್ರೆಸ್ ಸಮಾಜದಲ್ಲಿ ಅದ್ಭುತವಾಗಿ ಸಾಧನೆಗಳನ್ನು ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ದೇಶದ ಪರಂಪರೆ, ಇತಿಹಾಸ ಮತ್ತು ಸಮಾಜದಲ್ಲಿ ಸಾಧನೆ ಮಾಡುವವರನ್ನು ಹುಡುಕಿ ಬಡತನದಿಂದ ಬಂದು ಬೆಳೆದು ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಅವರ ಸಾಧನೆಗೆ ತಕ್ಕಂತೆ ಗುರುತಿಸಿದ ಕೇಂದ್ರ ಸರ್ಕಾರ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತ ಬಂದಿದೆ. ವಿಶೇಷವಾಗಿ ಮೊರನಾಳ ಭೀಮಮ್ಮ ಅವರ ಕಲೆ, ನಿರಂತರ ಶ್ರಮಕ್ಕೆ ಅವರಿಗೆ ಗೊತ್ತಿಲ್ಲದ ಹಾಗೆ ಪದ್ಮಶ್ರೀ ಪ್ರಶಸ್ತಿ ದೊರಕಿರುವುದು ಕೊಪ್ಪಳ ಜಿಲ್ಲೆಗೆ ಮತ್ತು ಕರ್ನಾಟಕ ರಾಜ್ಯಕ್ಕೆ ಇದೊಂದು ಅವಿಸ್ಮರಣೀಯ ಘಳಿಗೆಯಾಗಿದೆ. ಹಾಗಾಗಿ ಅವರನ್ನು ಸನ್ಮಾನಿಸಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಈ ವೇಳೆ ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಈ ಹಿಂದೆ ಬಸವರಾಜ್ ಬೊಮ್ಮಾಯಿ ಸಿಎಂ ಇದ್ದ ಅವಧಿಯಲ್ಲಿ ನಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವನಾಗಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಮೊರನಾಳ ಭೀಮವ್ವ ಅವರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪದ್ಮಶ್ರೀ ಪ್ರಶಸ್ತಿ ನಮ್ಮ ಜಿಲ್ಲೆಯ ಮಹಿಳೆಗೆ ದೊರಕಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.