ಕಕ್ಕಬೆ ಗ್ರಾಮದ ಜನತೆಯ ಪ್ರಮುಖ ಬೇಡಿಕೆಯಾಗಿದ್ದ ಉತ್ತಮ ರಸ್ತೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಕ್ಕಬೆ ಗ್ರಾಮದ ಜನತೆಯ ಪ್ರಮುಖ ಬೇಡಿಕೆಯಾಗಿದ್ದ ಉತ್ತಮ ರಸ್ತೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹಗಾರರಾದ ಎ.ಎಸ್. ಪೊನ್ನಣ್ಣ ಹೇಳಿದರು.
ಕಕ್ಕಬೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ರಸ್ತೆ ಕಾಮಗಾರಿಯ ಆರಂಭಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು. ಎಲ್ಲವನ್ನೂ ಏಕಕಾಲದಲ್ಲಿ ನಡೆಸಲು ಅಸಾಧ್ಯ. ಅಭಿವೃದ್ಧಿ ಕಾರ್ಯಗಳಿಗೆ ಜನರ ಸಹಕಾರ
ಮುಖ್ಯ ಎಂದರು.
ಕಕ್ಕಬೆ ಗ್ರಾಮದ ಹಲವು ರಸ್ತೆಗಳು ಹಿಂದಿನಿಂದಲೂ ಅಭಿವೃದ್ಧಿ ಕಾಣದೆ ಹಾಗೆಯೇ ಉಳಿದಿದೆ. ಶಾಸಕರ ಅನುದಾನದಲ್ಲಿ ಈ ರಸ್ತೆಗಳ ಅಭಿವೃದ್ಧಿಗಾಗಿ ಹಣವನ್ನು ಮೀಸಲಾಗಿರಿಸಿದೆ. ಮಾನ್ಯ ಮುಖ್ಯಮಂತ್ರಿಗಳ ನಿಧಿಯಿಂದ ವೈಕೋಲ್ ರಸ್ತೆ, ಪಾಡೆಯಂಡ, ನಾಟೋಳಂಡ , ಮಾದಂಡ ಕುಟುಂಬಸ್ಥರ ರಸ್ತೆಗೆ ತಲಾ 15 ಲಕ್ಷದಂತೆ ಒಟ್ಟು ₹45 ಲಕ್ಷ ರು. ಗಳು ಹಾಗೂ ಎನ್ ಡಿಆರ್ ಎಫ್ ನಿಂದ ಮಾರ್ಚಂಡ ಹಾಗೂ ಬಾಲ್ ಮೊಟ್ಟೆ ರಸ್ತೆಗೆ ಒಟ್ಟು ₹ 20 ಲಕ್ಷಗಳು ಈ ಕಾಮಗಾರಿಗಳಿಗೆ ಬಳಸಲಾಗಿದೆ ಎಂದರು.
ಉತ್ತಮ ರಸ್ತೆಯ ಅಭಿವೃದ್ಧಿಗೆ ಶಾಸಕರು ಭೂಮಿ ಪೂಜೆ ನೆರವೇರಿಸುವುದರೊಂದಿಗೆ ಗ್ರಾಮಸ್ಥರ ಹಲವು ಕಾಲದ ಬೇಡಿಕೆ ಈಡೇರುವಂತಾಗಿದೆ ಎಂದು ಭೂಮಿ ಪೂಜೆ ಬಳಿಕ ಶಾಸಕರನ್ನು ಅಭಿನಂದಿಸಿದ ಸ್ಥಳೀಯರು ಹಾಗೂ ಗ್ರಾಮಸ್ಥರು ಶಾಸಕರ ಈ ಕಾಳಜಿಗೆ ತಮ್ಮ ಮನದಾಳದ ಕೃತಜ್ಞತೆಯನ್ನು ಅರ್ಪಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ರಜಾಕ್, ಬಶೀರ್, ಸಂಪನ್ ಅಯ್ಯಪ್ಪ ಹಾಗೂ ಪ್ರಮುಖರಾದ ಉಸ್ಮನ್ ಹಾಜಿ, ಕರ್ತಂಡ ಶೈಲಾ ಕುಟ್ಟಪ್ಪ, ಕೆಡಿಪಿ ಮೆಂಬರ್ ಬಾಚಮಂಡ ಲವ ಚಿನ್ನಪ್ಪ, ಉದಿಯಂಡ ಸುಭಾಷ್, ಬಾಚಮಂಡ ಭರತ್, ನಾಟೋಳಂಡ ಶಂಬು, ಮಾದಂಡ ಉಮೇಶ್, ಪೊನ್ನೋಳ್ತಂಡ ರಘು ಚಿನ್ನಪ್ಪ, ನಾಟೋಳಂಡ ನಂಜುಂಡ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.