12ಕೋಟಿ ವೆಚ್ಚದ ಕನಕದಾಸ ಭವನ ನಿರ್ಮಾಣಕ್ಕೆ ಭೂಮಿ ಪೂಜೆ

KannadaprabhaNewsNetwork | Published : Nov 30, 2024 12:47 AM

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಪ್ರಸನ್ನಕುಮಾರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲಾ ಕುರುಬರ ಸಂಘದಿಂದ ಬಾಲರಾಜ್ ಅರಸ್ ರಸ್ತೆಯ ಕುರುಬರ ಹಾಸ್ಟೆಲ್ ಜಾಗದಲ್ಲಿ ₹12 ಕೋಟಿ ವೆಚ್ಚದಲ್ಲಿ ಕನಕದಾಸ ಸಮುದಾಯ ಭವನ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಇದಕ್ಕಾಗಿ ನ.30 ರಂದು ಬೆಳಗ್ಗೆ 10.30ಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಪ್ರಸನ್ನಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂಬ ಬಹುದಿನದ ಕನಸು ಇದೀಗ ನೆರವೇರುವ ಕಾಲ ಬಂದಿದೆ. ಕಾಗಿನೆಲೆ ಕ್ಷೇತ್ರದ ಜಗದ್ಗುರು ನಿರಂಜನಾನಂದಪುರಿ ಮಹಾ ಸ್ವಾಮೀಜಿ, ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಮಹಾಸ್ವಾಮಿಗಳು, ಜಡೇದೇವರ ಮಠದ ಸ್ವಾಮಿ ಅಮೋಘ ಸಿದ್ದೇಶ್ವರಾನಂದರು ಭೂಮಿ ಪೂಜೆಯ ಸಾನ್ನಿಧ್ಯ ವಹಿಸಲಿದ್ದು, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ಡಿ.ಎಸ್.ಅರುಣ್, ಬಲ್ಕೀಶ್ ಬಾನು, ಡಾ.ಧನಂಜಯ ಸರ್ಜಿ, ಕುರುಬರ ಸಂಘದ ಅಧ್ಯಕ್ಷ ಪಿ.ಮೈಲಾರಪ್ಪ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ರಾಜ್ಯ ಕುರುಬರ ಸಂಘದ ಅಧ್ಯಕ್ಷ ಎಂ.ಈರಣ್ಣ ಸೇರಿ ಹಲವು ಗಣ್ಯರು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿರುವರು ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ ಮಾತನಾಡಿ, ಬಹುದಿನದ ಕನಸು ನನಸಾಗುವ ಕಾಲ ಬಂದಿದೆ. ಸಮುದಾಯ ಭವನವನ್ನು ವಿಶೇಷವಾಗಿ ನಿರ್ಮಿಸಲಾಗುವುದು. ಇದರಿಂದ ಬಂದ ಹಣವನ್ನು ಸಮಾಜದ ಶೈಕ್ಷಣಿಕ ಉದ್ದೇಶಕ್ಕಾಗಿ ಸ್ವಲ್ಪ ಭಾಗ ಮೀಸಲಾಗಿಡಲಾಗುವುದು. ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೇರೆ ಕಡೆ ಹಾಸ್ಟೆಲ್ ನಿರ್ಮಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕೆ.ರಂಗನಾಥ್, ಮೂಡ್ಲಿ ರಾಮಕೃಷ್ಣ, ಶರತ್ ಮರಿಯಪ್ಪ, ಹನುಮಂತಪ್ಪ, ನವುಲೆ ಈಶ್ವರಪ್ಪ, ಹೊನ್ನಪ್ಪ, ಮಾಲತೇಶ್, ಪ್ರಭು, ಕೃಷ್ಣಮೂರ್ತಿ, ಪಾಲಾಕ್ಷಿ, ಇಕ್ಕೇರಿ ರಮೇಶ್, ಸಿದ್ದಪ್ಪ, ಲಕ್ಷ್ಮಣ್, ಗಣೇಶ್, ರಾಘವೇಂದ್ರ, ಕೇಶವ, ಚಂದ್ರಣ್ಣ, ಅನಿಲ್, ಚೇತನ್ ಮಧು ಮತ್ತಿತರರು ಇದ್ದರು.

Share this article