ಕನ್ನಡಪ್ರಭ ವಾರ್ತೆ ಧಾರವಾಡ
ಕ್ರೂಸರ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ತಾಲೂಕಿನ ಶಿವಳ್ಳಿ ಗ್ರಾಮದ ಸಮೀಪ ಭಾನುವಾರ ತಡರಾತ್ರಿ ನಡೆದಿದೆ. ನವಲಗುಂದ ತಾಲೂಕಿನ ಹೆಬ್ಬಾಳ ಗ್ರಾಮದ ಯಲ್ಲಪ್ಪ ಗಂಟಿ ಹಾಗೂ ಬಸವರಾಜ ಕುರಹಟ್ಟಿ ಮೃತಪಟ್ಟವರು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಧಾರವಾಡ ಗೊಲ್ಲರ ಕಾಲನಿಯ ರೋಹನ ಅಂಗಡಿ (19) ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ.ಬೈಕ್ ಸವಾರರು ನವಲಗುಂದದಿಂದ ಬೈಕಿನಲ್ಲಿ ಧಾರವಾಡಕ್ಕೆ ಬರುತ್ತಿದ್ದರು. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಧಾರವಾಡದಲ್ಲಿ ನಿತ್ಯದ ದುಡಿಮೆ ಮುಗಿಸಿ ಮರಳಿ ಮನೆಗೆ ಹೋಗುತ್ತಿದ್ದ 20ಕ್ಕೂ
ಹೆಚ್ವಿದ್ದ ಜನರನ್ನು ತುಂಬಿದ್ದ ಕ್ರೂಸರ್ ಬೈಕ್ ಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕದ ಹೊಲದಲ್ಲಿ ಬಿದ್ದಿದೆ. ಇದರಿಂದ ಬೈಕ್ ಸವಾರರು ಸೇರಿದಂತೆ ಕ್ರೂಸರ್ ನಲ್ಲಿದ್ದ ಕೆಲವರು ಸೇರಿ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕ್ರೂಸರ್ ನಲ್ಲಿದ್ದ ಯಲ್ಲಪ್ಪ ಹಾಗೂ ಬಸವರಾಜ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರೆ, ಸೋಮವಾರ ಬೈಕ್ ಸವಾರ ರೋಹನ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾನೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಸಿಪಿಐ ಶಿವಾನಂದ ಕಮತಗಿ ಭೇಟಿ ನೀಡಿದ್ದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.