ಮೋದಿಯೊಡನೆ ಅವಿನಾಭಾವ ಸಂಬಂಧ ಎಂದು ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Apr 02, 2024, 01:05 AM IST
52 | Kannada Prabha

ಸಾರಾಂಶ

ವರುಣ ನನ್ನ ಪಾಲಿಗೆ ಅದೃಷ್ಟ ಕ್ಷೇತ್ರ, 2013ರಲ್ಲಿ 30 ಸಾವಿರ ಮತಗಳಿಂದ ಗೆಲ್ಲಿಸಿದ್ದರಿಂದ ಮೊದಲ ಬಾರಿಗೆ ಮುಖ್ಯಮಂತ್ರಿಯಾದೆ 2023ರ ಚುನಾವಣೆಯಲ್ಲಿ ನನ್ನನ್ನು ಸೋಲಿಸಲೇ ಬೇಕೆಂದು ತೀರ್ಮಾನಿಸಿ ಬೆಂಗಳೂರಿನಿಂದ ವಿ. ಸೋಮಣ್ಣ ಅವರನ್ನು ಕರೆಸಿ ನಿಲ್ಲಿಸಿ ತಂತ್ರ ರೂಪಿಸಿದ್ದರು. ಸೋಮಣ್ಣ ಎಷ್ಟೇ ದುಡ್ಡು ಖರ್ಚು ಮಾಡಿದರೂ ಸಹ ನೀವು ಅದನ್ನು ತೊಡದು ಹಾಕಿ 48 ಸಾವಿರ ಮತಗಳಿಂದ ಗೆಲ್ಲಿಸಿದ್ದರಿಂದ 2ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ, ನಿಮ್ಮೆಲ್ಲರ ಋಣ ನನ್ನ ಮೇಲಿದೆ ಎಂ

ಕನ್ನಡಪ್ರಭ ವಾರ್ತೆ ನಂಜನಗೂಡು

ಬಿಜೆಪಿ ಕೋಮುವಾದಿ ಪಕ್ಷ ನಾನು ಯಾವ ಕಾರಣಕ್ಕೂ ಬಿಜೆಪಿ ಸೇರಲ್ಲ, 2019 ರಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ ನಾನು ದೇಶ ಬಿಡುತ್ತೇನೆ ಎಂದಿದ್ದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಈಗ ಬಿಜೆಪಿಗೂ ನಮಗೂ, ನನಗೂ ಮೋದಿಗೂ ಅವಿನಾಭಾವ ಸಂಬಂಧ ಎಂದು ಹೇಳಿಕೊಂಡು ನಾಟಕವಾಡಲು ಪ್ರಾರಂಭಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ತಾಲೂಕಿನ ಬಿಳಿಗೆರೆ ಬೋರೆಯಲ್ಲಿ ಸೋಮವಾರ ಕಾಂಗ್ರೆಸ್ ಏರ್ಪಡಿಸಿದ್ದ ವರುಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಚುನಾವಣಾ ಬಹಿರಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಸತ್ತರೂ ಬಿಜೆಪಿ ಸೇರಲ್ಲ, ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದಿದ್ದ ದೇವೇಗೌಡರು ಈಗ ನಮಗೂ ಬಿಜೆಪಿಗೂ ಅವಿನಾಭಾವ ಸಂಬಂಧವಿದೆ ಎಂದು ಹೇಳಿಕೊಳ್ಳುತ್ತಾರೆ. ಜೊತೆಗೆ ಬಿಜೆಪಿ ಮೈತ್ರಿಯಲ್ಲಿ ಜೆಡಿಎಸ್‌ ಗೆ ಸ್ಥಾನವಿಲ್ಲ ಎಂದು ಅವರ ಅಳಿಯ ಡಾ. ಮಂಜುನಾಥ್ ಅವರನ್ನು ಬಿಜೆಪಿಗೆ ಕಳುಹಿಸಿದ್ದಾರೆ. ಅವರೂ ಅವರ ಅಳಿಯನೂ ಬೇರೆ ಬೇರೆಯಾಗಿದ್ದಾರಾ? ಯಾಕಪ್ಪಾ ಈ ರೀತಿ ನಾಟಕವಾಡುತ್ತಾರೆ? ನಾನು ಜನತಾದಳ ಎಲ್ಲಿದೆ ಎಂದಿರಲಿಲ್ಲ, ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದೆ ಎಂದಷ್ಟೆ ಹೇಳಿದ್ದೆ ಅದಕ್ಕೆ ಅವರು ಸಿದ್ದರಾಮಯ್ಯಗೆ ಗರ್ವ ಬಂದಿದೆ, 28 ಲೋಕಸಭಾ ಕ್ಷೇತ್ರಗಳ ಪೈಕಿ 28 ಸ್ಥಾನ ಗೆದ್ದು ಅವರ ಗರ್ವಭಂಗ ಮಾಡುತ್ತೇನೆ ಎಂದು ಎಚ್.ಡಿ. ದೇವೇಗೌಡರು ಶಪಥ ಮಾಡಿದ್ದಾರೆ. ಆದರೆ ನನಗೆ ಗರ್ವ ಎನ್ನುವುದೇ ಇಲ್ಲ ಹೇಗೆ ಮುರಿಯಲು ಸಾಧ್ಯ? ನಾನು ಸತ್ಯವನ್ನಷ್ಟೆ ಹೇಳುತ್ತೇನೆ. ಇದ್ದದ್ದು ಇದ್ದಾಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದೆಯಲು ಶುರು ಮಾಡಿದ್ದಾರೆ. ಅವರ ಒದೆ ತಪ್ಪಿಸಲು ಸುನಿಲ್ ಬೋಸ್ ಗೆಲ್ಲಿಸಬೇಕು ಎಂದರು.

ವರುಣ ನನ್ನ ಪಾಲಿಗೆ ಅದೃಷ್ಟ ಕ್ಷೇತ್ರ, 2013ರಲ್ಲಿ 30 ಸಾವಿರ ಮತಗಳಿಂದ ಗೆಲ್ಲಿಸಿದ್ದರಿಂದ ಮೊದಲ ಬಾರಿಗೆ ಮುಖ್ಯಮಂತ್ರಿಯಾದೆ 2023ರ ಚುನಾವಣೆಯಲ್ಲಿ ನನ್ನನ್ನು ಸೋಲಿಸಲೇ ಬೇಕೆಂದು ತೀರ್ಮಾನಿಸಿ ಬೆಂಗಳೂರಿನಿಂದ ವಿ. ಸೋಮಣ್ಣ ಅವರನ್ನು ಕರೆಸಿ ನಿಲ್ಲಿಸಿ ತಂತ್ರ ರೂಪಿಸಿದ್ದರು. ಸೋಮಣ್ಣ ಎಷ್ಟೇ ದುಡ್ಡು ಖರ್ಚು ಮಾಡಿದರೂ ಸಹ ನೀವು ಅದನ್ನು ತೊಡದು ಹಾಕಿ 48 ಸಾವಿರ ಮತಗಳಿಂದ ಗೆಲ್ಲಿಸಿದ್ದರಿಂದ 2ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ, ನಿಮ್ಮೆಲ್ಲರ ಋಣ ನನ್ನ ಮೇಲಿದೆ ಎಂದರು.

ಸಿದ್ದರಾಮಯ್ಯಗೆ ಶಕ್ತಿ ತುಂಬಿ

ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಮಾತನಾಡಿ, ಸಿದ್ದರಾಮಯ್ಯಗೆ ಕ್ಷೇತ್ರವೇ ಇಲ್ಲ, ಅವರನ್ನು ಮಧ್ಯಾಹ್ನಕ್ಕೆ ಸೋಲಿಸುತ್ತೇವೆ ಎಂದಿದ್ದವರಿಗೆ ವರುಣ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡಿ ಇಡೀ ದೇಶದಲ್ಲಿ ಚಾರಿತ್ರ್ಯ ನಿರ್ಮಾಣ ಮಾಡಿದ್ದೀರಿ. ಸಿದ್ದರಾಮಯ್ಯ ಅವರಿಗೆ ಮತ್ತೆ ಶಕ್ತಿ ಪರೀಕ್ಷಿಸುವ ಕಾಲ ಬಂದಿದೆ. ಆದ್ದರಿಂದ ಕೋಮುವಾದವನ್ನು ಅಳಿಸಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಬಿಜೆಪಿಯನ್ನು ಸೋಲಿಸಿ ಸುನಿಲ್ ಬೋಸ್ ಗೆಲ್ಲಿಸಲು ಹೆಚ್ಚಿನ ಮತ ನೀಡುವ ಮೂಲಕ ಸಿದ್ದರಾಮಯ್ಯಗೆ ಶಕ್ತಿ ತುಂಬಿ ಎಂದರು.

ಸೇವೆ ಸಲ್ಲಿಸಲು ನನಗೂ ಒಂದು ಅವಕಾಶ ಕಲ್ಪಿಸಿ

ಅಭ್ಯರ್ಥಿ ಸುನಿಲ್ ಬೋಸ್ ಮಾತನಾಡಿ, ಈ ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ವರುಣದ ಜನತೆ ಸಿದ್ದರಾಮಯ್ಯ ಅವರನ್ನು 2 ಬಾರಿ ಸಿಎಂ ಮಾಡಿದ್ದೀರಿ. ನನ್ನ ತಂದೆಗೂ ಸಹ ಬೆಂಬಲಿಸಿ ಬೆಳೆಸಿದ್ದೀರಿ, ಯತೀಂದ್ರ ಸಿದ್ದರಾಮಯ್ಯರಿಗೂ ಆಶೀರ್ವಾದ ಮಾಡಿದ್ದೀರಿ. ನಿಮ್ಮಲ್ಲರ ಜೊತೆ ನಿಂತು ಸೇವೆ ಸಲ್ಲಿಸಲು ನನಗೂ ಒಂದು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.

ಬಿಜೆಪಿ ಸನಾತನ ಪದ್ದತಿ ತರುವ ದುರುದ್ದೇಶ ಹೊಂದಿದೆ

ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿಯವರು ರಾಜಕೀಯ ಮುಖವಾಡ ಧರಿಸಿದ್ದಾರೆ. ಒಂದು ದೇಶ, ಒಂದು ಕಾನೂನು ಮೂಲಕ ಐಟಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಪ್ರತಿಪಕ್ಷಗಳನ್ನು ಸೋಲಿಸಿ, ಇಡೀ ದೇಶದಲ್ಲಿ ಅಧಿಕಾರಕ್ಕೆ ಬಂದು ಸನಾತನ ಪದ್ದತಿ ತರಬೇಕೆಂದು ದುರುದ್ದೇಶವನ್ನು ಹೊಂದಿದೆ. ವರುಣ ತವರು ಕ್ಷೇತ್ರ ಚಾಮರಾಜನಗರ ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲ್ಲಿಸದಿದ್ದರೆ ಮುಜುಗರವಾಗುತ್ತೆ. ಅಲ್ಲದೆ ಬಿಜೆಪಿ ಅಭ್ಯರ್ಥಿ ಧ್ರುವನಾರಾಯಣ್ ಹೆಸರು ಹೇಳಿಕೊಂಡು ಮತಯಾಚಿಸುತ್ತಿದ್ದಾರೆ. ಮತದಾರರು ಧ್ರುವನಾರಾಯಣ್ ಗೆ ನಿಜವಾಗಿ ಶ್ರದ್ದಾಂಜಲಿ ಸಲ್ಲಿಸಬೇಕಾದರೆ ಒಟ್ಟಾಗಿ ನಿಂತು ಕಾಂಗ್ರೆಸ್‌ ಗೆ ಮತ ಹಾಕಿಸಿ ಗೆಲ್ಲಿಸಬೇಕು ಎಂದರು.

ಶಾಸಕ ಭಾರತೀಶಂಕರ್ ಕಾಂಗ್ರೆಸ್‌ಸೇರ್ಪಡೆ

ಇದೇ ವೇಳೆ ಮಾಜಿ ಶಾಸಕ ಭಾರತೀ ಶಂಕರ್ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು. ಸಚಿವ ವೆಂಕಟೇಶ್, ಶಾಸಕರಾದ ದರ್ಶನ್‌ ಧ್ರುವನಾರಾಯಣ್, ಅನಿಲ್‌ ಚಿಕ್ಕಮಾದು, ಗಣೇಶ್‌ ಪ್ರಸಾದ್, ಎ.ಆರ್. ಕೃಷ್ಣಮೂರ್ತಿ, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ನಂಜುಂಡಸ್ವಾಮಿ, ಮಾಜಿ ಸಚಿವ ಕೋಟೆ ಶಿವಣ್ಣ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ವಾಲ್ಮೀಕಿ ನಿಗಮ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್, ಮುಖಂಡರಾದ ಇಂಧನ್ ಬಾಬು, ಕೆಂಪಣ್ಣ, ಕೆ. ಮಾರುತಿ, ಬಸವೇಗೌಡ, ವರುಣ ಮಹೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ