ತಮಿಳುನಾಡು, ಬಿಹಾರ ಬಳಿಕ ಇದೀಗ ಕರ್ನಾಟಕದಲ್ಲೂ ಹಕ್ಕಿ ಜ್ವರದ ಆತಂಕ ಕಾಣಿಸಿಕೊಂಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ತಮಿಳುನಾಡು, ಬಿಹಾರ ಬಳಿಕ ಇದೀಗ ಕರ್ನಾಟಕದಲ್ಲೂ ಹಕ್ಕಿ ಜ್ವರದ ಆತಂಕ ಕಾಣಿಸಿಕೊಂಡಿದೆ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಹೆರಸಘಟ್ಟದ ಪೌಲ್ಟ್ರಿ ಫಾರಂನಲ್ಲಿ ಕೋಳಿಗಳಿಗೆ H5 N1 ವೈರಸ್ (ಹಕ್ಕಿ ಜ್ವರ) ಬಾಧೆ ಕಂಡುಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 7,444 ಕೋಳಿಗಳ ನಾಶ ಮಾಡಲಾಗಿದೆ. ಇದು ರಾಜ್ಯದಲ್ಲಿ ಈ ವರ್ಷ ಪತ್ತೆಯಾಗಿರುವ ಮೊದಲ ಹಕ್ಕಿಜ್ವರ ಪ್ರಕರಣವಾಗಿದೆ.
ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಪೌಲ್ಟ್ರಿ ಫಾರಂನ ಕೋಳಿಗಳಲ್ಲಿ ಮೊದಲ ತಪಾಸಣೆಯಲ್ಲೇ ಹಕ್ಕಿಜ್ವರ ಇರುವುದು ದೃಢಪಟ್ಟಿದೆ. ಆದ್ದರಿಂದ ಅಲ್ಲಿದ್ದ 7,444 ಕೋಳಿಗಳನ್ನು ಗುಂಡಿ ತೆಗೆದು ಹೂಳಲಾಗಿದೆ. ಅಷ್ಟೇ ಅಲ್ಲ, 10 ಕೋಳಿ ಸಾಕಾಣೆಗಾರರನ್ನು ಕ್ವಾರಂಟೈನ್ ಮಾಡಲಾಗಿದೆ. ಬಿಸಿಲಿನ ತಾಪದಿಂದಾಗಿ ಬೇಸಿಗೆಯಲ್ಲಿ ಹಕ್ಕಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಹಕ್ಕಿಗಳಿಂದ ಕೋಳಿಗಳಿಗೂ ಜ್ವರ ಹಬ್ಬಿದ್ದು ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.
ಏ.14 ರಂದು ಹೆಸರಘಟ್ಟದ ಮುತ್ಕೂರು ಗ್ರಾಮದಲ್ಲಿ ಕೋಳಿಗಳಿಗೆ ಹಕ್ಕಿಜ್ವರ ಕಾಣಿಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ಬಳಿಕ ಕ್ಷಿಪ್ರ ಕಾರ್ಯಪಡೆ ತಂಡ, ಪಶು ಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. 7,444 ಕೋಳಿ, 14,788 ಮೊಟ್ಟೆ, 2250 ಕೆಜಿ ಪೌಲ್ಟ್ರಿ ಆಹಾರ, ಕೋಳಿ ತ್ಯಾಜ್ಯವನ್ನು ಏ.15 ರಂದು ಪಶು ಸಂಗೋಪನಾ ಇಲಾಖೆಯು ನಿಯಮಾನುಸಾರ ವಿಲೇವಾರಿ ಮಾಡಿತ್ತು.
ಅಗತ್ಯ ಮುನ್ನೆಚ್ಚರಿಕೆ:
ಈ ಬಗ್ಗೆ ‘ಕನ್ನಡ ಪ್ರಭ’ದೊಂದಿಗೆ ಮಾತನಾಡಿದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ ನಿರ್ದೇಶಕ ಡಾ.ಪಿ.ಶ್ರೀನಿವಾಸ್, ‘ಹೆಸರಘಟ್ಟದ ಪೌಲ್ಟ್ರಿ ಫಾರಂನಲ್ಲಿ ಹಕ್ಕಿಜ್ವರ ಖಚಿತವಾಗಿದ್ದು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. 7,444 ಕೋಳಿ ಮತ್ತು ಕೋಳಿ ತ್ಯಾಜ್ಯವನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.
‘ಬಾಧಿತ ಪೌಲ್ಟ್ರಿ ಫಾರಂ ಬಯಲು ಪ್ರದೇಶದಲ್ಲಿದ್ದು ಒಂದು ಕಿ.ಮೀ. ಸುತ್ತಳತೆಯಲ್ಲಿ ಯಾವುದೇ ಹಳ್ಳಿಗಳಿಲ್ಲ. ಆದ್ದರಿಂದ ಹಳ್ಳಿಗಳು ಅಥವಾ ಪೌಲ್ಟ್ರಿ ಫಾರಂಗಳಿಗೆ ತೆರಳಿ ಕೋಳಿಗಳನ್ನು ನಾಶ ಮಾಡುವ ಅಗತ್ಯವಿಲ್ಲ. 1 ರಿಂದ 10 ಕಿ.ಮೀ. ವ್ಯಾಪ್ತಿಯೊಳಗೆ ಕಣ್ಗಾವಲು ಪ್ರದೇಶ ಎಂದು ಗುರುತಿಸಲಿದ್ದು 15 ದಿನಗಳಿಗೊಮ್ಮೆ ರ್ಯಾಂಡಮ್ ಆಗಿ ಪರೀಕ್ಷೆ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.
‘ಎಲ್ಲೆಲ್ಲಿ ನಾಟಿ ಕೋಳಿಗಳು, ಫಾರಂ ಕೋಳಿಗಳು, ಎಲ್ಲೆಲ್ಲಿ ಖಾಸಗಿ ಫಾರಂಗಳಿವೆಯೋ ಅಲ್ಲಿಗೆ ತೆರಳಿ ಸ್ಯಾಂಪಲ್ ಸಂಗ್ರಹಿಸಲಾಗುವುದು. ಅದನ್ನು 15 ದಿನಗಳಿಗೊಮ್ಮೆ ಸತತವಾಗಿ ಎರಡು ತಿಂಗಳು ಭೂಪಾಲ್ನಲ್ಲಿರುವ ಲ್ಯಾಬ್ಗೆ ಪರೀಕ್ಷೆ ನಡೆಸಲು ಕಳುಹಿಸುತ್ತೇವೆ. ನೆಗೆಟಿವ್ ಬಂದರೆ ನೆಗೆಟಿವ್ ಎಂದು ಘೋಷಣೆ ಮಾಡುತ್ತೇವೆ’ ಎಂದು ತಿಳಿಸಿದರು.
54 ಚಿಕನ್ ಸೆಂಟರ್, 36 ಹಳ್ಳಿ ಗುರುತು:
ಬಾಧಿತ ಪ್ರದೇಶದ ಸುತ್ತಮುತ್ತ 54 ಚಿಕನ್ ಸೆಂಟರ್, 36 ಹಳ್ಳಿಗಳನ್ನು ಗುರುತಿಸಲಾಗಿದೆ. ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಪಂಗಳ ಪಿಡಿಓಗಳಿಗೆ ಸೂಚಿಸಲಾಗಿದೆ. ಹೆಸರಘಟ್ಟದಲ್ಲಿ ಕೆರೆ ಇರುವುದರಿಂದ ಹಕ್ಕಿಗಳ ಮೂಲಕ ಜ್ವರ ಬಂದಿದೆ. ಇಲಾಖೆ ಸಚಿವರು. ಆಯುಕ್ತರು, ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಸದ್ಯ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.