ಕನ್ನಡಪ್ರಭ ವಾರ್ತೆ ಮಂಗಳೂರು
ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ 2021ರ ಫೆಬ್ರವರಿಯಲ್ಲಿ ಜಾರಿಗೊಳಿಸಲಾದ ಆಸ್ತಿ ತೆರಿಗೆ ಹೆಚ್ಚಳವನ್ನು ಆ ಸಂದರ್ಭದಲ್ಲಿ ಬಿಜೆಪಿಯ ತ್ರಿಬಲ್ ಎಂಜಿನ್ ಸರ್ಕಾರ ಇದ್ದರೂ ಮಾತನಾಡಿಲ್ಲ, ಈಗ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವುದು ಬಿಜೆಪಿಯ ಇಬ್ಬಗೆಯ ನೀತಿಗೆ ಸಾಕ್ಷಿಯಾಗಿದೆ ಎಂದು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಆರೋಪಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಚರಿತ್ರೆಯಲ್ಲೇ ಮೊದಲ ಬಾರಿಗೆ ಖಾಲಿ ಜಾಗಕ್ಕೂ ತೆರಿಗೆ ಹಾಕುವ ಮೂಲಕ ಅಂಗಳಕ್ಕೂ ತೆರಿಗೆ ಕಟ್ಟುವ ಪರಿಸ್ಥಿತಿ ನಿರ್ಮಿಸಲಾಗಿದೆ.
ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ತೆರಿಗೆ ಹೆಚ್ಚಳಕ್ಕೆ ಸಂಬಂಧಿಸಿ 2021ರ ಫೆಬ್ರವರಿ 19ರಂದು ರಾಜ್ಯ ಸರ್ಕಾರದಿಂದ ನಿರ್ದೇಶನ ಬಂದಿರುವ ಬಗ್ಗೆ ಆಗಿನ ಮೇಯರ್ ಪ್ರಸ್ತಾಪಿಸಿದ್ದರು.
ಪಾಲಿಕೆಯ ಸಾಮಾನ್ಯ ಪರಿಷತ್ನಲ್ಲಿ ಈ ಬಗ್ಗೆ ಚರ್ಚೆಯಾದಾಗ ಪ್ರತಿಪಕ್ಷವಾದ ಕಾಂಗ್ರೆಸ್ ಖಾಲಿ ಜಾಗಕ್ಕೆ ತೆರಿಗೆ ಹಾಕಿದರೆ ಜನಸಾಮಾನ್ಯರಿಗೆ ತೊಂದರೆ ಆಗಲಿದೆ ಎಂದು ವಿರೋಧ ವ್ಯಕ್ತಪಡಿಸಿತ್ತು.
ಆ ಸಂದರ್ಭ ಅಂದಿನ ಮೇಯರ್ ಮೌನವಾಗಿದ್ದರು. ಇದೀಗ ಮೇಯರ್ ಅವರು ಗುರುವಾರ ಮಾಧ್ಯಮಕ್ಕೆ ಮಾಹಿತಿ ನೀಡಿ, ಆಸ್ತಿ ತೆರಿಗೆಗೆ ಸಂಬಂಧಿಸಿ ಚರ್ಚಿಸಲು ಸಭೆ ಕರೆಯಲಾಗಿದ್ದು, ಪ್ರತಿಪಕ್ಷದವರು ಭಾಗವಹಿಸಿದ್ದರು ಎಂದು ಹೇಳಿದ್ದಾರೆ. ನಾವು ಸಭೆಗಾಗಿ ಹೋಗಿದ್ದರೂ ವಿರೋಧಿಸಿ ಹೊರನಡೆದಿದ್ದೆವು ಎಂದು ಪ್ರವೀಣ್ ಚಂದ್ರ ಆಳ್ವ ಹೇಳಿದರು.
ಕಾಂಗ್ರೆಸ್ ಸರ್ಕಾರದಿಂದ ಪಾಲಿಕೆ ತೆರಿಗೆ ಹೆಚ್ಚಳ ಜಾಸ್ತಿ ಮಾಡಲಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ನಮ್ಮ ಜತೆಗೆ ನೇರಾ ನೇರಾ ಸಂವಾದಕ್ಕೆ ಬರಲಿ. ದಾಖಲೆಗಳೊಂದಿಗೆ ನಾವು ಉತ್ತರ ನೀಡಲು ತಯಾರಿದ್ದೇವೆ ಎಂದು ಪಾಲಿಕೆ ಸದಸ್ಯ ವಿನಯರಾಜ್ ಸವಾಲು ಹಾಕಿದರು.
ಪಾಲಿಕೆ ಸದಸ್ಯರಾದ ಶಶಿಧರ ಹೆಗ್ಡೆ, ಲ್ಯಾನ್ಸಿಲಾಟ್ ಪಿಂಟೋ, ಅಬ್ದುಲ್ ರವೂಫ್, ನವೀನ್ ಡಿಸೋಜಾ, ಅನಿಲ್ ಪೂಜಾರಿ, ಕೇಶವ ಮರೋಳಿ, ಸಂಶುದ್ದೀನ್, ಝೀನತ್ ಸಂಶುದ್ದೀನ್ ಮತ್ತಿತರರಿದ್ದರು.