ಬ್ಯಾಡಗಿ: ತಾಲೂಕು ಪ್ರಾಥಮಿಕ ಸಹಕಾರಿ ಸಂಘ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರ ಚುನಾವಣೆಯಲ್ಲಿ ಬ್ಯಾಡಗಿ ತಾಲೂಕು ಬಿನ್ ಸಾಲಗಾರ ಮತಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಿದ್ಧಲಿಂಗಪ್ಪ ಪಟ್ಟಣಶೆಟ್ಟಿ ಆಯ್ಕೆಯಾದರು. ಶಾಸಕರ ಬಡಾವಣೆ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಜರುಗಿದ ಚುನಾವಣೆಯಲ್ಲಿ ಸಿದ್ಧಲಿಂಗಪ್ಪ ಪಟ್ಟಣಶೆಟ್ಟಿ 71 ಮತಗಳನ್ನು ಪಡೆದು 15 ಮತಗಳ ಅಂತರದಿಂದ ಗೆಲುವು ಪಡೆದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಉದಯ ಚೌಧರಿ 56 ಮತ ಪಡೆದು ಪರಾಭವಗೊಂಡರು. ನೂತನ ಸದಸ್ಯರಿಗೆ ಅಭಿನಂದಿಸಿದ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರ ಅವಿರತ ಶ್ರಮದಿಂದ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯುವುದರಲ್ಲಿ ಅನುಮಾನವಿಲ್ಲ, ಆಯ್ಕೆಯಾದ ಸದಸ್ಯರು ಪಕ್ಷಕ್ಕೆ ಶಕ್ತಿಯನ್ನು ತುಂಬುವಂತಹ ಕೆಲಸ ಮಾಡಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳು ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಬೇಕು, ಪ್ರತಿಯೊಬ್ಬರು ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸುವಂತೆ ಸಲಹೆ ನೀಡಿದರು. ಈ ವೇಳೆ ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರು, ಮುಖಂಡರಾದ ಸುರೇಶ ಯತ್ನಳ್ಳಿ, ಸಿದ್ದಯ್ಯ ಹಿರೇಮಠ, ದ್ಯಾಮನಗೌಡ್ರ ಪೂಜಾರ, ಕೆಂಪೇಗೌಡ, ಮಹದೇವಪ್ಪ ಶಿಡೇನೂರ, ಹಾಲೇಶ ಜಾಧವ, ಸುರೇಶ ಉದ್ಯೋಗಣ್ಣನವರ, ನಿಂಗಪ್ಪ ಬಟ್ಟಲಕಟ್ಟಿ, ವಿನಯ ಹಿರೇಮಠ, ವಿಷ್ಣುಕಾಂತ ಬೆನ್ನೂರು, ಪ್ರದೀಪ ಜಾಧವ, ಜಗದೀಶ ಕೆರಕರ, ಜ್ಯೋತಿ ಕುದರಿಹಾಳ, ಯಶೋಧರ ಅರ್ಕಾಚಾರಿ, ಸುರೇಶ ಕುಡಿಕೇರ, ವಿಜಯ ಮಾಳಗಿ ಹಾಗೂ ಇತರರಿದ್ದರು.10 ಕ್ಷೇತ್ರಗಳ ಮತ ಎಣಿಕೆ ಸ್ಥಗಿತ: ಒಟ್ಟು 14 ಸ್ಥಾನಗಳಲ್ಲಿ ಬ್ಯಾಡಗಿ ತಾಲೂಕು ಬಿನ್ ಸಾಲಗಾರ ಮತಕ್ಷೇತ್ರ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಮೋಟೆಬೆನ್ನೂರ ಬ್ಯಾಡಗಿ ಮತ್ತು ಅಳಲಗೇರಿ ಸಾಲಗಾರ ಮತಕ್ಷೇತ್ರದಲ್ಲಿ ಅವಿರೋಧ ಆಯ್ಕೆ ನಡೆದಿದೆ. ಇನ್ನುಳಿದ 10 ಸ್ಥಾನಗಳ ಮತ ಎಣಿಕೆಗೆ ಧಾರವಾಡ ವಿಭಾಗೀಯ ಹೈಕೋರ್ಟ ಪೀಠವು ತಡೆ ಯಾಜ್ಞೆ ನೀಡಿದ್ದರಿಂದ ಕೋರ್ಟನ ಆದೇಶದ ಬಳಿಕವಷ್ಟೇ ಮತ ಎಣಿಕೆ ನಡೆಸಲಾಗುವುದು ಅಲ್ಲಿಯವರೆಗೂ ಸ್ಥಳೀಯ ಉಪ ಖಜಾನೆಯಲ್ಲಿ ಮತಪೆಟ್ಟಿಗೆಗಳನ್ನು ಭದ್ರಪಡಿಸಲಾಗಿದೆ ಎಂದು ಚುನಾವಣಾಧಿಕಾರಿ ಜಿ.ಬಿ.ಲೋಕೇಶ ಪತ್ರಿಕೆಗೆ ತಿಳಿಸಿದರು.