ಕನ್ನಡಪ್ರಭ ವಾರ್ತೆ ರಾಮನಾಥಪುರ
ರಾಮನಾಥಪುರದಲ್ಲಿ ಮಂಗಳವಾರ ಸಂಕ್ರಾಂತಿ ದಿನದಂದು ಮೂಲಸ್ಥಾನ ಸಂಕ್ರಾಂತಿ ಮಂಟಪದಲ್ಲಿ ಶ್ರೀ ರಾಮೇಶ್ವರಸ್ವಾಮಿ, ಶ್ರೀ ಸುಬ್ರಹ್ಮಣ್ಯಸ್ವಾಮಿ, ಅಘಸ್ಥೇಶ್ವರಸ್ವಾಮಿ ಉತ್ಸವ ಮೂರ್ತಿಗಳನ್ನು ದೇವಾಲಯದಿಂದ ಅಡ್ಡೆಯ ಮೇಲೆ ತಂದು ಸಂಕ್ರಾಂತಿ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಿ, ಪೂಜಾ ಕೈಂಕರ್ಯ ನೆರವೇರಿಸಿದ ನಂತರ ಸಂಕ್ರಾಂತಿ ಮಂಟಪದಿಂದ ಮೆರವಣಿಗೆಯಲ್ಲಿ ಪಟ್ಟಣದ ದೇವಾಲಯದ ರಸ್ತೆಯಲ್ಲಿ ತರಲಾಯಿತು. ಈ ಸಂದರ್ಭದಲ್ಲಿ ಇಲ್ಲಿಯ ಭಕ್ತರು ಹಣ್ಣು ಕಾಯಿ ಪೂಜೆ ಮಾಡಿಸಿದರು. ಕೆಲವು ಭಕ್ತರು ಇಡುಗಾಯಿ ಹಾಕಿ ದೇವರ ದರ್ಶನ ಪಡೆದ ನಂತರ ಉತ್ಸವ ಮೂರ್ತಿಗಳು ತಮ್ಮ ದೇವಾಲಯಕ್ಕೆ ಸಾಗಿದವು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಂದು ಇಲ್ಲಿಯ ಕಾವೇರಿ ನದಿಯಲ್ಲಿ ಭಕ್ತರು ಸ್ನಾನ ಮಾಡಿ ನಂತರ ಇಲ್ಲಿಯ ಶ್ರೀ ಸುಬ್ರಹ್ಮಣ್ಯಸ್ವಾಮಿ, ಅಗಸ್ಥೇಶ್ವರ, ಪಟ್ಟಾಭಿರಾಮ, ರಾಮೇಶ್ವರ ದೇವಾಲಯಗಳಲ್ಲಿ ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.