ಹಳಿಯಾಳ: ಮುಂಬರಲಿರುವ ತಾಪಂ, ಜಿಪಂ, ಪೌರ ಸಂಸ್ಥೆಗಳ ಚುನಾವಣೆಯನ್ನು ಎದುರಿಸಲು ಕಾರ್ಯಕರ್ತರು ಸಜ್ಜಾಗಿರಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಕರೆ ನೀಡಿದರು.
ಕಾಂಗ್ರೆಸ್ ಜನವಿರೋಧಿ ನೀತಿಗಳಿಂದ ಹಾಗೂ ದುರಾಡಳಿತದಿಂದ ಜನ ಬೇಸತ್ತಿದ್ದು, ಬಿಜೆಪಿಯನ್ನು ಅಧಿಕಾರದಲ್ಲಿ ತರಲು ಹಾತೊರೆಯುತ್ತಿದ್ದಾರೆ. ಅದಕ್ಕಾಗಿ ನಾವು ಜನತೆಯ ವಿಶ್ವಾಸದಂತೆ ಕಾರ್ಯವನ್ನು ಮಾಡುತ್ತಾ ಪಕ್ಷವನ್ನು ಸಂಘಟಿಸೋಣ ಎಂದರು.
ಮಾಜಿ ವಿಪ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ, ತಾಲೂಕಿನ ಸೊಸೈಟಿ ಚುನಾವಣೆಯಲ್ಲಿ ಬಹುಮತವನ್ನು ಪಡೆದಿರುವ ಬಿಜೆಪಿ ಮುಂಬರಲಿರುವ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ಸಂಪೂರ್ಣವಾಗಿ ವಿಜಯ ಸಾಧಿಸಲಿದೆ. ಹಳಿಯಾಳ ವಿಧಾನ ಭಾ ಕ್ಷೇತ್ರದಲ್ಲಿ ಪಕ್ಷವು ಬಲಾಢ್ಯವಾಗಿದ್ದು, ನಾವೆಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆಯ ಕಾರ್ಯದಲ್ಲಿ ತೊಡಗಿದ್ದೇವೆ ಎಂದರು.ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಪಕ್ಷದ ತತ್ವ ಸಿದ್ಧಾಂತಗಳು, ಕಾರ್ಯಕರ್ತರಲ್ಲಿ ಸಮನ್ವಯತೆಯ ಬಗ್ಗೆ ಹೇಳಿದರು.
ಜಿಲ್ಲಾ ಕಾರ್ಯದರ್ಶಿ ನಂದು ಗಾಂವಕರ, ಶಿವಾಜಿ ನರಸಾನಿ, ಜಿಲ್ಲಾ ಬಿಜೆಪಿ ವಿಶೇಷ ಆಹೌನಿತ ಅನಿಲ್ ಮುತ್ನಾಳೆ, ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿ ಗಣಪತಿ ಕರಂಜೇಕರ, ಹಿರಿಯರಾದ ಮಂಗೇಶ ದೇಶಪಾಂಡೆ, ಜಿಲ್ಲಾ ಯುವಮೊರ್ಚಾ ಉಪಾಧ್ಯಕ್ಷ ಸಿದ್ದು ಶೆಟ್ಟಿ, ಮಂಡಲ ಅಧ್ಯಕ್ಷ ವಿಠ್ಠಲ ಸಿದ್ಧಣ್ಣನವರ, ಪ್ರಧಾನ ಕಾರ್ಯದರ್ಶಿ ವಿ.ಎಂ.ಪಾಟೀಲ, ಸಂತೋಷ ಘಟಕಾಂಬ್ಳೆ, ಶಾಂತಾ ಹಿರೇಕರ ಇದ್ದರು.ಮಾಜಿ ಶಾಸಕ ಸುನೀಲ ಮನೆಗೆ ಭೇಟಿ:
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಜಿಲ್ಲಾ ಬಿಜೆಪಿ ನಿಯೋಗವು ಮಾಜಿ ಶಾಸಕ ಸುನೀಲ ಹೆಗಡೆ ನಿವಾಸಕ್ಕೆ ಭೇಟಿ ನೀಡಿ, ಮಾತೃ ವಿಯೋಗದಿಂದ ದುಖಿಃತರಾದ ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ಧರ್ಮಪತ್ನಿಯ ನಿಧನದಿಂದ ನೊಂದಿರುವ ಮಾಜಿ ವಿಪ ಸದಸ್ಯ ವಿ.ಡಿ. ಹೆಗಡೆ ಅವರನ್ನು ಭೇಟಿಯಾಗಿ ಸಂತೈಸಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಹಾಗೂ ಇತರರು ಇದ್ದರು.