ಕನ್ನಡಪ್ರಭ ವಾರ್ತೆ ಮಂಗಳೂರು
ಆಪರೇಶನ್ ಸಿಂದೂರ ಹಿನ್ನೆಲೆಯಲ್ಲಿ ವಿದೇಶಗಳಿಗೆ ತೆರಳಿದ ಸರ್ವಪಕ್ಷಗಳ ನಿಯೋಗದಲ್ಲಿ ಭಾಗವಹಿಸಿ ಮಂಗಳೂರಿಗೆ ಆಗಮಿಸಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳೂರಿನ ಜಿಲ್ಲಾ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಅಭಿನಂದನಾ ಕಾರ್ಯಕ್ರಮ ನೆರವೇರಿತು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಆಪರೇಶನ್ ಸಿಂದೂರ ಮೂಲಕ ವಿಶ್ವದ ಯಾವುದೇ ದೇಶ ಮಾಡದ ಕಾರ್ಯಾಚರಣೆಯನ್ನು ಭಾರತೀಯ ಸೇನೆ ಮಾಡಿದೆ. ಪಾಕ್ ಪ್ರೇರಿತ ಉಗ್ರವಾದದ ವಿರುದ್ಧ ಆಪರೇಶನ್ ಸಿಂದೂರ ನಡೆಸಲಾಗಿದೆ. ವೃತ್ತಿಪರತೆಯುಳ್ಳ ಸೇನೆ, ಪ್ರಧಾನಿ ಮೋದಿ ಅವರ ಜವಾಬ್ದಾರಿಯುತ ನಾಯಕತ್ವದಿಂದ ಈ ಯಶಸ್ವಿ ಕಾರ್ಯಾಚರಣೆ ಸಾಧ್ಯವಾಗಿದೆ ಎಂದರು.ಮುಂದೆ ದೇಶದಲ್ಲಿ ಭಯೋತ್ಪಾದನಾ ಕೃತ್ಯ ನಡೆದರೆ ಭಾರತ ಸೂಕ್ತ ಉತ್ತರ ನೀಡಲಿದೆ. ಅದರ ಭಾಗವಾಗಿ ಆಪರೇಶನ್ ಸಿಂದೂರ ನಡೆಸಲಾಗಿದೆ. ಈ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ. ಭಾರತದಲ್ಲಿ ಪಾಕ್ಪ್ರೇರಿತ ಭಯೋತ್ಪಾದನೆಯ ಅಸಲಿಯತ್ತನ್ನು ಜಗತ್ತಿಗೆ ಮನವರಿಕೆ ಮಾಡುವಲ್ಲಿ ವಿದೇಶಕ್ಕೆ ತೆರಳಿದ ಭಾರತದ ಸರ್ವಪಕ್ಷಗಳ ನಿಯೋಗ ಯಶಸ್ವಿಯಾಗಿದೆ ಎಂದು ಅವರು ಹೇಳಿದರು. ನನಗೆ ಮಾಡಿದ ಈ ಸನ್ಮಾನವನ್ನು ದೇಶದ ಸೈನಿಕರಿಗೆ, ಪ್ರಧಾನಿಗೆ ಅರ್ಪಿಸುತ್ತೇನೆ ಎಂದರು. ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದೇಶಕ್ಕೆ ತೆರಳಿದ ಸರ್ವಪಕ್ಷಗಳ ನಿಯೋಗದಲ್ಲಿ ದಕ್ಷಿಣ ಕನ್ನಡ ಸಂಸದರಿಗೆ ಅವಕಾಶ ದೊರೆತಿರುವುದು ಜಿಲ್ಲೆಗೆ ಗೌರವ ತಂದುಕೊಟ್ಟಿದೆ. ಕ್ಯಾ. ಚೌಟ ಅವರ ಸಾಮರ್ಥ್ಯವನ್ನು ಗುರುತಿಸಿ ಕೇಂದ್ರ ಸರ್ಕಾರ ಈ ಅವಕಾಶ ನೀಡಿದೆ ಎಂದರು.ಅಭಿನಂದನಾ ಭಾಷಣ ಮಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ವಿದೇಶಕ್ಕೆ ನುಗ್ಗಿ ಹೊಡೆಯುವ ಸಾಮರ್ಥ್ಯ ಭಾರತೀಯ ಸೇನೆಗೆ ಇದೆ ಎಂಬುದು ಆಪರೇಶನ್ ಸಿಂದೂರ ಮೂಲಕ ಸಾಬೀತಾಗಿದೆ. ಸರ್ವಪಕ್ಷಗಳ ನಿಯೋಗದಲ್ಲಿ ನಮ್ಮ ಸಂಸದರು ಭಾಗವಹಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ದೊಡ್ಡ ಜವಾಬ್ದಾರಿಯನ್ನು ಸಂಸದರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದರು.ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಹರೀಶ್ ಪೂಂಜಾ, ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು, ಮಾಜಿ ಸಚಿವ ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್ ಇದ್ದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನೀಲ್ ಆಳ್ವ ಸ್ವಾಗತಿಸಿದರು. ಪೂಜಾ ಪೈ ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ನಿರೂಪಿಸಿದರು..........ಸುಹಾಸ್ ಕುಟುಂಬಕ್ಕೆ 25 ಲಕ್ಷ ರು. ಠೇವಣಿ ಪತ್ರ ಹಸ್ತಾಂತರ
ಈ ಸಂದರ್ಭ ಬಜಪೆಯಲ್ಲಿ ಹತ್ಯೆಯಾದ ಸುಹಾಸ್ ಶೆಟ್ಟಿ ಕುಟುಂಬಕ್ಕೆ ರಾಜ್ಯ ಬಿಜೆಪಿ ವತಿಯಿಂದ 25 ಲಕ್ಷ ರು.ಗಳ ಠೇವಣಿ ಮೊತ್ತದ ಪತ್ರವನ್ನು ಅವರ ಹೆತ್ತವರಿಗೆ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಸ್ತಾಂತರಿಸಿದರು.