ಲೋಕಸಭೆ ಚುನಾವಣೆ । ಅಭ್ಯರ್ಥಿ ಗಂಗಾಧರ್ ಬಹುಜನ್ ರೋಡ್ ಶೋ
ಕಳೆದ ೭೦ ವರ್ಷಗಳ ಕಾಲ ಕಾಂಗ್ರೆಸ್, ಬಿಜೆಪಿ, ಜನತಾದಳಗಳಿಗೆ ಮತ ನೀಡಿದ್ದೀರಿ, ಆದರೆ ಎಲ್ಲರಿಗೆ ಇದುವರೆಗೂ ಭೂಮಿಯನ್ನು ಸಮಾನವಾಗಿ ಹಂಚಿಕೆ ಮಾಡಿಲ್ಲ, ಮಕ್ಕಳಿಗೆ ಉದ್ಯೋಗಗಳನ್ನು ಸೃಷ್ಟಿ ಮಾಡಿಲ್ಲ, ಎಲ್ಲಾ ಸಮಾಜದ ಬಡವರಿಗೆ ಉಚಿತ ಆರೋಗ್ಯ ಸೇವೆಯನ್ನು ಒದಗಿಸಿಲ್ಲ ಈ ಮೂರು ಪಕ್ಷಗಳು ಬಡವರ ವಿರೋಧಿಯಾಗಿವೆ ಎಂದು ಬಿಎಸ್ಪಿ ಪಕ್ಷ ರಾಜ್ಯ ಉಸ್ತುವಾರಿ ಮಂಡ್ಯ ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಶ್ರೀ ಆಂಜನೇಯ ದೇವಸ್ಥಾನದ ಮುಂಭಾಗ ಬಿಎಸ್ಪಿ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ,ಜೆಡಿಎಸ್ ಪಕ್ಷಗಳನ್ನು ತಿರಸ್ಕಾರ ಮಾಡಿ ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾದ ಗಂಗಾಧರ್ ಬಹುಜನ್ ಅವರಿಗೆ ಮತ ನೀಡುವ ಮೂಲಕ ಎಲ್ಲರ ಸೇವೆ ಮಾಡುವ ಅವಕಾಶವನ್ನು ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿದರು.ಪಟ್ಟಣದ ಬೀದಿಗಳಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಗಂಗಾಧರ್ ಬಹುಜನ್ ರೋಡ್ ಶೋ ನಡೆಸಿದರು. ಈ ವೇಳೆ ಮಾತನಾಡಿ, ‘ಹಾಸನ ಜಿಲ್ಲೆಯಲ್ಲಿ ಇದುವರೆಗೂ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಯಾವೊಬ್ಬ ಅಭ್ಯರ್ಥಿಯೂ ಕಾರ್ಮಿಕರು, ರೈತರು, ದಲಿತರು, ಹಿಂದುಳಿದವರು, ಧಾರ್ಮಿಕ ಅಲ್ಪಸಂಖ್ಯಾತರ ಪರವಾಗಿ ಯಾವುದೇ ತರಹದ ಹೋರಾಟವನ್ನು ನಡೆಸಿಲ್ಲ, ಹಾಸನ ಜಿಲ್ಲೆಯಲ್ಲಿ ಇದುವರೆಗೂ ಮತಗಳನ್ನು ನೀಡುತ್ತ ಬಂದಿರುವ ಸಮಸ್ತ ಮತದಾರರ ಹಿತವನ್ನು ಕಾಯುವುದರಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದಾರೆ. ಇಂತಹ ಅಭಿವೃದ್ಧಿ ವಿರೋಧಿ ಅಭ್ಯರ್ಥಿಗಳನ್ನು ತಿರಸ್ಕಾರ ಮಾಡಿ’ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಾಕಿರ್ ಹುಸೇನ್, ಜಾಕೀರ್ ಅಲಿಖಾನ್, ಶಿವಮ್ಮ, ಅತ್ನಿ ಹರೀಶ್ ಮಾತನಾಡಿದರು.
ಬಿಎಸ್ಪಿ ಪಕ್ಷದ ಝಾಕೀರ್ ಹುಸೇನ್, ಝಾಕೀರ್ ಆಲಿಖಾನ್, ಹರೀಶ್, ಶಿವಮ್ಮ, ತಾಲೂಕು ಅಧ್ಯಕ್ಷ ಸಿ.ಜಿ. ಸೋಮಶೇಖರ್, ರಾಜು ಕುಂದೂರು, ಸಿದ್ದಲಿಂಗಯ್ಯ, ನಂಜುಂಡಸ್ವಾಮಿ, ಸುರೇಂದ್ರ, ರೂಪ, ಆಟೋ ಲಕ್ಷ್ಮಣ್, ಆನಂದ್, ಉಮೇಶ್ ಇತರರು ಹಾಜರಿದ್ದರು.ಚನ್ನರಾಯಪಟ್ಟಣದ ಶ್ರೀ ಆಂಜನೇಯ ದೇವಸ್ಥಾನದ ಮುಂಭಾಗ ಬಿಎಸ್ಪಿ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಬಿಎಸ್ಪಿ ರಾಜ್ಯ ಉಸ್ತುವಾರಿ ಮಂಡ್ಯ ಕೃಷ್ಣಮೂರ್ತಿ ಉದ್ಘಾಟಿಸಿದರು.