ಕನ್ನಡಪ್ರಭ ವಾರ್ತೆ ಬೆಂಗಳೂರು
ಸೋಮವಾರ ರಜೆ ಘೋಷಿಸುವಂತೆ ವಿಪಕ್ಷ ನಾಯಕ ಆರ್.ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ರಜೆ ನೀಡುವಂತೆ ಕೇಳಿದ್ದರು, ಆದರೆ ಸಿದ್ದರಾಮಯ್ಯ ರಜೆ ನೀಡುವುದಿಲ್ಲ ಎಂದಿದ್ದಕ್ಕೆ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ.
ಧಾರವಾಡದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕಾಂಗ್ರೆಸ್ಸಿಗರಿಗೆ ಶ್ರೀರಾಮನ ಶಾಪ ತಟ್ಟದೇ ಇರದು ಎಂದು ಕಿಡಿ ಕಾರಿದ್ದಾರೆ. ಕೊಪ್ಪಳದ ಆಂಜನಾದ್ರಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ದೇಶವೇ ರಾಮನತ್ತ ಚಿತ್ತ ಹರಿಸುತ್ತಿದೆ. ಆದರೆ, ರಜೆ ನೀಡಲು ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿರುವುದು ವಿಷಾದನೀಯ. ರಾಜ್ಯದಲ್ಲಿರುವುದು ಶ್ರೀರಾಮ ವಿರೋಧಿ ಸರ್ಕಾರ ಎಂದು ಜರಿದರು.ಮಡಿಕೇರಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ದೇಶದ ಹಲವೆಡೆ ಸೋಮವಾರ ರಜೆ ನೀಡಲಾಗಿದೆ. ಆದರೆ, ಕರ್ನಾಟಕ ಸರಕಾರ ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ. ಇವರಿಗೆ ರಾಮಭಕ್ತಿಗಿಂತ ಓಟಿನ ರಾಜಕಾರಣ ಮುಖ್ಯ. ಸಿದ್ದರಾಮಯ್ಯನವರು ನನ್ನ ಹೆಸರಿನಲ್ಲೂ ರಾಮ ಇದ್ದಾನೆ ಎಂದು ಹೇಳುತ್ತಾರೆ. ಆದರೆ, ಅವರು ರಾಮಭಕ್ತ ಅಲ್ಲ ರಹೀಂ ಭಕ್ತ ಎಂದು ವಾಗ್ದಾಳಿ ನಡೆಸಿದರು.