ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲುವಿನಲ್ಲಿ ಈಚೆಗೆ ಶಾಂತಿ ಕದಡುವ ಉದ್ದೇಶದಿಂದ ಹಿಂದೂ ಸಮಾಜೋತ್ಸವದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿತ್ತು. ನಂತರ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿರುವ ಅವರು ಮತ್ತೆ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶಾಂತಿ ಕದಡುವ ಪೋಸ್ಟ್ ಮಾಡಿದ್ದಾರೆ. ಇಂತಹ ಸಮಾಜಘಾತುಕ ಶಕ್ತಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಅಥವಾ ಜಾಮೀನು ನಿರಾಕರಿಸಿ ಮತ್ತೆ ಜೈಲಿಗಟ್ಟಬೇಕು ಎಂದು ಆಗ್ರಹಿಸಿದರು.
ನಾಪೋಕ್ಲು ಸರ್ಕಾರಿ ಕಾಲೇಜಿಗೆ ಸಂಬಂಧಪಟ್ಟ ಜಾಗದಲ್ಲಿ ಅನಧಿಕೃತವಾಗಿ ಅತಿಕ್ರಮಿಸಿ ಶಾದಿಮಹಲ್ ನಿರ್ಮಾಣಕ್ಕೆ ಮುಂದಾದ ಸಂದರ್ಭ ಭಾರತೀಯ ಜನತಾ ಪಾರ್ಟಿ ಪ್ರತಿಭಟಿಸಿತ್ತು. ಈ ಸಂದರ್ಭ ತಾತ್ಕಾಲಿಕವಾಗಿ ಕಾಮಗಾರಿಯನ್ನು ತಡೆ ಮಾಡಿ ಸರ್ವೆ ಕಾರ್ಯ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಅತಿಕ್ರಮಣದ ತೆರವು ಕಾರ್ಯ ಇಲ್ಲಿಯವರೆಗೆ ಆಗಿಲ್ಲ. ಈ ಎಲ್ಲ ಕೃತ್ಯಗಳು ಯಾರ ಕುಮ್ಮಕು ಮತ್ತು ಬೆಂಬಲದಿಂದ ನಡೆಯುತ್ತಿದೆ ಎಂಬುವುದನ್ನು ಜಿಲ್ಲೆಯ ಜನತೆ ಅರಿತುಕೊಳ್ಳಬೇಕಾಗಿದೆ ಎಂದರು.ಜನರಿಗೆ ಸಮಸ್ಯೆ ಆದಾಗ ಪ್ರತಿಭಟನೆ ಮಾಡುವುದು ಪ್ರತಿ ಪಕ್ಷದ ಕರ್ತವ್ಯ ಎಂದ ಅವರು, ಎಷ್ಟೋ ಜನರು ಆನೆ ದಾಳಿಗೆ ಸತ್ತರೂ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕೆ? ಸರ್ಕಾರದ ಗಮನ ಸೆಳೆಯಬಾರದೆ? ಎಂದು ಪ್ರಶ್ನಿಸಿದ ಅವರು, ನಾವು ಪ್ರತಿಭಟನೆ ಮಾಡಿದ್ದರಿಂದ ಅರಣ್ಯ ಸಚಿವರು ಎಚ್ಚೆತ್ತುಕೊಂಡು ಸಭೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿನ ಮುಖಂಡರನ್ನು ಒಳಗೊಂಡಂತೆ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಅಪ್ಪಚ್ಚುರಂಜನ್ ಮಾತನಾಡಿ, ಅನಿಲ ಉತ್ಪಾದನೆ ನಮ್ಮ ದೇಶದಲ್ಲಿ ಇಲ್ಲ. ಕೊಲ್ಲಿ ದೇಶದಲ್ಲಿ ಇಂದು ಯುದ್ಧ ನಡೆಯುತ್ತಿದ್ದರೂ ಚೈನಾಗೆ ಹೋಗುವ ಟ್ಯಾಂಕರ್ ನಮ್ಮಲ್ಲಿಗೆ ತರಿಸುವ ಪ್ರಯತ್ನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಇಂದು ರಸ್ತೆಯಲ್ಲಿ ಸಿಲಿಂಡರ್ ಇಟ್ಟು ಪ್ರತಿಭಟನೆ ಮಾಡುತ್ತಿದೆ ಎಂದು ಟೀಕಿಸಿದರು.
ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ ಮಾತನಾಡಿ, ಯುದ್ಧಕ್ಕೆ ನಾವು ಕಾರಣರಲ್ಲ. ಆದರೆ, ಮೋದಿ ಚಾಕ ಚಕ್ಯತೆಯಿಂದ ಇಂದು ಅನಿಲ, ತೈಲ ಭಾರತಕ್ಕೆ ಬರುವಂತಾಗಿದೆ. ದೇಶ ಸಂಕಷ್ಟದಲ್ಲಿದ್ದಾಗ ದೇಶದ ಪರ, ಸರ್ಕಾರದ ಪರ ಇರಬೇಕು. ಮೋದಿ ಅವರನ್ನು ಅಭಿನಂದಿಸುವ ಕೆಲಸವನ್ನು ಕಾಂಗ್ರೆಸ್ ಮಾಡಬೇಕಿತ್ತು. ಇಂದಿರಾ ಗಾಂಧಿ ಅವರನ್ನು ಯುದ್ಧದ ಸ್ಥಿತಿಯಲ್ಲಿ ವಾಜಪೇಯಿ ಶ್ಲಾಘಿಸಿದ್ದರು ಎಂದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಜೈನಿ, ಮಾದ್ಯಮ ಪ್ರಮುಖ್ ಸಜಿಲ್ ಕೃಷ್ಣ, ವಕ್ತಾರ ಅರುಣ್ ಕುಮಾರ್ ಉಪಸ್ಥಿತರಿದ್ದರು.