ಶಾಸಕ ಸತೀಶ ಸೈಲ್ ವಜಾ ಮಾಡಲು ಬಿಜೆಪಿ ಆಗ್ರಹ

KannadaprabhaNewsNetwork |  
Published : Oct 29, 2024, 12:49 AM IST
ಪೊಟೋ೨೭ಎಸ್.ಆರ್.ಎಸ್೬ (ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ) | Kannada Prabha

ಸಾರಾಂಶ

ಎರಡು ವರ್ಷಕ್ಕಿಂತ ಹೆಚ್ಚಿನ ಪ್ರಮಾಣದ ಶಿಕ್ಷೆಗೆ ಒಳಗಾಗುವ ಶಾಸಕರ ಸ್ಥಾನ ರದ್ದು ಆಗಬೇಕಾಗಿರುವುದರಿಂದ ತಕ್ಷಣ ವಿಧಾನಸಭಾಧ್ಯಕ್ಷರು, ಶಾಸಕ ಸತೀಶ ಸೈಲ್ ಅವರನ್ನು ವಜಾ ಮಾಡಿ ಕ್ರಮ ಕೈಗೊಳ್ಳಲಿ ಎಂದು ಎನ್.ಎಸ್. ಹೆಗಡೆ ಕರ್ಕಿ ಆಗ್ರಹಿಸಿದ್ದಾರೆ.

ಶಿರಸಿ: ಅಂಕೋಲಾದ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸತೀಶ ಸೈಲ್ ಅವರನ್ನು ಅಪರಾಧಿ ಎಂದು ಪರಿಗಣಿಸಿ ನ್ಯಾಯಾಲಯ ೭ ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. ನ್ಯಾಯಾಲಯದ ಈ ತೀರ್ಪನ್ನು ಉತ್ತರಕನ್ನಡ ಜಿಲ್ಲಾ ಬಿಜೆಪಿ ಸ್ವಾಗತಿಸುತ್ತದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅತ್ಯಂತ ಜವಾಬ್ದಾರಿಯುತ ಸ್ಥಾನವಾದ ಶಾಸಕರಾಗಿದ್ದುಕೊಂಡು, ಸರ್ಕಾರಕ್ಕೆ ವಂಚಿಸುವಂತವರಿಗೆ ಈ ತೀರ್ಪು ತಕ್ಕ ಪಾಠವಾಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನ್ಯಾಯಾಲಯದ ಮುಂದೆ ಎಲ್ಲರೂ ಒಂದೇ ಎಂಬ ಸಂದೇಶವನ್ನು ಈ ತೀರ್ಪು ಸಾರಿದೆ. ಇಂತಹ ತೀರ್ಪಿನಿಂದಾಗಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಮತ್ತು ಗೌರವ ಇನ್ನಷ್ಟು ಹೆಚ್ಚಾಗಲಿದೆ. ಅದಿರು ಕಳ್ಳ ಸಾಗಾಣಿಕೆಯಲ್ಲಿ ಕಾಂಗ್ರೆಸ್ ಶಾಸಕ ಸತೀಶ ಸೈಲ್ ದೋಷಿ ಆಗಿರುವುದು ದೃಢಪಟ್ಟಿದೆ ಮತ್ತು ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರು. ನಷ್ಟವಾಗಿದೆ. ಇಂತಹ ಗುರುತರ ಪ್ರಮಾದ ಎಸಗಿರುವ ವ್ಯಕ್ತಿ ಶಾಸಕ ಸ್ಥಾನದಲ್ಲಿ ಮುಂದುವರಿಯಬಾರದು.

ಕಾಂಗ್ರೆಸ್ ಎಂದಿನಂತೆ ತನ್ನ ಭ್ರಷ್ಟ ಶಾಸಕರ ಬೆಂಗಾವಲಾಗಿ ನಿಲ್ಲುವ ಧೋರಣೆ ಅನುಸರಿಸುತ್ತಿದೆ. ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ ಎಂಬುದನ್ನೇ ನೆಪ ಮಾಡಿಕೊಂಡು ಅಪರಾಧಿ ಶಾಸಕರು ಜವಾಬ್ದಾರಿಯಲ್ಲಿ ಮುಂದುವರಿಯುವುದಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಡುವುದು ಕ್ಷೇತ್ರದ ಜನತೆಗೆ ಮಾಡುವ ದ್ರೋಹವಾಗುತ್ತದೆ.

ರಾಜ್ಯ ಸರ್ಕಾರ ಮತ್ತು ವಿಧಾನಸಭಾಧ್ಯಕ್ಷರು ಈ ಕೂಡಲೇ ಅಪರಾಧಿ ಶಾಸಕರನ್ನು ಅನರ್ಹಗೊಳಿಸಬೇಕು. ಎರಡು ವರ್ಷಕ್ಕಿಂತ ಹೆಚ್ಚಿನ ಪ್ರಮಾಣದ ಶಿಕ್ಷೆಗೆ ಒಳಗಾಗುವ ಶಾಸಕರ ಸ್ಥಾನ ರದ್ದು ಆಗಬೇಕಾಗಿರುವುದರಿಂದ ತಕ್ಷಣ ವಿಧಾನಸಭಾಧ್ಯಕ್ಷರು, ಶಾಸಕ ಸತೀಶ ಸೈಲ್ ಅವರನ್ನು ವಜಾ ಮಾಡಿ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.

ಸೈಲ್‌ಗೆ ಕಾನೂನು ಹೋರಾಟದಲ್ಲಿ ನ್ಯಾಯ ಸಿಗಲಿ: ಆನಂದ್

ಕಾರವಾರ: ಶಾಸಕ ಸತೀಶ ಸೈಲ್ ಜೈಲಿಗೆ ಹೋಗಿರುವುದರಿಂದ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ತಮಗೆ ಒತ್ತಾಯ ಕೇಳಿಬರುತ್ತಿದೆ. ಆದರೆ ಸತೀಶ ಸೈಲ್ ಅವರಿಗೆ ಕಾನೂನಿನ ಹೋರಾಟದಲ್ಲಿ ನ್ಯಾಯ ದೊರಕಲಿ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದ್ದಾರೆ.

ಮಂಗಳೂರಿನಿಂದ ವೀಡಿಯೋ ಸಂದೇಶ ನೀಡಿರುವ ಆನಂದ್ ಅವರು, ಶಾಸಕ ಸೈಲ್ ನನ್ನ ಅಣ್ಣ. ಹಿಂದೆ ನಾವು ಅವರನ್ನು ಬೆಂಬಲಿಸಿ ಗೆಲ್ಲಿಸಿದ್ದೇನೆ. ಅವರು ಯಾವತ್ತೂ ನಮ್ಮ ಕುಟುಂಬದ ಪರವಾಗಿ ಇದ್ದವರು. ಅವರಿಗೆ ಶಿಕ್ಷೆ ಪ್ರಕಟವಾದ ಮೇಲೆ ಚುನಾವಣೆಗೆ ಸ್ಪರ್ಧಿಸುವಂತೆ ಹಲವು ನಾಯಕರು ಕರೆ ಮಾಡುತ್ತಿದ್ದಾರೆ. ಆದರೆ ಇನ್ನೂ ಕಾನೂನಿನ ಹೋರಾಟ ಅವರ ಮುಂದಿದೆ. ಯಾರೂ ಚುನಾವಣೆಯ ಬಗ್ಗೆ ಈ ಸಂದರ್ಭದಲ್ಲಿ ಮಾತನಾಡುವುದು ಬೇಡ. ದೇವರು ಆಶೀರ್ವದಿಸಿ ಸೈಲ್ ಅವರೇ ಶಾಸಕರಾಗಿ ಮುಂದುವರಿಯುವಂತಾಗಲಿ. ಈ ಹಂತದಲ್ಲಿ ಸ್ಪಲ್ಪ ತಾಳ್ಮೆ ಬೇಕು. ಎಲ್ಲರಿಗೂ ಎಂಎಲ್ಎ ಆಗಬೇಕು ಎಂದು ಆಸೆಯಿದೆ. ಶಾಸಕನಾಗಲು ದೇವರ ಹಾಗೂ ಜನರ ಆಶೀರ್ವಾದ ಬೇಕು ಎಂದೂ ಆನಂದ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!