-ಸಿಎಂ, ಡಿಸಿಎಂ ಹೆಸರಿಗೆ ಮಸಿ ಬಳಿಯುವ ಪ್ರಯತ್ನ: ಸಚಿವ ಎನ್.ಎಸ್.ಬೋಸರಾಜು ಲೇವಡಿ
ಕನ್ನಡಪ್ರಭ ವಾರ್ತೆ ರಾಯಚೂರು
ಬಿಜೆಪಿಯವರಿಗೆ ಮಾಡಲು ಏನು ಕೆಲಸವಿಲ್ಲ ಅದಕ್ಕಾಗಿಯೇ ಸರ್ಕಾರವನ್ನು ಅಸ್ಥಿತರಗೊಳಿಸುವ, ಸಿಎಂ ಹಾಗೂ ಡಿಸಿಎಂ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಲೇವಡಿ ಮಾಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಬೇಕಿಲ್ಲದವರು, ಜನರ ಸಮಸ್ಯೆ ಬೇಕಿಲ್ಲದವರು, ಕೇಂದ್ರದ ಮಲತಾಯಿ ಧೋರಣೆಯನ್ನು ಸರಿಪಡಿಸದವರು, ಮುಡಾ ಹಗರವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿಗರು ಆಗ್ರಹಿಸುತ್ತಿದ್ದಾರೆ. ಇದ್ದ ಸರ್ಕಾರವನ್ನು ತೆಗೆಯಬೇಕು, ಸಿಎಂ ಮತ್ತು ಡಿಸಿಎಂಗಳಿಗೆ ಮಸಿ ಬಳಿಯಬೇಕು, ಜನಾಭಿಪ್ರಾಯ ಬೇರೆಡೆ ಸೆಳೆಯಬೇಕು ಎನ್ನುವ ದುರುದ್ದೇಶದಿಂದ ಈ ಎಲ್ಲವನ್ನು ಮಾಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ನವರು ರಾಜ್ಯಪಾಲರನ್ನು ಅವರ ಕಚೇರಿಯನ್ನಾಗಿ ಮಾಡಿಕೊಂಡಿದ್ದು ಅದಕ್ಕಾಗಿಯೇ ಏನಾದರೊಂದು ಅಡ್ಡಿಪಡಿಸುತ್ತಿದ್ದಾರೆ. ವಿವಿಧ ರಾಜ್ಯಗಳಲ್ಲಿ ಸಹ ಬಿಜೆಪಿ ಇದನ್ನೇ ಮಾಡಿದೆ ಎಂದು ದೂರಿದರು.
ಬಿಜೆಪಿ ಮೂರ್ನಾಲ್ಕು ಗುಂಪುಗಳಾಗಿ ಒಡೆದಿದೆ. ಹೈಕಮಾಂಡ್ ಎದುರು ತಮ್ಮ ತಮ್ಮ ಅಸ್ಥಿತ್ವ ತೋರಿಸಲು ಅವರಲ್ಲಿಯೇ ಸ್ಪಧರ್ಧೆ ನಡೆದಿದೆ. ಬಿಜೆಪಿ ಒಳಜಗಳವನ್ನು ಬಿಡಿಸಲು ಆರ್ ಎಸ್ ಎಸ್ ಹೋಗುತ್ತಿದ್ದಾರೆ. ಇದರಿಂದಾಗಿ ಆ ಪಕ್ಷದಲ್ಲಿ ಯಾವ ಮಟ್ಟದ ಭಿಮ್ಮಾಭಿಪ್ರಾಯವಿದೆ ಎನ್ನುವುದು ತಿಳಿಯುತ್ತದೆ ಎಂದು ಹೇಳಿದರು.
ಮುಡಾ ಪ್ರಕರಣದಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ, ನಾವೆಲ್ಲ ಸಿಎಂ ಸಿದ್ದರಾಮಯ್ಯ ಅವರ ಹಿಂದೆ ಇದ್ದೇವೆ. ಕೋರ್ಟ್ ಸೂಚನೆಯಂತೆ ಲೋಕಾಯುಕ್ತದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಯಲಿದ್ದು, ಮೈಸೂರು ಎಸ್ಪಿ ತನಿಖೆ ಆರಂಭಿಸಿದ್ದು, ಅದರಲ್ಲಿ ಏನು ಬರುತ್ತದೆ ಎಂದು ನೋಡಿ ಮುಂದಿನ ನಿರ್ಧಾರಕ್ಕೆ ಬರಲಾಗುವುದು ಎಂದರು.----------------
27ಕೆಪಿಆರ್ಸಿಆರ್ 02 : ಸಚಿವ ಎನ್.ಎಸ್.ಬೋಸರಾಜು