ಹಾನಗಲ್ಲ: ಬಿಜೆಪಿ ಸರ್ಕಾರದಲ್ಲಿ ಸಿಲಿಂಡರ್ ಬೆಲೆ ಮೂರು ಪಟ್ಟು ಹೆಚ್ಚಾಯಿತು, ಪೆಟ್ರೋಲ್ ಬೆಲೆ ನೂರರ ಗಡಿ ದಾಟಿತು, ಪಡಿತರ ಅಕ್ಕಿ ೭ರಿಂದ ೫ ಕೆಜಿಗೆ ಇಳಿಯಿತು. ಬಡವರ ಆರ್ಥಿಕ ಶಕ್ತಿ ಕುಂದಿತು. ಅಚ್ಛೆ ದಿನ್ ಕನಸು ಬಿತ್ತಿ, ಮೋಸ ಮಾಡಿರುವ ಜನವಿರೋಧಿ ಬಿಜೆಪಿ ಇದೀಗ ಅದ್ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದೆ? ಎಂದು ಶಾಸಕ ಶ್ರೀನಿವಾಸ ಮಾನೆ ವಾಗ್ದಾಳಿ ನಡೆಸಿದರು.ಹಾನಗಲ್ಲ ತಾಲೂಕಿನ ಹಿರೂರು ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ೬೦ ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದೆ. ಬಡವರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ರೈತರು, ಕೂಲಿಕಾರರಿಗೆ ಭೂಮಿಯ ಮಾಲಿಕತ್ವ ನೀಡಿದೆ. ಬಸವಣ್ಣನ ಆಶಯದಂತೆ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ಕಲ್ಪಿಸಿ, ಆರ್ಥಿಕ ಶಕ್ತಿ ತುಂಬಿ, ಜತೆಗೆ ಕರೆದೊಯ್ಯುವ ಕೆಲಸ ಮಾಡಿದೆ. ಬಿಜೆಪಿಯ ಬಣ್ಣದ ಮಾತುಗಳಿಗೆ ಮರುಳಾಗಿದ್ದ ಜನ ಇದೀಗ ಪರಿತಪಿಸುತ್ತಿದ್ದಾರೆ ಎಂದರು.ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಗೀತಾ ಪೂಜಾರ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯ ಮೂಲಕ ಪ್ರತಿ ಕುಟುಂಬದ ಯಜಮಾನಿಗೆ ₹೨ ಸಾವಿರ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಯಿಂದ ಅಸಂಖ್ಯಾತ ಕುಟುಂಬಗಳಲ್ಲಿ ನೆಮ್ಮದಿ ಮೂಡಿದೆ. ವಾರ್ಷಿಕ ಒಂದು ಲಕ್ಷ ರು. ಆರ್ಥಿಕ ನೆರವು ನೀಡುವ ಮಹಾಲಕ್ಷ್ಮೀ ಯೋಜನೆಯ ಜಾರಿಗೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿ ಎಂದರು.ಇದೇ ಸಂದರ್ಭದಲ್ಲಿ ಮುಖಂಡರಾದ ನೂರಅಹ್ಮದ್ ಆಲೂರ, ಸೈಯದ್ರಫೀಕ್ ಹಳೆಕೋಟಿ, ಮಕ್ಬೂಲ್ಅಹ್ಮದ್ ಹಂಚಿನಮನಿ, ಮಹ್ಮದ್ಗೌಸ್ ಅರಳಿಮರದ ಸೇರಿದಂತೆ ಇನ್ನೂ ಹಲವರು ಕಾಂಗ್ರೆಸ್ ಸೇರ್ಪಡೆಯಾದರು.