ಅಂಬೇಡ್ಕರ್ ಅವರಿಗೆ ಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ । ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಚ್. ಆಂಜನೇಯ ಹೇಳಿಕೆ
ಹಿಂದೂಗಳ ಬಗ್ಗೆ, ಅಂಬೇಡ್ಕರ್ ವಿಷಯದಲ್ಲಿ ಬಿಜೆಪಿಯವರು ಸುಳ್ಳು ಹೇಳುತ್ತಾರೆ. ನಿಜವಾದ ಹಿಂದೂ ವಿರೋಧಿಗಳು ಬಿಜೆಪಿಗರು. ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಮಂತ್ರಿ ಮಾಡಿ ಗೌರವಿಸಿದ್ದು ಕಾಂಗ್ರೆಸ್ ಪಕ್ಷ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
ಮಂಗಳವಾರ ನಗರಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿಪಿ, ಟಿಎಸ್ಪಿ ಅನುದಾನ ತಂದಿದ್ದು ನಾನು. ಎಸ್ಸಿ ಹಾಗೂ ಎಸ್ಟಿ ಸಮಾಜದವರಿಗೆ ಅನುದಾನ ಬಳಕೆಯಾಗಿದೆ ಎಂದರು.ಉತ್ತರ ಕರ್ನಾಟಕದಲ್ಲಿ ಮಾದಿಗ ಸಮಾಜದವರಿಗೆ ಸ್ಥಾನ ನೀಡಿಲ್ಲ ಎಂಬ ವಿಚಾರ ಇದ್ದು, ಮುಂದಿನ ದಿನಗಳಲ್ಲಿ ಎಂಎಲ್ಸಿ ಇಲ್ಲವೇ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲಾಗುವುದು ಎಂದರು.
ಅಂಬೇಡ್ಕರ್ಗೆ ಕಾಂಗ್ರೆಸ್ ಗೌರವ:
ಅಂಬೇಡ್ಕರ್ ಅವರನ್ನು ಕರೆದು ಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಸಂವಿಧಾನ ಬರೆಯಲು ಅವಕಾಶ ಮಾಡಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿಗರು ಸುಳ್ಳುಗಳನ್ನ ಹೇಳಿ ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ. ದೇವರು, ಧರ್ಮದಂತಹ ವಿಷಯವನ್ನು ಮಾತ್ರ ಜನರ ತಲೆಯಲ್ಲಿ ತುಂಬುವ ಕೆಲಸ ಮಾಡುತ್ತಾರೆ ಎಂದರು.