ಬಿಜೆಪಿ ಜನಾಕ್ರೋಶ ಯಾತ್ರೆ ಕೇಂದ್ರದ ವಿರುದ್ಧ ಮಾಡಲಿ

KannadaprabhaNewsNetwork | Published : Apr 22, 2025 1:51 AM

ಸಾರಾಂಶ

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನಸಾಮಾನ್ಯರ ಜೀವನ ನಡೆಸಲು ಕಷ್ಟವಾಗುವಂತೆ ಬೆಲೆ ಏರಿಕೆ ಮಾಡಿದ್ದಾರೆ. ಇತ್ತಿಚೆಗೆ ಸಿಲಿಂಡರ್‌ ಬೆಲೆ ₹ 50 ಹೆಚ್ಚಿಸಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುವುದು ಸೂಕ್ತ.

ಕೊಪ್ಪಳ:

ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆ ರಾಜ್ಯ ಸರ್ಕಾರದ ವಿರುದ್ಧದ ಬದಲಾಗಿ ಕೇಂದ್ರ ಸರ್ಕಾರದ ವಿರುದ್ಧ ಮಾಡಲಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಹೊರೆಯಾಗುವ ರೀತಿ ರಾಜ್ಯ ಸರ್ಕಾರ ದರ ಏರಿಸಿಲ್ಲ. ರೈತರಿಗೆ ಹಣ ನೀಡಲು ಹಾಲಿನ ದರ ಹೆಚ್ಚಿಸಲಾಗಿದೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನಸಾಮಾನ್ಯರ ಜೀವನ ನಡೆಸಲು ಕಷ್ಟವಾಗುವಂತೆ ಬೆಲೆ ಏರಿಕೆ ಮಾಡಿದ್ದಾರೆ. ಇತ್ತಿಚೆಗೆ ಸಿಲಿಂಡರ್‌ ಬೆಲೆ ₹ 50 ಹೆಚ್ಚಿಸಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುವುದು ಸೂಕ್ತವೆಂದು ಹೇಳಿದರು. ರಾಜ್ಯ ಸರ್ಕಾರ ಹೆಚ್ಚಿಸಿರುವ ಬೆಲೆ ಇತರ ರಾಜ್ಯಗಳಿಗಿಂತ ಕಡಿಮೆ ಇದೆ ಎಂದು ಸಮರ್ಥಿಸಿಕೊಂಡದರು.

ಕಾರ್ಖಾನೆ ಆರಂಭವಾಗಲ್ಲ:

ನಗರದ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಬಿಎಸ್‌ಪಿಎಲ್‌ ಕಾರ್ಖಾನೆ ಯಾವುದೇ ಕಾರಣಕ್ಕೂ ಪ್ರಾರಂಭವಾಗಲ್ಲ. ಈ ಕುರಿತು ಸಿಎಂ ಹೇಳಿದ್ದಾರೆ. ಜತೆಗೆ ಕೈಗಾರಿಕೆ ಸಚಿವರು ಸಹ, ಸ್ಥಳೀಯರ ಸಮ್ಮತಿ ಇಲ್ಲದೆ ಕಾರ್ಖಾನೆ ಸ್ಥಾಪನೆಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ಕಾರ್ಖಾನೆ ಕಾಮಗಾರಿ ಪ್ರಾರಂಭಿಸಿರುವುದನ್ನು ಸ್ಥಗಿತಗೊಳಿಸಿದ್ದು ಅಲ್ಲಿ ಯಾವ ಕಾಮಗಾರಿ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಂಸದ ಸಂಗಣ್ಣ ಕರಡಿ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಕುರಿತು ಹೈಕಮಾಂಡ್‌ ನಿರ್ಧರಿಸಲಿದೆ. ನಾವು ಸಹ ಇವರಿಗೆ ಸೂಕ್ತ ಗೌರವ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ ಎಂದ ಅವರು, ನನಗೆ ಸಚಿವ ಸ್ಥಾನ ನೀಡುವುದು ಹೈಕಮಾಂಡ್‌ಗೆ ಬಿಟ್ಟಿರುವ ವಿಚಾರ ಎಂದರು.ನಾನು ಕಾಂಗ್ರೆಸ್ ಸೇರುವಾಗ ಯಾವುದೇ ಷರತ್ತು ವಿಧಿಸಿಲ್ಲ. ಹೀಗಾಗಿ ನಾನು ಏನನ್ನು ಕೇಳುವುದಿಲ್ಲ. ಬಿಜೆಪಿಯಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ನಾನು ಕಾಂಗ್ರೆಸ್ ಸೇರಬೇಕಾಯಿತು.

ಸಂಗಣ್ಣ ಕರಡಿ ಮಾಜಿ ಸಂಸದ

Share this article