ಕನ್ನಡಪ್ರಭ ವಾರ್ತೆ ಮಂಡ್ಯ
ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯ್ತಿಗಳ ಸದಸ್ಯರು, ಅಧಿಕಾರಿಗಳು ಮತ್ತು ನೌಕರರು ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಇಂಡುವಾಳು ಅವರು ಬೆಂಬಲ ಸೂಚಿಸಿ ಸೋಮವಾರ ಧರಣಿಯಲ್ಲಿ ಭಾಗಿಯಾಗಿದ್ದರು.ನಗರದ ಜಿಲ್ಲಾ ಪಂಚಾಯ್ತಿ ಕಚೇರಿ ಪಕ್ಕದ ಆವರಣದಲ್ಲಿ ನಡೆಯುತ್ತಿದ್ದ ಹೋರಾಟದಲ್ಲಿ ಭಾಗಿಯಾದ ಸಚ್ಚಿದಾನಂದ ಅವರು, ಪ್ರತಿಭಟನಾನಿರತರೊಂದಿಗೆ ಸಮಾಲೋಚಿಸಿ ಅವರ ಬೇಡಿಕೆಗಳು, ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಹೋರಾಟ ನಡೆಸುತ್ತಿರುವುದು ಸಮಂಜಸವಾಗಿದೆ ಎಂದರು.
ನಿಮ್ಮೊಂದಿಗೆ ಭಾರತೀಯ ಜನತಾ ಪಕ್ಷ ಸದಾ ಇರಲಿದೆ. ಈ ವಿಚಾರವಾಗಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತು ವಿಧಾನ ಪರಿಷತ್ನ ಪ್ರತಿಪಕ್ಷದ ಛಲವಾದಿ ನಾರಾಯಣಸ್ವಾಮಿ ಅವರೊಂದಿಗೆ ನಾನೂ ಕೂಡ ಮಾತನಾಡುತ್ತೇನೆ. ಗ್ರಾಪಂ ನೌಕರರ ಪರವಾಗಿ ನಿಲ್ಲಬೇಕು. ಪಂಚಾಯ್ತಿ ನೌಕರರ ಪರವಾಗಿ ಮೇಲ್ಮನೆ ಮತ್ತು ಕೆಳಮನೆಯಲ್ಲಿ ಹೋರಾಟ ನಡೆಸಬೇಕೆಂದು ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.ಇದು ಭಂಡಗೆಟ್ಟ ಮತ್ತು ತೊಘಲತ್ ಸರ್ಕಾರ. ಆರ್ಡಿಪಿಆರ್ ನೌಕರರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಅನಿರ್ಧಿಷ್ಟಾವಧಿ ಧರಣಿ ನಡೆಯುತ್ತಿದ್ದರೂ ಸಹ ಇಲಾಖಾ ಸಚಿವರು ಈವರೆಗೆ ಪ್ರತಿಭಟನಾನಿರತ ನೌಕರರನ್ನು ಭೇಟಿಯಾಗುವ ಸೌರ್ಜನ್ಯ ತೋರದೆ ಭಂಡತನ ಪ್ರದಶಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೇಷ್ಠತೆ ಆಧಾರದ ಮೇಲೆ ಗ್ರಾಪಂ ಅಧಿಕಾರಿಗಳು ಮತ್ತು ನೌಕರರಿಗೆ ಬಡ್ತಿ ನೀಡಬೇಕು. ಸೇವೆ ಕಾಯಂ ಮಾಡಬೇಕು. ನೀರಗಂಟಿಗಳು ಮತ್ತು ಪೌರಕಾರ್ಮಿಕರನ್ನು ವೈಜ್ಞಾನಿಕ ವೇತನ ನೀಡಬೇಕು. ಅವರಿಗೆ ಆತ್ಮಗೌರವ ಸಿಗುವಂತೆ ಸರಕಾರ ನಡೆದುಕೊಳ್ಳಬೇಕು. ಮಹಿಳಾ ನೌಕರರಿಗೆ ಒಂದು ವರ್ಷದವರೆಗೆ ಸಂಬಳ ಸಹಿತ ಹೆರಿಗೆ ರಜೆ ನೀಡಬೇಕು. ಹಿರಿಯ ಅಧಿಕಾರಿಗಳು ಕಿರುಕುಳ ಕೊಡಬಾರದು ಎಂದು ಆಗ್ರಹಿಸಿದರು.ಪಿಡಿಒ ಮತ್ತು ಕರ್ಯದರ್ಶಿ ಕನಿಷ್ಠ ಮರ್ನಾಲ್ಕು ವರ್ಷ ಒಂದೇ ಪಂಚಾಯ್ತಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ಇದರಿಂದ ಪಂಚಾಯಿತಿ ಅಭಿವೃದ್ಧಿಯಾಗಲಿದೆ. ಕೇರಳ ಮಾದರಿಯಲ್ಲಿ ವೇತನ/ಗೌರವಧನ ನೀಡಬೇಕು. ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಶಿಷ್ಟಾಚಾರದ ವ್ಯಾಪ್ತಿಗೆ ಬರಬೇಕು. ಸರಕಾರಿ ಯೋಜನೆಗಳ ಶಿಲಾನ್ಯಾಸ, ಉದ್ಘಾಟನೆಯ ಫಲಕಗಳಲ್ಲಿ ಅವರ ಹೆಸರನ್ನು ಹಾಕಬೇಕು. ಒಟ್ಟಾರೆ ಪಂಚಾಯ್ತಿ ನೌಕರರ ಸಮಸ್ಯೆಗಳಿಗೆ ಸರಕಾರ ಕಿವಿಯಾಗಬೇಕೆಂದು ಆಗ್ರಹಿಸಿದರು.